ADVERTISEMENT

ಅವಿರತ ಹೋರಾಟದ ಫಲ ‘ಆಸ್ಪತ್ರೆ’: ಇನಾಮದಾರ

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 5:25 IST
Last Updated 6 ಜನವರಿ 2014, 5:25 IST

ಮುದ್ದೇಬಿಹಾಳ: ನಮ್ಮ ಹಳ್ಳಿಯ ಜನ ಇನ್ನೂ ಮುಗ್ಧರು. ಅವರು ತಮಗೆ ಅನಾರೋಗ್ಯವಾದರೆ ಚಿಕಿತ್ಸೆಗೆ ಆಸ್ಪತ್ರೆಗೆ ಹೋಗದೇ, ದರ್ಗಾಗಳಿಗೆ, ಹನುಮಂತ ದೇವರ ದೇವಸ್ಥಾನಕ್ಕೆ ಹೋಗುವು ದನ್ನು ತಪ್ಪಿಸಲು ನಾನು ಈ ಗ್ರಾಮಕ್ಕೆ ಸರ್ಕಾರಿ ಆಸ್ಪತ್ರೆ ತರುವ  ಛಲ ಮಾಡಿದೆ ಎಂದು ಪುಣೆಯ ನಿವೃತ್ತ ನ್ಯಾಯಾಧೀಶ, ನಿಯೋಜಿತ ಪ್ರಾಥ ಮಿಕ ಆರೋಗ್ಯ ಕೇಂದ್ರದ ಭೂದಾನಿ ಜಿ.ಡಿ.ಇನಾಮದಾರ ಹೇಳಿದರು.

ತಾಲ್ಲೂಕಿನ ಇಣಚಗಲ್ಲ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ಕಾನೂನು 15 ಸಾವಿರ ಜನಸಂಖ್ಯೆ ಇರುವಲ್ಲಿ ಮಾತ್ರ ಆಸ್ಪತ್ರೆ ಸ್ಥಾಪಿಸಲು ಅನುಮತಿ ನೀಡುತ್ತದೆ, ಆದರೆ ಇಣಚಗಲ್ಲ ಗ್ರಾಮದಲ್ಲಿ ಕೇವಲ 450 ಜನರಿದ್ದದ್ದರಿಂದ ಆಸ್ಪತ್ರೆ ಸ್ಥಾಪಿ ಸಲು ತಾಂತ್ರಿಕ ತೊಡಕು ಇದ್ದರೂ ನನ್ನ ಅವಿರತ ಹೋರಾಟದ ಫಲವಾಗಿ ಆಸ್ಪತ್ರೆ ಮಂಜೂರಾಗಿದೆ ಎಂದರು.

ನನ್ನೂರು ಸೇರಿ ಇದರ ಸುತ್ತಲಿನ ಹತ್ತು ಹಳ್ಳಿಗಳ ಆರೋಗ್ಯ ಕಾಯುವ ಕೆಲಸ ಇದು. ನನ್ನ ಕರ್ಮಭೂಮಿ ಮಹಾರಾಷ್ಟ್ರವಾದರೂ, ನನ್ನ ಜನ್ಮ ಭೂಮಿಯ ಋಣ ತೀರಿಸುವ ಸಣ್ಣ ಕೆಲಸದಿಂದ ತೃಪ್ತಿ ಸಿಕ್ಕಿದೆ.  ಆಸ್ಪತ್ರೆ ನೂತನ ಕಟ್ಟಡ ಆರಂಭವಾದರೆ ನಾನು ನನ್ನ ಸ್ವಂತ ಖರ್ಚಿನಿಂದ ಆಂಬುಲೆನ್ಸ, ಇ.ಸಿ.ಜಿ. ಪರೀಕ್ಷೆ ವ್ಯವಸ್ಥೆ, ಎಕ್ಸ್‌ರೆ ಯಂತ್ರ, ಸೋನೋಗ್ರಾಫಿ ಯಂತ್ರ ಸಹ ನೀಡುವುದಾಗಿ ಹೇಳಿದರಲ್ಲದೇ, ಇಡೀ ತಾಲ್ಲೂಕಿನಲ್ಲಿಯೇ ಮಾದರಿ ಎನ್ನಬಹುದಾದ ಈ ಆಸ್ಪತ್ರೆಗೆ ಮುದ್ದೇ ಬಿಹಾಳ ತಾಳಿಕೋಟಿಯ ಬಡ ಜನತೆ ಬಂದು ಉಚಿತ ಚಿಕಿತ್ಸೆ ಪಡೆಯು ವಂತಾಗಬೇಕು ಎಂದು ಹೇಳಿದರು.

