ಯಲ್ಲಾಪುರ: ಎಪಿಎಂಸಿ ಒಳಗೂ-ಹೊರಗೂ ಒಂದೇ ಕಾನೂನು ವ್ಯವಸ್ಥೆ ಜಾರಿಯಾಗಬೇಕೆಂದು ಒತ್ತಾಯಿಸಿ, ಯಲ್ಲಾಪುರ ಅಡಿಕೆ ವ್ಯವಹಾರಸ್ಥರ ಸಂಘವು ಅನಿರ್ದಿಷ್ಟಾವಧಿಯವರೆಗೆ ಅಡಿಕೆ ವ್ಯವಹಾರವನ್ನು ಸ್ಥಗಿತಗೊಳಿಸಲು ತೀರ್ಮಾನಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ ಹೇಳಿದರು.
ತಹಶೀಲ್ದಾರರಿಗೆ ಮತ್ತು ಎಪಿಎಂಸಿ ಕಾರ್ಯದರ್ಶಿಗೆ ಗುರುವಾರ ಮನವಿ ಸಲ್ಲಿಸಿ, ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಒಂದು ದೇಶ ಒಂದು ತೆರಿಗೆ ಹೊಸ ನೀತಿಯಂತೆ ಕೃಷಿ ಉತ್ಪನ್ನಗಳ ಮಾರಾಟದ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಿ, ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಎಪಿಎಂಸಿ ಒಳಗಡೆ ಮಾರಾಟ ಮಾಡುವ ಕೃಷಿ ಉತ್ಪನ್ನಗಳಿಗೆ ರಾಜ್ಯಸರ್ಕಾರ ಶೇ 1ರಷ್ಟು ಸೆಸ್ ವಿಧಿಸುತ್ತಿದೆ. ಇದು ಕೇಂದ್ರದ ಕಾನೂನಿಗೆ ವಿರುದ್ಧವಾಗಿದ್ದು, ಈ ತೆರಿಗೆ ರದ್ದಾಗಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ನಿರ್ದೇಶಕ ಗೋಪಾಲಕೃಷ್ಣ ಗಾಂವ್ಕರ್, ಅಡಿಕೆ ವರ್ತಕರ ಸಂಘದ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಗಡೆ, ಗೌರವ ಕಾರ್ಯದರ್ಶಿ ನರಸಿಂಹಮೂರ್ತಿ ಕೋಣೆಮನೆ, ವ್ಯಾಪಾರಸ್ಥರಾದ ಆರ್.ವಿ.ಹೆಗಡೆ, ಗಿರೀಶ ಭಟ್ಟ, ನಾರಾಯಣ ಭಟ್ಟ, ನರಸಿಂಹ ಭಟ್ಟ ಏಕಾನ್, ಸಾಗರ ಹೆಗಡೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.