ADVERTISEMENT

ಬಿಳಿಹೊಳೆ ಸೇತುವೆ ನಿರ್ಮಾಣಕ್ಕೆ ಒತ್ತಾಯ

ಮಳೆಗಾಲದಲ್ಲಿ ‘ಭಾರ’ವಾಗುವ ಹಗುರಮನೆ ಗ್ರಾಮಸ್ಥರ ಬದುಕು

​ಪ್ರಜಾವಾಣಿ ವಾರ್ತೆ
Published 11 ಜೂನ್ 2022, 13:09 IST
Last Updated 11 ಜೂನ್ 2022, 13:09 IST
ವಾನಳ್ಳಿ ಗ್ರಾಮ ಪಂಚಾಯ್ತಿಯ ಹಗುರಮನೆ ಗ್ರಾಮದಲ್ಲಿ ಕಾಲುಸಂಕ ದಾಟಿ ಶಾಲೆಗೆ ತೆರಳುತ್ತಿರುವ ಬಾಲಕ
ವಾನಳ್ಳಿ ಗ್ರಾಮ ಪಂಚಾಯ್ತಿಯ ಹಗುರಮನೆ ಗ್ರಾಮದಲ್ಲಿ ಕಾಲುಸಂಕ ದಾಟಿ ಶಾಲೆಗೆ ತೆರಳುತ್ತಿರುವ ಬಾಲಕ   

ಶಿರಸಿ: ತಾಲ್ಲೂಕಿನ ವಾನಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಗುರಮನೆ, ಮೇಲಿನ ಗದ್ದೆ ಗ್ರಾಮಗಳ ಜನರಿಗೆ ಮಳೆಗಾಲದ ವೇಳೆ ರಸ್ತೆ ಸಂಪರ್ಕ ಸಮಸ್ಯೆ ಎದುರಾಗುತ್ತಿದೆ. ವರ್ಷದ ಎಂಟು ತಿಂಗಳು ರಭಸದಿಂದ ಹರಿಯುವ ಬಿಳಿಹೊಳೆಗೆ ಸೇತುವೆ ನಿರ್ಮಿಸುವಂತೆ ಒತ್ತಾಯಿಸಿದ್ದಾರೆ.

ಈ ಎರಡೂ ಗ್ರಾಮದಲ್ಲಿ ಸುಮಾರು 31 ಕುಟುಂಬಗಳಿದ್ದು, ನೂರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಈ ಗ್ರಾಮದ 18 ವಿದ್ಯಾರ್ಥಿಗಳು ಸಮೀಪದ ಶಾಲೆ, ಪಟ್ಟಣದ ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಮಳೆಗಾಲದ ಅವಧಿಯೂ ಸೇರಿದಂತೆ ಡಿಸೆಂಬರ್‌ವರೆಗೂ ಗ್ರಾಮಸ್ಥರು ಹೊರಗಿನ ಸಂಪರ್ಕ ಸಾಧಿಸಲು ಕಷ್ಟವಾಗುತ್ತಿದೆ.

‘ಮಳೆಗಾಲದ ಪೂರ್ವದಲ್ಲಿ ಮುಂದಿನ 8 ತಿಂಗಳಿಗೆ ಅವಶ್ಯವಾದ ಆಹಾರ ಸಾಮಗ್ರಿ, ಕೃಷಿ ಚಟುವಟಿಕೆ ಪೂರಕವಾದ ಸಾಮಗ್ರಿ ದಾಸ್ತಾನಿಟ್ಟುಕೊಳ್ಳುತ್ತೇವೆ. ಈ ಅವಧಿಯಲ್ಲಿ ಗ್ರಾಮಕ್ಕೆ ಯಾವುದೇ ವಾಹನ ಬರಲು ಸಾಧ್ಯವಾಗದು. ಕಾಲ್ನಡಿಗೆಯಲ್ಲಿ ತೆರಳಬೇಕೆಂದರೆ ಕಾಲುಸಂಕ ದಾಟಿ ಹೋಗಬೇಕಾಗುತ್ತದೆ. ರೋಗಿಗಳನ್ನು ಕರೆದೊಯ್ಯಲು, ವಿದ್ಯಾರ್ಥಿಗಳು ಸಾಗಲು ತೊಡಕು ಉಂಟಾಗುತ್ತಿದೆ’ ಎನ್ನುತ್ತಾರೆ ಗ್ರಾಮಸ್ಥರು.

ADVERTISEMENT

‘ಗ್ರಾಮಕ್ಕೆ ಹಿಂದೆ ಮಂಜೂರಾಗಿದ್ದ ಸೇತುವೆಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಸರ್ವಋತು ರಸ್ತೆ ನಿರ್ಮಿಸಿದರೆ ಅನುಕೂಲ ಆಗಲಿದೆ. ಈ ಬಗ್ಗೆ ಹಲವಾರು ಬಾರಿ ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿದ್ದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ’ ಎನ್ನುತ್ತಾರೆ ಗ್ರಾಮಸ್ಥರಾದ ನಾರಾಯಣ ಗೌಡ, ಗೌರಿ ಗೌಡ, ಸವಿತಾ ಗೌಡ ಇತರರು.

‘ಸ್ವಾತಂತ್ರ್ಯ ದೊರೆತು ಏಳುವರೆ ದಶಕ ಕಳೆದರೂ ಹಿಂದುಳಿದ ಪ್ರದೇಶದ ಮೂಲಭೂತ ಸೌಕರ್ಯದಿಂದ ಗ್ರಾಮವು ವಂಚಿತವಾಗಿರುವುದು ಖೇದಕರ. ಈ ಗ್ರಾಮದ ಸೌಕರ್ಯಕ್ಕಾಗಿ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ರವೀಂದ್ರ ನಾಯ್ಕ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.