ADVERTISEMENT

‘ಹಂದಿ ಕಾಟ ನಿಯಂತ್ರಿಸಲು ಐಬೆಕ್ಸ್ ಬೇಲಿ’

ಕಾಡುಪ್ರಾಣಿಗಳ ಹಾವಳಿ ತಪ್ಪಿಸಲು ಸೂಕ್ತ ಕ್ರಮಕ್ಕಾಗಿ ಮೇಲಧಿಕಾರಿಗಳಿಗೆ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 16:30 IST
Last Updated 8 ನವೆಂಬರ್ 2019, 16:30 IST

ಕಾರವಾರ:ಅಂಕೋಲಾ ಮತ್ತು ಕುಮಟಾ ತಾಲ್ಲೂಕಿನ ಗಡಿಭಾಗದ ನಾಗೂರು, ಬ್ರಹ್ಮೂರು ಗ್ರಾಮಗಳಲ್ಲಿ ಕಾಡುಹಂದಿಗಳ ಹಾವಳಿ ನಿಯಂತ್ರಿಸಲು ತಂತಿ ಬೇಲಿ ಹಾಗೂ ಸೌರ ವಿದ್ಯುತ್ ಬೇಲಿ ಅಳವಡಿಸಬಹುದು. ಇದಕ್ಕೆ ಅರಣ್ಯ ಇಲಾಖೆಯಿಂದಲೂ ಸಬ್ಸಿಡಿ ನೀಡಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ನ.7ರಂದು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ‘ಹಂದಿ ಕಾಟದಿಂದ ಜನ ಕಂಗಾಲು’ ಸುದ್ದಿಗೆ ಸ್ಪಂದಿಸಿದಹಿರೇಗುತ್ತಿ ವಲಯ ಅರಣ್ಯಾಧಿಕಾರಿ ಜಿ.ವಿ.ರಮೇಶ ಈ ಬಗ್ಗೆ ಮಾಹಿತಿ ನೀಡಿದರು.

‘ಹಂದಿಗಳ ಹಾವಳಿ ಅತಿಯಾಗುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ.ಕಾಡುಪ್ರಾಣಿಗಳು ರಸ್ತೆಯ ಮೇಲೆ ಓಡಾಡುವುದು ಈಚೆಗೆ ಸಾಮಾನ್ಯವಾಗಿದೆ. ಮಿರ್ಜಾನಿನಿಂದ ಬ್ರಹ್ಮೂರಿನವರೆಗಿನ 12 ಕಿಲೋಮೀಟರ್ ರಸ್ತೆಯಲ್ಲಿ ಹಂದಿ, ಚಿರತೆ, ಕಡವೆಗಳು ಕಾಣಿಸಿಕೊಂಡ ಬಗ್ಗೆ ಕೇಳಿದ್ದೇವೆ. ಆದರೆ, ಕಾಡುಹಂದಿಗಳು ಗುಂಪುಗುಂಪಾಗಿ ವಾಹನಗಳಿಗೆ ಡಿಕ್ಕಿ ಹೊಡೆಯುವುದು, ದಾಳಿ ಮಾಡಲು ಯತ್ನಿಸುವುದು ಆತಂಕಕಾರಿ ವಿಷಯವಾಗಿದೆ. ಇದರ ನಿಯಂತ್ರಣಕ್ಕೆಇಲಾಖೆಯಿಂದ ಸಾಧ್ಯವಾದ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಭರವಸೆ ನೀಡಿದ್ದಾರೆ.

ADVERTISEMENT

ಬ್ರಹ್ಮೂರು, ಕಬಗಾಲ ಗ್ರಾಮಗಳಿಗೆ ಗಸ್ತು ತಿರುಗುವ ಕತಗಾಲ ಉಪವಲಯ ಅರಣ್ಯಾಧಿಕಾರಿ ಹೂವಣ್ಣ ಗೌಡ ಪ್ರತಿಕ್ರಿಯಿಸಿ, ‘ವನ್ಯಜೀವಿಗಳು ರಸ್ತೆಗೆ ಬರದಂತೆ ತಡೆಯಲು ಚೈನ್‌ಲಿಂಕ್ ಅಥವಾ ತಂತಿಬೇಲಿಗಳನ್ನು ಹಾಕಬಹುದು.ಈ ಗ್ರಾಮೀಣ ರಸ್ತೆಯು12 ಕಿಲೋಮೀಟರ್‌ವ್ಯಾಪ್ತಿಯವರೆಗೆಇದೆ.ಹಾಗಾಗಿ ಇದುಕಡಿಮೆ ಖರ್ಚಿನಲ್ಲಿ ಮುಗಿಯುವಂಥದ್ದಲ್ಲ. ಇದು ಸರ್ಕಾರದ ಮಟ್ಟದಲ್ಲಿ ಆಗಬೇಕಿದೆ.ಟೆಂಡರ್ ಪ್ರಕ್ರಿಯೆಯೂ ನಡೆಯಬೇಕು’ ಎಂದರು.

