ಶಿರಸಿ: ನಗರದ ಯಲ್ಲಾಪುರ ನಾಕಾ ಸಮೀಪ ಆಶಾಪ್ರಭು ಆಸ್ಪತ್ರೆ ಬಳಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಚರಂಡಿಗೆ ಖಾಸಗಿಯವರು ನಿರ್ಮಿಸಿದ್ದ ತಡೆಗೋಡೆಯನ್ನು ತೆರವುಗೊಳಿಸುವಂತೆ ಇಲ್ಲಿನ ನ್ಯಾಯಾಲಯದ ಆದೇಶಿಸಿದೆ. ನ್ಯಾಯಾಲಯದ ಆದೇಶದನ್ವಯ ಶುಕ್ರವಾರ ನಗರಸಭೆ ತಡೆಗೋಡೆಯನ್ನು ತೆರವುಗೊಳಿಸಿತು.
’ಹಲವಾರು ವರ್ಷಗಳಿಂದ ಇದ್ದ ಚರಂಡಿಗೆ ಕಟ್ಟೆ ಕಟ್ಟಿದ್ದರಿಂದ ಮಳೆ ನೀರು ಸರಾಗವಾಗಿ ಹರಿಯದೇ, ರಸ್ತೆ ಮೇಲೆ ನಿಲ್ಲುವ ಜತೆಗೆ, ಮನೆಗಳಿಗೆ ನುಗ್ಗುತ್ತಿತ್ತು. ಈ ಸಂಬಂಧ ಸ್ಥಳೀಯರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಪ್ರಗತಿನಗರದಲ್ಲಿ ಮಂಜೂರಾದ ₹ 9 ಕೋಟಿ ವೆಚ್ಚದ ಚರಂಡಿ ಕಾಮಗಾರಿ ಮುಗಿಯುವವರೆಗೆ ಈ ಮೊದಲು ನೀರು ಹರಿಯುತ್ತಿದ್ದ ಕಾಲುವೆಯಲ್ಲೇ ನೀರು ಹರಿಯಲು ಅವಕಾಶ ಮಾಡಿ ಕೊಡಬೇಕು. ಚರಂಡಿಗೆ ಕಟ್ಟಿದ ತಡೆಗೋಡೆ ಒಡೆಯಬೇಕು ಎಂದು ಆದೇಶಿಸಿದೆ. ಈ ಕಾರಣ 50ಕ್ಕೂ ಹೆಚ್ಚು ಪೊಲೀಸರ ಭದ್ರತೆಯಲ್ಲಿ ತಡೆಗೋಡೆ ತೆರವುಗೊಳಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.