ಕಾರವಾರ: ಕಂಟೇನರ್ ಲಾರಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 1,600 ಲೀಟರ್ ಸ್ಪಿರಿಟ್ ಅನ್ನು ರಾಜ್ಯ ಅಬಕಾರಿ ಪೊಲೀಸರು ಮಾಜಾಳಿಯಲ್ಲಿ ಶನಿವಾರ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಲಾರಿ ಚಾಲಕನನ್ನು ಬಂಧಿಸಿದ್ದಾರೆ.
ಗೋವಾ ಕಡೆ ಸಾಗುತ್ತಿದ್ದ ಲಾರಿಯಲ್ಲಿ ಗಾಜಿನ ಖಾಲಿ ಬಾಟಲಿಗಳನ್ನು ಸಾಗಣೆ ಮಾಡಲಾಗುತ್ತಿತ್ತು. ಅದರ ಮಧ್ಯೆ ಪ್ಲಾಸ್ಟಿಕ್ ಕ್ಯಾನ್ನಲ್ಲಿ ಗ್ರೇಪ್ ಸ್ಪಿರಿಟ್ ಇಡಲಾಗಿತ್ತು. ಅಬಕಾರಿ ಚೆಕ್ಪೋಸ್ಟ್ನಲ್ಲಿ ಪೊಲೀಸರು ಪರಿಶೀಲನೆ ಮಾಡಿದಾಗ ಅಕ್ರಮ ಸಾಗಣೆ ಬಯಲಾಯಿತು. ಲಾರಿಯ ಚಾಲಕ, ಉತ್ತರ ಪ್ರದೇಶದ ಮಹಮ್ಮದ್ ದಾನಿಶ್ (26) ಎಂಬುವವನ್ನು ಬಂಧಿಸಿದ್ದಾರೆ. ಲಾರಿಯೂ ಸೇರಿ ಒಟ್ಟು ₹ 22.79 ಲಕ್ಷದ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಬಕಾರಿ ಇಲಾಖೆ ಉಪ ಆಯುಕ್ತ ಶಿವನಗೌಡ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ಗಳಾದ ಈ.ಐ.ಭೋವಿ, ಸಿಬ್ಬಂದಿ ಎಸ್.ಎಸ್.ನಾಗೇಕರ್, ಗಣೇಶ ನಾಯ್ಕ, ಕೆ.ಆರ್.ಪಾವಸ್ಕರ್, ರೇಣುಕಾ ಪಿ.ಬಂಟ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.