ADVERTISEMENT

ಕನ್ನಡ ಜಾತ್ರೆಗೆ ಪ್ರತಿನಿಧಿಗಳ ದಂಡು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 8:55 IST
Last Updated 14 ಫೆಬ್ರುವರಿ 2011, 8:55 IST

ಸಿಂದಗಿ: ಫೆ.15 ಮತ್ತು 16ರಂದು ನಡೆಯಲಿರುವ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ದಾಖಲೆ ಸಮ್ಮೇಳನ ಆಗಲಿದೆ. ಈ ಸಮ್ಮೇಳನದಲ್ಲಿ ಜಿಲ್ಲೆಯ 10 ಸಾವಿರ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಆಶಯ ವ್ಯಕ್ತಪಡಿಸಿದರು.

ಸಮ್ಮೇಳನದ ಸಿದ್ದತಾ ಕಾರ್ಯ ಭರದಿಂದ ನಡೆದಿದ್ದು, ಪಟ್ಟಣದಲ್ಲಿ ಸ್ವಾಗತ ಕಮಾನುಗಳು, ಸಮ್ಮೇಳನದ ಮುಖ್ಯ ವೇದಿಕೆ ಹಾಗೂ ಭೋಜನ ವ್ಯವಸ್ಥೆ ಎಲ್ಲವೂ ಬಿರುಸಿನಿಂದ ನಡೆದಿದೆ ಭಾನುವಾರ ಸುದ್ದಿಗಾರರಿಗೆ ಎಂದರು.

ಸಿಂದಗಿ ಸಮ್ಮೇಳನಕ್ಕೆ ಹೊರಗಿನಿಂದ ಆಗಮಿಸುವ ಪ್ರತಿನಿಧಿಗಳನ್ನು ಪಟ್ಟಣದ ಜನತೆ ಆದರಾತೀಥ್ಯ ತೋರಿಸಬೇಕು. ಅಲ್ಲದೇ ಇಡೀ ಪಟ್ಟಣವನ್ನು ಅಲಂಕಾರಗೊಳಿಸಬೇಕು. ಒಟ್ಟಾರೆ ಹಬ್ಬದ ವಾತಾವರಣ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿಕೊಂಡರು.

‘ಸಮ್ಮೇಳನದಲ್ಲಿ ಕೆಲವರು ಅವಕಾಶದಿಂದ ವಂಚಿತರಾಗಿರಲೂಬಹುದು ಅಂಥವರು ದಯವಿಟ್ಟು ಅಸಮಾಧಾನಗೊಳ್ಳದೇ ಇದು ನಿಮ್ಮೂರಿನ ಕನ್ನಡ ಜಾತ್ರೆ ಎಂದು ತಿಳಿದುಕೊಂಡು ಕನ್ನಡ ಮಾತೆಯ ತೇರನ್ನು ಎಳೆಯುವ ಸೇವೆ ಮಾಡಬೇಕು’ ಎಂದು ವಿನಂತಿಸಿಕೊಂಡರು.

ಇದೇ ಸಂದರ್ಭದಲ್ಲಿ ಸಮ್ಮೇಳನದ ನಿಮಿತ್ತ ಫೆ.15 ರಂದು ಸಿಂದಗಿ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸುವ ಜಿಲ್ಲೆಯ ಶಿಕ್ಷಕರಿಗೆ ಅನ್ಯ ಕಾರ್ಯ ನಿಮಿತ್ತ ರಜೆ ಸೌಲಭ್ಯವಿದೆ. ಹೀಗಾಗಿ ಎಲ್ಲ ಶಿಕ್ಷಕ ಸಮೂಹ ಸಮ್ಮೇಳನದಲ್ಲಿ ಭಾಗವಹಿಸುವಂತೆ ಕೋರಿದರು.

ತಾಲ್ಲೂಕಿನ ಎಲ್ಲ ಶಾಲಾ ಶಿಕ್ಷಕರುಗಳಿಗೆ ಸಮ್ಮೇಳನದ ಆಮಂತ್ರಣ ಪತ್ರಿಕೆ ಕಳುಹಿಸಬೇಕಾಗಿತ್ತು. ಆದರೆ ತಾಂತ್ರಿಕ ಕಾರಣಾಂತರದಿಂದ ಕಳುಹಿಸಲು ಆಗಿಲ್ಲ. ಹೀಗಾಗಿ ಈ ಕೋರಿಕೆಯನ್ನು ಮನ್ನಿಸಿ ಎಲ್ಲ ಶಿಕ್ಷಕರು ಸಮ್ಮೇಳನದಲ್ಲಿ ಭಾಗವಹಿಸಬೇಕಾಗಿ ಕೇಳಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ತಾಲ್ಲೂಕು ಅಧ್ಯಕ್ಷ ಬಸವಲಿಂಗ ಬೂದಿಹಾಳ, ಹ.ಮ.ಪೂಜಾರ, ಚಂದ್ರಶೇಖರ ದೇವರೆಡ್ಡಿ, ಅಶೋಕ ಗಾಯಕವಾಡ, ಎಂ.ಎನ್.ಕಿರಣರಾಜ್, ಮಹಾಂತೇಶ ಸಾಲಿಮಠ, ಶೇಖ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.