ಸಿದ್ದಾಪುರ: ಸಮಾಜದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡುವಂತಹ ಅನೇಕ ಪ್ರಕರಣಗಳು ನಡೆಯುತ್ತಿವೆ. ಇಂತಹ ಕೃತ್ಯಗಳು ಒಂದು ವ್ಯಕ್ತಿಯಿಂದ ಆಗಿದ್ದಲ್ಲ. ಏಕಕಾಲದಲ್ಲಿ ಜನಿವಾರವನ್ನು ತೆಗೆಸುವ ಕಾರ್ಯ ನಡೆದಿದೆ ಎಂದರೆ ಇದೊಂದು ಷಡ್ಯಂತ್ರವಾಗಿದೆ ಎಂದು ಹವ್ಯಕ ಮಂಡಲದ ತಾಲ್ಲೂಕು ಅಧ್ಯಕ್ಷ ಮಹೇಶ ಭಟ್ಟ ಚಟ್ನಳ್ಳಿ ಹೇಳಿದರು.
ಸಿಇಟಿ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ತುಂಡರಿಸಿದ್ದನ್ನು ಖಂಡಿಸಿ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಬ್ರಾಹ್ಮಣ ಸಮಾಜ ಸೇರಿದಂತೆ ವಿವಿಧ ಸಮಾಜದವರು ನಡೆಸಿದ ಪ್ರತಿಭಟನೆಯಲ್ಲಿ ಬುಧವಾರ ಅವರು ಮಾತನಾಡಿದರು.
ಅಖಿಲ ಭಾರತ ಹವ್ಯಕ ಸಮಾಜದ ಉಪಾಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಮಾತನಾಡಿ, ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂದು ಆಗ್ರಹಿಸಿದರು.
ಇಜಿಎಸ್ಬಿ ಸಮಾಜದ ಪ್ರಮುಖ ಗುರುರಾಜ ಶಾನಭಾಗ, ಕೆ.ಜಿ.ನಾಯ್ಕ ಹಣಜೀಬೈಲ್, ರವಿ ಹೆಗಡೆ ಹೂವಿನಮನೆ, ವಿನಾಯಕ ಶೇಟ್, ತಿಮ್ಮಪ್ಪ ಎಂ.ಕೆ, ಕಾಶಿನಾಥ ಪೈ, ರಾಜೇಂದ್ರ ಆಚಾರ್ಯ ಮಾತನಾಡಿದರು.
ಪ್ರತಿಭಟನೆಯಲ್ಲಿ ಹವ್ಯಕ ಬ್ರಾಹ್ಮಣ, ವಿಶ್ವಕರ್ಮ, ಗೌಡಸಾರಸ್ವತ, ವಿಶ್ವಕರ್ಮ, ದೈವಜ್ಞ, ಕೊಂಕಣಿ ಖಾರ್ವಿ ಹಾಗೂ ವಿವಿಧ ಸಮಾಜದ ಪ್ರಮುಖರು ಸೇರಿದಂತೆ ಎರಡು ನೂರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ಪ್ರತಿಭಟನೆಯ ನಂತರ ತಪ್ಪಿತಸ್ಥರ ಮೇಲೆ ಕೂಡಲೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.