ಕಾರವಾರ: ಮೃತಪಟ್ಟ ತಾಯಿಯ ಚಿತೆಗೆ ಬೆಂಕಿ ಇಟ್ಟು ಮಗನೂ ಪ್ರಾಣಬಿಟ್ಟ ಹೃದಯ ವಿದ್ರಾವಕ ಘಟನೆ ತಾಲ್ಲೂಕಿನ ಸಿದ್ಧರದಲ್ಲಿ ನಡೆದಿದೆ.
ಮಂಜುನಾಥ ಆತ್ಮಾರಾಮ ಕೊಳಂಬಕರ್ (49) ದಾರುಣ ಅಂತ್ಯ ಕಂಡವರು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರ ತಾಯಿ ಸಾವಿತ್ರಿ ಕೊಳಂಬಕರ್, ಮಂಗಳವಾರ ಮುಂಜಾನೆ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆಂದು ಸ್ಮಶಾನಕ್ಕೆ ಕೊಂಡೊಯ್ಯಲಾಗಿತ್ತು. ಏಕೈಕ ಮಗನಾಗಿದ್ದ ಮಂಜುನಾಥ್ ಎಲ್ಲ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿದ್ದರು. ಚಿತೆಗೆ ಬೆಂಕಿ ಇಡುತ್ತಿದ್ದಂತೆ ಅವರಿಗೂ ಏಕಾಏಕಿ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಸಿದ್ದರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಕರೆತರುವಷ್ಟರಲ್ಲಿಯೇ ಮೃತಪಟ್ಟಿದ್ದರು.
ಅವರಿಗೆ ಪತ್ನಿ, ಮಕ್ಕಳು ಇದ್ದಾರೆ. ತಾಯಿಯ ಅಂತ್ಯಸಂಸ್ಕಾರಕ್ಕೆ ತೆರಳಿದ್ದ ಮಗನೂ ಮೃತಪಟ್ಟಿದ್ದು ಸ್ಥಳೀಯ ಜನರಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.