ಹಳಿಯಾಳ: ‘ಜಿ+2 ಫಲಾನುಭವಿಗಳು ತಮಗೆ ಮನೆ ಬೇಡವೆಂದು ನಿರಾಕರಿಸಿ ಅರ್ಜಿ ಸಲ್ಲಿಸಿದಾಗ ಆಶ್ರಯ ಸಮಿತಿಯಲ್ಲಿ ಠರಾಯಿಸಿದಂತೆ ಅವರ ವಂತಿಗೆಯನ್ನು ಕೂಡಲೇ ಪಾವತಿಸಿ. ಈ ಬಗ್ಗೆ ಪುರಸಭೆ ಸಿಬ್ಬಂದಿ, ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗಿದ್ದು ಕಂಡು ಬಂದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ಇಲ್ಲಿನ ಪುರಸಭೆ ಸಭಾ ಭವನದಲ್ಲಿ ಈಚೆಗೆ ನಡೆದ ಆಶ್ರಯ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿ +2 ಯೋಜನೆ ಅಡಿಯಲ್ಲಿ ಮನೆ ಬೇಡವೆಂದು ನಿರಾಕರಿಸಿದ 31 ಫಲಾನುಭವಿಗಳ ವಂತಿಕೆ ಹಣವನ್ನು ತಮಗೆ ಮರು ಪಾವತಿಸಬೇಕೆಂದು ಫಲಾನುಭವಿಗಳು ಬೇಡಿಕೆ ಇಟ್ಟಿದ್ದ ಬಗ್ಗೆ ಸಭೆಯಲ್ಲಿ ಪುರಸಭೆ ಅಧಿಕಾರಿಗಳು ತಿಳಿಸಿದಾಗ, ಈ ಬಗ್ಗೆ ವಂತಿಗೆ ಹಣ ಮರು ಪಾವತಿಸುವ ಬಗ್ಗೆ ನಿರ್ಣಯಿಸಿ ನಂತರ ಮಾತನಾಡಿದರು.
‘ಅರ್ಹ ಫಲಾನುಭವಿಗಳಿಗೆ ಮನೆಯನ್ನು ನೀಡಿ, ಹೊರತು ಯಾವುದೇ ರೀತಿಯಿಂದ ಅರ್ಹತೆ ಇಲ್ಲದವರಿಗೆ ಮನೆ ನೀಡಬೇಡಿ. ಸರ್ಕಾರದ ಯೋಜನೆಗಳು ಸದುಪಯೋಗ ಆಗಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಕಾರ್ಯ ಮಾಡಬೇಕು’ ಎಂದರು.
ಆಶ್ರಯ ಸಮಿತಿಯ ಠರಾವುಗಳನ್ನು ಹಾಗೂ ಮತ್ತಿತರ ಖಾಸಗಿ ಒಡೆತನದ ಮಂಜೂರಾತಿಯ ಬಗ್ಗೆ ಚರ್ಚಿಸಲಾಯಿತು.
ಪುರಸಭೆ ಅಧ್ಯಕ್ಷೆ ದ್ರೌಪದಿ ಅಗಸರ, ಆಶ್ರಯ ಸಮಿತಿಯ ಸದಸ್ಯ ಉಮೇಶ ಬೋಳಶೆಟ್ಟಿ, ಇಜಾಜ ಅಹ್ಮದ ಮುಗದ, ರಾಜಶ್ರೀ ಬಾಳೆಕುಂದ್ರಿ, ಅಣ್ಣಪ್ಪಾ ವಡ್ಡರ ಹಾಗೂ ಪುರಸಭೆಯ ಅಧಿಕಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.