ಸತತ ನಾಲ್ಕು ವರ್ಷಗಳ ಕಾಲ ತಾವು ಪಟ್ಟ ಶ್ರಮ ವಿವರಿಸಿದ ಇನಾಮದಾರ, ಈ ಅವಧಿಯ ಎಲ್ಲ ಆರೋಗ್ಯ ಸಚಿವರಿಗೆ ಒಂದು ಸಾವಿರ ಸಲ ಫೋನ್ ಹಚ್ಚಿದ್ದೇನೆ. ಸುಮಾರು ಎರಡು ಲಕ್ಷ ರೂಪಾಯಿ ವೆಚ್ಚ ಮಾಡಿ ಓಡಾಡಿದ್ದೇನೆ. ನನ್ನ ಕನಸು ಪೂರ್ಣವಾಗಿದೆ. ಈಗ ಗ್ರಾಮ ದಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಶಾಸಕರು ಮನಸ್ಸು ಮಾಡಬೇಕು ಎಂದು ಹೇಳಿದರು.

ಶಾಸಕ ಸಿ.ಎಸ್.ನಾಡಗೌಡ ಮಾತ ನಾಡಿ, ಸರ್ಕಾರದ ಆಸ್ತಿಯನ್ನು ನಮ್ಮ ಆಸ್ತಿಯಂತೆ ಕಾಪಾಡಬೇಕು. ನಮ್ಮ ಆರೋಗ್ಯ, ಸಾಮಾಜಿಕ ಆರೋಗ್ಯ ರಕ್ಷಿಸುವ ಕೆಲಸ ಮಾಡಿದರೆ ಇನಾಮ ದಾರ ಅವರ ಶ್ರಮ ಸಾರ್ಥಕ ವಾಗುತ್ತದೆ. ಗ್ರಾಮದ ಕುಡಿಯುವ ನೀರಿನ ಸಮಸ್ಯೆಯನ್ನು ತುರ್ತಾಗಿ ಪರಿ ಹರಿಸುವುದಾಗಿ ಭರವಸೆ ನೀಡಿದರು.

ಡಿ.ಎಚ್.ಒ. ಡಾ.ಗುಂಡಪ್ಪ, ಆಸ್ಪತ್ರೆಗೆ ಉಚಿತವಾಗಿ ತಾತ್ಕಾಲಿಕ ಕಟ್ಟಡ ನೀಡಿರುವ ನಿವೃತ್ತ ಎಂಜಿನಿಯರ್ ಲಕ್ಷ್ಮಣ ಭೈರವಾಡಗಿ ಮಾತನಾಡಿದರು. ಜಿಲ್ಲಾ ವೈದ್ಯಾಧಿಕಾರಿ ಡಾ.ಹಿರೇಮಠ, ಡಾ.ಎಸ್.ಸಿ.ಚೌಧರಿ, ತಾಳಿಕೋಟಿ ಉಪಸ್ಥಿತರಿದ್ದರು.

ಮಹಮ್ಮದ್ ಅಲಿ ಕುರಾನ ಪಠಣ ಮಾಡಿದರು. ಶಕುಂತಲಾ ಹಗರ ಗುಂಡ ಪ್ರಾರ್ಥಿಸಿದರು. ಎಸ್.ಎಸ್. ಕರಡ್ಡಿ ಸ್ವಾಗತಿಸಿದರು. ತಾಲ್ಲೂಕು ವೈದ್ಯಾಧಿಕಾರಿ ಡಾ.ಸತೀಶ ತಿವಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಬಿ.ಪಾಟೀಲ ನಿರೂಪಿಸಿದರು. ಬಸವರಾಜ ಚಿನಿವಾಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.