ಕಾರವಾರ: ಕುಮಟಾ ತಾಲ್ಲೂಕಿನ ಬಂಗಣೆಯಲ್ಲಿ ಗುರುವಾರ ತಡರಾತ್ರಿ, ಹೆಂಡತಿ ಮತ್ತು ಮಗನನ್ನು ಕೊಂದು ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಕಿ ಮರಾಠಿ (35) ಹಾಗೂ ಲಕ್ಷ್ಮಣ ಮರಾಠಿ (12) ಕೊಲೆಯಾದವರು. ರಾಮ ಮರಾಠಿ (40) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಾಮ ಮರಾಠಿ ಕೊಂಚ ಮಾನಸಿಕ ಅಸ್ವಸ್ಥನಾಗಿದ್ದು, ಕಾಯಿಲೆಗೆ ತಂದ ಔಷಧಿ ಸೇವಿಸುತ್ತಿರಲಿಲ್ಲ. ಗುರುವಾರವೂ ಮದ್ಯ ಕುಡಿದ ಅಮಲಿನಲ್ಲಿದ್ದ ಆತ, ಮನೆಯ ಜಗುಲಿಯಲ್ಲಿ ಮಲಗಿದ್ದ ಹೆಂಡತಿಗೆ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾನೆ. ಅಮ್ಮನ ಮೇಲೆ ಕತ್ತಿಯಿಂದ ಹಲ್ಲೆ ಮಾಡುತ್ತಿರುವುದನ್ನು ಕಂಡ ಮಗ ಲಕ್ಷ್ಮಣ ಕಿರುಚಿಕೊಂಡು ಓಡಿದ್ದ. ಅವನನ್ನು ಅಟ್ಟಿಸಿಕೊಂಡು ಹೋದ ಅಪ್ಪನೇ ಕೊಲೆ ಮಾಡಿದ್ದಾನೆ. ಹಿರಿಯ ಮಗ ಭಾಸ್ಕರ ಮರಾಠಿ (15) ಓಡಿ ತಪ್ಪಿಸಿಕೊಂಡಿದ್ದಾನೆ.
ಈ ಪ್ರದೇಶವು ತಾಲ್ಲೂಕು ಕೇಂದ್ರದಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿದೆ. ಕೃತ್ಯವು ಶುಕ್ರವಾರ ಗೊತ್ತಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.