ADVERTISEMENT

ಮಾರಿಕಾಂಬಾ ರಥಕ್ಕಾಗಿ ತಾರಿಮರಕ್ಕೆ ಕಚ್ಚು

ಧರ್ಮದರ್ಶಿ ಮಂಡಳದಿಂದ ವೃಕ್ಷಪೂಜೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2022, 16:24 IST
Last Updated 4 ಮಾರ್ಚ್ 2022, 16:24 IST
ಮಾರಿಕಾಂಬಾ ದೇವಿ ರಥ ನಿರ್ಮಾಣಕ್ಕೆ ಬೇಕಾದ ತಾರಿಮರಕ್ಕೆ ಕಚ್ಚು ಹಾಕುವ ಮುನ್ನ ವೃಕ್ಷಪೂಜೆ ಸಲ್ಲಿಸಲಾಯಿತು
ಮಾರಿಕಾಂಬಾ ದೇವಿ ರಥ ನಿರ್ಮಾಣಕ್ಕೆ ಬೇಕಾದ ತಾರಿಮರಕ್ಕೆ ಕಚ್ಚು ಹಾಕುವ ಮುನ್ನ ವೃಕ್ಷಪೂಜೆ ಸಲ್ಲಿಸಲಾಯಿತು   

ಶಿರಸಿ: ಮಾರಿಕಾಂಬಾ ದೇವಿ ಜಾತ್ರೆ ವೇಳೆ ದೇವಿಯನ್ನು ಗದ್ದುಗೆಗೆ ಕರೆದೊಯ್ಯುವ ರಥ ನಿರ್ಮಾಣದ ಸಲುವಾಗಿ ಬಳಸಲು ಬೇಕಾದ ತಾರಿಮರಕ್ಕೆ ಕಚ್ಚು ಹಾಕುವ ಕಾರ್ಯ ಶುಕ್ರವಾರ ನಡೆಯಿತು.

ಎಸಳೆ ಗ್ರಾಮದ ಖಾಸಗಿ ಜಮೀನಿನಲ್ಲಿದ್ದ ಮರವನ್ನು ಪಡೆಯಲಾಗುತ್ತಿದ್ದು ಅದಕ್ಕೆ ಸಾಂಪ್ರದಾಯಿಕ ಪದ್ಧತಿಯಲ್ಲಿ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಧರ್ಮದರ್ಶಿ ಮಂಡಳದವರು, ಬಾಬುದಾರರು, ಭಕ್ತರ ಸಮ್ಮುಖದಲ್ಲಿ ಪೂಜೆ ನಡೆದ ಬಳಿಕ ಮರದ ಬುಡಕ್ಕೆ ಕಚ್ಚು ಹಾಕಲಾಯಿತು.

ಉತ್ತರ ದಿಕ್ಕಿನ ನಾಲ್ಕನೇ ಹೊರಬೀಡು ನಡೆಯುವ ಎಸಳೆ ಗ್ರಾಮದಲ್ಲೇ ತಾರಿಮರ ಕಡಿಯುವ ಸಂಪ್ರದಾಯವಿದೆ. ಈ ಹಿಂದೆ ಎಸಳೆ ಗ್ರಾಮದ ಕಾಯ್ದಿಟ್ಟ ಅರಣ್ಯ ಪ್ರದೇಶದಿಂದ ಮರ ತರಲಾಗುತ್ತಿತ್ತು. ಈ ಕಾರಣಕ್ಕೆ ನಾಲ್ಕು ವರ್ಷಗಳ ಹಿಂದೆ ದೇವಸ್ಥಾನದ ಅಂದಿನ ಧರ್ಮದರ್ಶಿ ಮಂಡಳದ ವಿರುದ್ಧ ಪ್ರಕರಣವೂ ದಾಖಲಾಗಿತ್ತು.

ADVERTISEMENT

ಹೀಗಾಗಿ ಮಾಲ್ಕಿ ಜಮೀನಿನಲ್ಲಿರುವ ಮರ ಪಡೆಯುವ ಸಂಪ್ರದಾಯ ಆರಂಭಗೊಂಡಿದೆ. ಈ ಬಾರಿ ಸ್ಥಳೀಯ ಉದ್ಯಮಿ ಅನಿಲ ಮುಷ್ಟಗಿ ತಮಗೆ ಸೇರಿದ ಮಾಲ್ಕಿ ಜಮೀನಿನಲ್ಲಿದ್ದ ಮರವನ್ನು ನೀಡಿದ್ದಾರೆ.

ಕಚ್ಚು ಹಾಕಲಾದ ತಾರಿಮರದ ತುಂಡುಗಳನ್ನು ಮಂಗಳವಾರ ಬಕ್ತರು, ಬಡಗಿಗಳು ಎತ್ತಿನ ಬಂಡಿಗಳ ಮೂಲಕ ದೇವಸ್ಥನದ ಎದುರು ತಂದು ಪೂಜೆ ಸಲ್ಲಿಸಲಿದ್ದಾರೆ. ಆ ಬಳಿಕ ರಥ ನಿರ್ಮಾಣ ಪ್ರಕ್ರಿಯೆ ಆರಂಭಗೊಳ್ಳುತ್ತದೆ ಎಂದು ದೇವಸ್ಥಾನದ ಧರ್ಮದರ್ಶಿ ಮಂಡಳದ ಅಧ್ಯಕ್ಷ ರವೀಂದ್ರ ಜಿ.ನಾಯ್ಕ ತಿಳಿಸಿದ್ದಾರೆ.

ವೃಕ್ಷ ಪೂಜೆ ಸಂದರ್ಭದಲ್ಲಿ ಉಪಾಧ್ಯಕ್ಷ ಸುಧೇಶ ಜೋಗಳೇಕರ್, ಸದಸ್ಯರಾದ ಸುಧೀರ ಹಂದ್ರಾಳ, ವತ್ಸಲಾ ಹೆಗಡೆ, ಶಿವಾನಂಸ ಶೆಟ್ಟಿ, ಬಾಬುದಾರ ಪ್ರಮುಖ ಜಗದೀಶ ಗೌಡ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.