ಯಲ್ಲಾಪುರ: ಯೋಗದಿಂದ ಶರೀರ, ಮನಸ್ಸು ಮತ್ತು ಬುದ್ಧಿಯ ಸಮತೋಲನ ಸಾಧ್ಯ. ಯೋಗ ಎಲ್ಲರಿಗೂ ತಲುಪಿ ಸಮಾಜದ ಒಳಿತಿಗೆ ಕಾರಣವಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಂ ಸಿದ್ದಿ ಹೇಳಿದರು.
ಪತಂಜಲಿ ಯೋಗ ಸಮಿತಿ ಮತ್ತು ಭಾರತ ಸ್ವಾಭಿಮಾನ ಟ್ರಸ್ಟ್ ವತಿಯಿಂದ ಪಟ್ಟಣದ ಅಡಿಕೆ ಭವನದಲ್ಲಿ ಶನಿವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಪತಂಜಲಿ ಮಹರ್ಷಿಗಳು ನೀಡಿದ ಯೋಗ ಇಂದು ವಿಶ್ವಮಾನ್ಯವಾಗಿದೆ. ಮನಸ್ಸು, ಪ್ರಾಣ ಇವುಗಳ ಕ್ರಿಯೆ ಸತ್ಪಥದಲ್ಲಿ ಸಾಗಲು ಯೋಗ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ನಾವು ಮಾಡುವ ಆಸನ ಮಾತ್ರವೇ ಯೋಗವಲ್ಲ. ಅದು ಪ್ರಾರಂಭಿಕ ಘಟ್ಟ. ಸಾಧನೆಯತ್ತ ಸಾಗಿದಾಗ ಯೋಗದ ಪರಿಪೂರ್ಣತೆಯನ್ನು ಪಡೆಯಲು ಸಾಧ್ಯ ಎಂದರು.
ಯೋಗ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸಿದ್ದ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಬಹುಮಾನಿತರಾದ ಯೋಗ ಶಿಕ್ಷಕ ಸುಬ್ರಾಯ ಭಟ್ಟ ಆನೇಜಡ್ಡಿ, ಯೋಗಪಟು ನೇತ್ರಾವತಿ ಭಟ್ಟ ಮತ್ತು ಪವನಕುಮಾರ ಅವರನ್ನು ಸನ್ಮಾನಿಸಲಾಯಿತು.
ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ವಿ.ಕೆ.ಭಟ್ಟ ಶೀಗೆಪಾಲ ಅಧ್ಯಕ್ಷತೆ ವಹಿಸಿದ್ದರು. ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ರವಿ ಹೆಗಡೆ, ಪತಂಜಲಿ ಯೋಗ ಸಮಿತಿಯ ಮಹಿಳಾ ಪ್ರಭಾರಿ ಶೈಲಶ್ರೀ ಭಟ್ಟ, ಪ್ರಮುಖರಾದ ನಾಗೇಶ ವೆರ್ಣೇಕರ, ಕನಕಪ್ಪ, ರಾಮನಾಥ ಭಟ್ಟ ಜಿ.ಎಸ್.ಭಟ್ಟ ಹಳವಳ್ಳಿ ಸತೀಶ ಹೆಗಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.