‘ಈ ಮೊದಲು ಕುಮಟಾ ತಾಲ್ಲೂಕಿನ ಬರಗದ್ದೆ ಭಾಗಗಳಲ್ಲಿ ಇದೇ ರೀತಿ ಸಮಸ್ಯೆ ಬಗೆಹರಿಸಲಾಗಿತ್ತು. ಈ ಗ್ರಾಮದಲ್ಲೂ ತಂತಿಬೇಲಿ ಹಾಕಿ ಕಾಡುಪ್ರಾಣಿಗಳು ರಸ್ತೆಗಿಳಿಯದಂತೆ ತಡೆಯಲು ಮೇಲಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಹೇಳಿದರು.

ಹಿನ್ನೆಲೆ: ಭಾನುವಾರ ಸಂಜೆ ಬ್ರಹ್ಮೂರು ಮಾರ್ಗದಲ್ಲಿ ಸಂತೆಗದ್ದೆ ಬಳಿ ಹಂದಿಗಳು ಬೈಕ್‌ಗೆ ಡಿಕ್ಕಿ ಹೊಡೆದಿದ್ದವು. ಇದರಿಂದ ಇಬ್ಬರು ಗಾಯಗೊಂಡಿದ್ದರು. ಅವರ ಮೇಲೆ ಮರಿ ಹಂದಿಯೊಂದು ದಾಳಿ ಮಾಡಲು ಯತ್ನಿಸಿತ್ತು. ಪ್ರಾಣಾಪಾಯದಿಂದ ಕೂಗಿಕೊಂಡಾಗ ಸಮೀಪದಲ್ಲಿದ್ದ ನಿವಾಸಿಗರು ಬಂದು ಕಾಪಾಡಿದ್ದರು. ಕೆಲವು ದಿನಗಳ ಹಿಂದೆಯೂ ಕಬಗಾಲಿನ ಇಬ್ಬರು ಇದೇ ರೀತಿ ಗಾಯಗೊಂಡಿದ್ದರು. ಒಂದೆರಡು ತಿಂಗಳಿಂದ ಸಂಜೆ ನಂತರ ಪ್ರತಿ ನಿತ್ಯ ಕಾಡುಹಂದಿಗಳು ರಸ್ತೆಯಲ್ಲೇ ಅಡ್ಡಾಡುತ್ತಿರುತ್ತವೆ ಎಂದು ಗ್ರಾಮಸ್ಥರುತಿಳಿಸಿದ್ದರು.

ಕೃಷಿಕರಿಗೆ ಶೇ 50ರಷ್ಟು ಸಬ್ಸಿಡಿ:ಕಡಕೋಡ, ಬ್ರಹ್ಮೂರು, ಕಬಗಾಲ, ಗಡಗಾರ್ ಮುಂತಾದ ಗ್ರಾಮಗಳಲ್ಲಿ ರೈತರು ಅಡಿಕೆ, ತೆಂಗು, ಬಾಳೆಯನ್ನು ಬೆಳೆಯುತ್ತಿದ್ದಾರೆ. ಆದರೆ ಶೇ 90ರಷ್ಟುರೈತರುಕಾಡು ಹಂದಿಯ ಉಪಟಳ ಎದುರಿಸುತ್ತಿದ್ದಾರೆ. ಸಣ್ಣ ಅಡಿಕೆ ಗಿಡದ ಎಳೆ ಗರಿ ಮತ್ತು ಬಾಳೆ ಗಿಡಗಳನ್ನು ಸಿಗಿದು ಧ್ವಂಸ ಮಾಡುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿದಅರಣ್ಯಾಧಿಕಾರಿಜಿ.ವಿ.ರಮೇಶ, ‘ಕೃಷಿಕರು ತಮ್ಮ ತೋಟಗಳಿಗೆ ಹಂದಿ ನುಗ್ಗದಂತೆ ತಡೆಯಲು ಸೋಲಾರ್ ಐಬೆಕ್ಸ್‌ಗಳನ್ನು ಹಾಕಿಕೊಳ್ಳಬಹುದು. ಇದಕ್ಕೆ ಅರಣ್ಯ ಇಲಾಖೆಯಿಂದ ಶೇ 50ರಷ್ಟು ಸಬ್ಸಿಡಿ ಕೂಡ ಇದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.