ADVERTISEMENT

ಕಲ್ಲಾಸರೆ ಕಲೆ ಮಾನವನ ಸಾಂಸ್ಕೃತಿಕ ನೆಲೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2012, 3:55 IST
Last Updated 17 ನವೆಂಬರ್ 2012, 3:55 IST

ಶಿವಯೋಗಮಂದಿರ (ಬಾದಾಮಿ): ಸಾವಿರಾರು ವರ್ಷಗಳ ಹಿಂದೆ ಆದಿ ಮಾನವರು ಗುಡ್ಡ ಬೆಟ್ಟಗಳಲ್ಲಿ ವಾಸವಾಗಿ ಅವರು ಗವಿ, ಕಲ್ಲು ಬಂಡೆಯ ಮೇಲೆ ರೂಪಿಸಿದ ಕಲೆಯು ನೋಡಲು ಇನ್ನೂ ಲಭ್ಯ ಇವೆ. ಇವುಗಳು ಮೂಲ ಮಾನವನ ಸಾಂಸ್ಕೃತಿಕ ನೆಲೆಯಾಗಿವೆ ಎಂದು ಶಿವಯೋಗಮಂದಿರ ಸಂಸ್ಥೆಯ ಅಧ್ಯಕ್ಷ ಸಂಗನಬಸವ ಶ್ರಿಗಳು ಹೇಳಿದರು.

ಇಲ್ಲಿನ ಶಿವಯೋಗಮಂದಿರ ಸಂಸ್ಥೆಯಲ್ಲಿ  ಕಾಂಗ್ರೆಸ್ ರಾಕ್ ಆರ್ಟ್‌ ಸೊಸೈಟಿ ಆಫ್ ಇಂಡಿಯಾದ 17ನೆಯ ರಾಷ್ಟ್ರೀಯ ಸಮ್ಮೇಳನವನ್ನು  ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪುರಾತನ ಕಾಲದ ಮಾನವರು ರೂಪಿಸಿದ ಚಿತ್ರಕಲೆಯನ್ನು ಯುವ ಸಂಶೋಧಕರು ಸಂಶೋಧನೆ ಕೈಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ಸಂಶೋಧಕ ಡಾ.ಅ.ಸುಂದರ ತಿಳಿಸಿದರು.

ರಾಜ್ಯದ ವಿಜಾಪುರ, ಬಾಗಲಕೋಟೆ, ಬಳ್ಳಾರಿ ಮತ್ತು ಗುಲ್ಬರ್ಗ ಜಿಲ್ಲೆಯ ಬೆಟ್ಟಗಳ ಕಲ್ಲಾಸರೆ ಮತ್ತು ಗವಿಗಳಲ್ಲಿನ ಚಿತ್ರಕಲೆ ಕುರಿತು ಮಾಹಿತಿ ನೀಡಿದರು.

ದೇಶದ ವಿವಿಧ ಪ್ರದೇಶದ ಬೆಟ್ಟಗಳಲ್ಲಿರುವ ಪ್ರಾಚೀನ ಚಿತ್ರಕಲೆಯನ್ನು ಸಂರಕ್ಷಿಸಬೇಕು ಎಂದ ರಾಸಿ ಅಧ್ಯಕ್ಷ ಡಾ.ಆರ್.ಸಿ.ಅಗರವಾಲಾ ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ರಾಸಿ ಪ್ರಕಟಿಸಿದ `ಪುರಾಕಲಾ~ ಪುಸ್ತಕವನ್ನು ಸ್ವಾಮೀಜಿ ಬಿಡುಗಡೆ ಮಾಡಿದರು.
ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಅತಿಥಿಯಾಗಿ ಆಗಮಿಸಿದ್ದರು. ಭಾರತೀಯ ಪ್ರಾಚ್ಯವಸ್ತು ಇಲಾಖೆಯಿಂದ ಸ್ಮಾರಕಗಳ ಛಾಯಾಚಿತ್ರ ಮತ್ತು ಶಿವ ಯೋಗಮಂದಿರ ಸಂಸ್ಥೆಯು ಸಂಗ್ರಹಿಸಿದ ತಾಡವೋಲೆ ಗ್ರಂಥಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ವಿವಿಧ ರಾಜ್ಯಗಳಿಂದ ವಿದ್ವಾಂಸರು ಹಾಗೂ ರಾಜ್ಯದ ವಿಶ್ವ ವಿದ್ಯಾಲಯಗಳಿಂದ ವಿದ್ವಾಂಸರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ರಾಶಿ ಸಂಸ್ಥೆಯ ಕಾರ್ಯದರ್ಶಿ ಡಾ.ಗಿರಿರಾಜಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಂ.ಬಿ.ಹಂಗರಗಿ ಸ್ವಾಗತಿಸಿದರು. ಡಾ.ಎಸ್.ಐ.ಪತ್ತಾರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.