ADVERTISEMENT

ಜನಜಾಗೃತಿ ಅಭಿಯಾನ ನ.9ಕ್ಕೆ ಕೊನೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 11:05 IST
Last Updated 17 ಅಕ್ಟೋಬರ್ 2011, 11:05 IST

ವಿಜಾಪುರ: ಅವಳಿ ಜಿಲ್ಲೆಗಳ ಸಮಗ್ರ ನೀರಾವರಿ ಯೋಜನೆಗಳ ಜಾರಿಗಾಗಿ ಆರಂಭಿಸಿರುವ ಜನಜಾಗೃತಿ ಅಭಿಯಾನ  ನ. 9ಕ್ಕೆ ಕೊನೆಗೊಳ್ಳಲಿದೆ. ಮುಂದಿನ ಹಂತದ ಹೋರಾಟ, ಪಾದಯಾತ್ರೆಯ ವಿವರವನ್ನು ಅಂದಿನ ಸಭೆಯಲ್ಲಿ ಪ್ರಕಟಿಸಲಾಗುವುದು ಎಂದು ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಹೇಳಿದರು.


`ಉಸಿರಾಗಲಿ ನೀರಾವರಿ- ಹಸಿರಾಗಲಿ ನಮ್ಮ ಭೂಮಿ~ ಜನಜಾಗೃತಿ ಅಂಗವಾಗಿ ಭಾನುವಾರ ಇಲ್ಲಿ ನಡೆದ ನೀರಾವರಿ ಹೋರಾಟಗಾರರು, ಸಂಘ- ಸಂಸ್ಥೆಗಳ ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಈ ಹೋರಾಟ ಸರ್ಕಾರದ ವಿರುದ್ಧದ ಸಂಘರ್ಷ ಅಲ್ಲ. ನಮ್ಮ ನೀರಾವರಿ ಯೋಜನೆಗಳಿಗೆ ಹಂಚಿಕೆಯಾಗಿರುವ ನೀರನ್ನು ಉಳಿಸಿಕೊಳ್ಳುವುದು ಹಾಗೂ ಎಲ್ಲ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರುವಂತೆ ಸರ್ಕಾರದ ಮೇಲೆ ಒತ್ತಡ ತರುವ ಕೆಲಸವಾಗಿದೆ. ಈ ಹೋರಾಟದಲ್ಲಿ ಎಲ್ಲರೂ ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಜೆಡಿಎಸ್ ಮುಖಂಡ ಸಂಗಮೇಶ ಬಬಲೇಶ್ವರ ಮಾತನಾಡಿ, ಎಂ.ಬಿ. ಪಾಟೀಲರು ಹಮ್ಮಿಕೊಂಡಿರುವ ಜನಜಾಗೃತಿಯಿಂದಾಗಿ ಜನರಲ್ಲಿ ನೀರಾವರಿ ಯೋಜನೆಗಳ ಕುರಿತು ಜಾಗೃತಿ ಮೂಡಿದೆ. ಜಿಲ್ಲೆಯ ಜನಪ್ರತಿನಿಧಿಗಳು ಈ ಯೋಜನೆಗಳ ಅನುಷ್ಠಾನಕ್ಕೆ ಒಟ್ಟಾಗಿ ಶ್ರಮಿಸಬೇಕಿದೆ ಎಂದರು.

ಮುಳವಾಡ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ರಮೇಶ ಸೂಳಿಭಾವಿ, ವಕೀಲ ತುಳಸಿರಾಮ ಸೂರ್ಯವಂಶಿ, ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಉಪ್ಪಿನ, ಸಿದ್ಧೇಶ್ವರ ಸಂಸ್ಥೆಯ ಸಂಗು ಸಜ್ಜನ, ಪ್ರಮುಖರಾದ ಸಂಗರಾಜ ದೇಸಾಯಿ (ಕೊಲ್ಹಾರ), ಡಾ.ಕೆ.ಬಿ. ನಾಗೂರ, ಕೃಷ್ಣಾ ಕಣಿವೆ ಹೋರಾಟ ಸಮಿತಿಯ ಬಸವರಾಜ ಕುಂಬಾರ, ಅಶೋಕ ವಾರದ ಸಿಂದಗಿ, ಪೀಟರ್ ಅಲೇಕ್ಝಾಂಡರ್, ರಮೇಶ ಬಿದನೂರ, ಎಸ್.ಎಂ. ಪಾಟೀಲ ಗಣಿಹಾರ ಮಾತನಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಮಾಜಿ ಶಾಸಕ ರಾಜು ಆಲಗೂರ, ಎಚ್.ಎಸ್. ಕೋರಡ್ಡಿ, ರಾಜಾರಾಮ ಗಾಯಕವಾಡ, ಡಾ.ಜಿ.ಟಿ. ಪಾಟೀಲ ಅಹಿರಸಂಗ, ಜಿ.ಎಸ್. ಕುಲಕರ್ಣಿ, ಡಾ. ಕಂಠೀರವ ಕುಳ್ಳೊಳ್ಳಿ ಇತರರು ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT