ಶಿರಸಿ: ಇಸಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಪಗಿ ಸರ್ವೆಸಂಖ್ಯೆ 53ರಲ್ಲಿರುವ 492 ನಿವೇಶನದ ಗೊಂದಲ ನಿವಾರಿಸದಿದ್ದರೆ ಡಿಸೆಂಬರ್ 18ರಂದು ಚಿಪಗಿ ವೃತ್ತದ ಬಳಿ ರಸ್ತೆ ತಡೆ ನಡೆಸಿ, ಪ್ರತಿಭಟಿಸಲಾಗುವುದು ಎಂದು ನಾರಾಯಣಗುರು ಹಿತರಕ್ಷಣಾ ಹೋರಾಟ ಸಮಿತಿ ಪ್ರಮುಖ ಉಮೇಶ ಬಂಕಾಪುರ ಹೇಳಿದರು.
ಭಾನುವಾರ ಇಲ್ಲಿ ನಡೆದ ಅನ್ಯಾಯಕ್ಕೊಳಗಾಗಿರುವ ನಿವೇಶನದಾರರ ಸಭೆಯಲ್ಲಿ ಅವರು ಮಾತನಾಡಿದರು. ‘ಸರ್ವೆಸಂಖ್ಯೆ 53ರಲ್ಲಿ 252.20 ಎಕರೆ ಪ್ರದೇಶ ಅರಣ್ಯವಿದೆ. 1906ರಲ್ಲಿ ಇದು ಮೀಸಲು ಅರಣ್ಯವಾಗಿತ್ತು. 60 ಎಕರೆ ಪ್ರದೇಶ ಮಾತ್ರ ಡಿನೋಟಿಫೈ ಆಗಿದೆ ಎಂದಿರುವ ಉಪವಿಭಾಗಾಧಿಕಾರಿ, ಪ್ರದೇಶಕ್ಕೆ ಸಂಬಂಧಿಸಿ ಯಾವುದೇ ವ್ಯವಹಾರ, ವಹಿವಾಟು ಪ್ರಕ್ರಿಯೆ ನಡೆಸದಂತೆ ತಹಸೀಲ್ದಾರ್ ಮೂಲಕ ಸೂಚನೆ ನೀಡಿದ್ದಾರೆ. ಇದರಿಂದ ಗ್ರಾಮ ಪಂಚಾಯ್ತಿ ವಸತಿ ಯೋಜನೆಯ ಮನೆ ಹಂಚಿಕೆ, ಹೊಸ ಕಟ್ಟಡ ನಿರ್ಮಾಣ, ಪರಭಾರೆಗೆ ತೊಂದರೆಯಾಗಿದೆ’ ಎಂದರು.
ಕಷ್ಟದ ಸಂದರ್ಭದಲ್ಲಿ ನಿವೇಶನದ ಮೇಲೆ ಸಾಲ ಪಡೆಯಲು ಸಹ ಆಗುತ್ತಿಲ್ಲ. ಪಂಚಾಯ್ತಿಯಲ್ಲಿ ಈ ವಿಷಯ ಚರ್ಚಿಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸರ್ಕಾರದ ನಿಯಮಾನುಸಾರ ಭೂಮಿ ಹಂಚಿಕೆಯಾಗಿರುವ ದಾಖಲೆಗಳು ನಿವಾಸಿಗಳ ಬಳಿ ಇವೆ. 60 ಎಕರೆ ಜಮೀನು ಡಿಸ್ಫಾರೆಸ್ಟ್ ಆಗಿದೆ. ಅರಣ್ಯ ಇಲಾಖೆಗೆ ಇದು ಸಂಬಂಧವಿಲ್ಲ. ತಕ್ಷಣ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು. ಕಾನೂನು ಸಲಹೆಗಾರ ಈಶ್ವರ ನಾಯ್ಕ, ಸಂಘದ ಅಧ್ಯಕ್ಷ ಗೌರೀಶ ನಾಯ್ಕ, ಸದಸ್ಯೆ ಶರೀಫಾ ಮಂಗಳೂರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.