ಕಾರವಾರ: ಭಾರತೀಯ ತಟರಕ್ಷಕ ಪಡೆಗೆ ಇಲ್ಲಿನ ಕಡಲತೀರದಲ್ಲಿ ನೀಡಲಾಗಿರುವ ಜಾಗ ಹಿಂಪಡೆಯಬೇಕೆಂದು ಒತ್ತಾಯಿಸಿ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಅವರು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
‘ಕೋಡಿಬಾಗ ಗ್ರಾಮ ಸರ್ವೆ ನಂ. 294 ‘ಅ’ರಲ್ಲಿ 3 ಎಕರೆ ಮತ್ತು 294 ‘ಬ’ರಲ್ಲಿ 20 ಗುಂಟೆ ಜಮೀನು ತಟರಕ್ಷಕ ಪಡೆಯ ಹೆಸರಿನಲ್ಲಿದೆ. ಈ ಜಾಗದಲ್ಲಿ ಮೇ 3ರಂದು ಸರ್ವೆ ಕಾರ್ಯ ನಡೆಸಲಾಗಿದೆ. ಜಾಗ ಹಿಂಪಡೆಯುವಂತೆ ಹೋರಾಟ ನಡೆಸಿದ್ದ ವೇಳೆ ಜಿಲ್ಲಾಡಳಿತವು ಕ್ರಮ ಕೈಗೊಳ್ಳುವ ಭರವಸೆ ನೀಡಿತ್ತು. ಆದರೆ, ಇದುವರೆಗೂ ಭರವಸೆ ಈಡೇರಿಸದೆ ವಂಚಿಸಲಾಗಿದೆ’ ಎಂದು ದೂರಿದರು.
‘ದಶಕದ ಹಿಂದೆ ದಿವೇಕರ ಕಾಲೇಜು ಪಕ್ಕದ ಸುಮಾರು 14.36 ಎಕರೆ ಜಮೀನನ್ನು ತಟರಕ್ಷಕ ಪಡೆಗೆ ನೀಡಲಾಗಿತ್ತು. ಜನರ ವಿರೋಧದ ಬಳಿಕ ಅದನ್ನು ಹಿಂಪಡೆಯಲಾಗಿತ್ತು. ಇನ್ನೂ 3.20 ಎಕರೆ ಜಾಗ ತಟರಕ್ಷಕ ಪಡೆಯ ಹೆಸರಿನಲ್ಲೇ ಇದೆ. ತಾಲ್ಲೂಕಿನ ಬಹುಪಾಲು ಕಡಲತೀರವು ರಕ್ಷಣಾ ಯೋಜನೆಗೆ ಈಗಾಗಲೇ ಸ್ವಾಧೀನಗೊಂಡಿದ್ದು, ಮತ್ತಷ್ಟು ಜಾಗ ಸ್ವಾಧೀನವಾದರೆ ಜನರು ಕಡಲತೀರವನ್ನೇ ಕಳೆದುಕೊಳ್ಳಬೇಕಾಗುತ್ತದೆ’ ಎಂದರು.
ವೇದಿಕೆಯ ಸದಸ್ಯರಾದ ರಾಮಾ ನಾಯ್ಕ, ಬಾಬು ಶೇಖ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.