ಕಾರವಾರ: ಅಂಕೋಲಾ ತಾಲ್ಲೂಕಿನ ಬೇಲೆಕೇರಿ ಹೋಬಳಿಯಲ್ಲಿ ನಾಗರಿಕ ವಿಮಾನ ನಿಲ್ದಾಣ ಸ್ಥಾಪಿಸಲು ಒಟ್ಟು 93 ಎಕರೆ 29 ಗುಂಟೆ ಜಮೀನು ಅಗತ್ಯವಿದೆ. ಇದಕ್ಕೆ ಭೂಸ್ವಾಧೀನ ಮಾಡಲು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಮಂಗಳವಾರ ಪ್ರಾಥಮಿಕ ಅಧಿಸೂಚನೆ ಪ್ರಕಟಿಸಿದ್ದಾರೆ.
ನಾಗರಿಕ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಅಲಗೇರಿ ಗ್ರಾಮದಲ್ಲಿ 69 ಎಕರೆ 21 ಗುಂಟೆ, ಬೇಲೆಕೇರಿ ಗ್ರಾಮದಲ್ಲಿ 20 ಎಕರೆ 35 ಗುಂಟೆ, ಭಾವಿಕೇರಿ ಗ್ರಾಮದಲ್ಲಿ 3 ಎಕರೆ 12 ಗುಂಟೆ ಜಮೀನನ್ನು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಒಟ್ಟು 260 ಸಂತ್ರಸ್ತರನ್ನು ಗುರುತು ಮಾಡಲಾಗಿದ್ದು, ಅದರಲ್ಲಿ 63 ಮನೆಗಳೂ ಸೇರಿವೆ.
ವಿಮಾನ ನಿಲ್ದಾಣಕ್ಕಾಗಿ ಭೂಸ್ವಾಧೀನ ಮಾಡುವ ಪ್ರಕ್ರಿಯೆಗೆ 2013ರ ಮೂಲ ಭೂಸ್ವಾಧೀನ ಕಾಯ್ದೆಯ ಅಧ್ಯಾಯ 2ರ ಅಡಿ ಸಾಮಾಜಿಕ ಪರಿಣಾಮಗಳ ಅಧ್ಯಯನ ಮಾಡುವುದರಿಂದ ವಿನಾಯಿತಿ ನೀಡಲಾಗಿದೆ.
ಈ ಎಲ್ಲ ಪ್ರಕ್ರಿಯೆಗಳಿಗೆ ವಿಶೇಷ ಭೂಸ್ವಾಧೀನ ಅಧಿಕಾರಿಯನ್ನಾಗಿ ಕುಮಟಾ ಉಪ ವಿಭಾಗಾಧಿಕಾರಿಯನ್ನು ನಿಯುಕ್ತಿಗೊಳಿಸಲಾಗಿದೆ. ‘ಪಾರದರ್ಶಕತೆ ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ 2013’ ಕಲಂ 11(1) ಅಡಿ ಅವರಿಗೆ ಈ ಅಧಿಕಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಸೀಬರ್ಡ್ ನೌಕಾನೆಲೆಯ ಎರಡನೇ ಹಂತದ ವಿಸ್ತರಣೆಯ ಅಂಗವಾಗಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಅದನ್ನು ನಾಗರಿಕ ವಿಮಾನಯಾನ ಸೇವೆಗೂ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. ಟರ್ಮಿನಲ್ ಹಾಗೂ ಹೆಚ್ಚುವರಿ ರನ್ ವೇಯನ್ನು ರಾಜ್ಯ ಸರ್ಕಾರ ನಿರ್ಮಾಣ ಮಾಡಬೇಕಿದ್ದು, ಈ ಕಾಮಗಾರಿಗೆ ಮೊದಲ ಹಂತದಲ್ಲಿ ರಾಜ್ಯ ಸರ್ಕಾರವು ₹ 200 ಕೋಟಿ ಮಂಜೂರು ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.