ADVERTISEMENT

ಜಿಲ್ಲಾಡಳಿತಕ್ಕೆ ಸಿಗದ ಶಾಶ್ವತ ನೆಲೆ!

ಸಂರಕ್ಷಿತ ಸ್ಮಾರಕದಲ್ಲಿ ಡಿ.ಸಿ. ಕಚೇರಿ: ದಿಕ್ಕಿಗೊಂದು ಕಚೇರಿಗಳಿಂದ ಪರದಾಟ

ಗಣೇಶ ಚಂದನಶಿವ
Published 17 ಫೆಬ್ರುವರಿ 2014, 6:10 IST
Last Updated 17 ಫೆಬ್ರುವರಿ 2014, 6:10 IST
ವಿಜಾಪುರದ ಜಿಲ್ಲಾಧಿಕಾರಿಗಳ ಕಚೇರಿ ಕಾರ್ಯನಿರ್ವಹಿಸುತ್ತಿರುವ ಐತಿಹಾಸಿಕ ಸಂರಕ್ಷಿತ ಸ್ಮಾರಕ ಫಾರೂಕ್‌ ಮಹಲ್‌.
ವಿಜಾಪುರದ ಜಿಲ್ಲಾಧಿಕಾರಿಗಳ ಕಚೇರಿ ಕಾರ್ಯನಿರ್ವಹಿಸುತ್ತಿರುವ ಐತಿಹಾಸಿಕ ಸಂರಕ್ಷಿತ ಸ್ಮಾರಕ ಫಾರೂಕ್‌ ಮಹಲ್‌.   

ವಿಜಾಪುರ: ಇಲ್ಲಿಯ ಜಿಲ್ಲಾಧಿಕಾರಿಗಳ ಕಚೇರಿಗೆ ಇನ್ನೂ ಶಾಶ್ವತ ನೆಲೆ ದೊರೆ ತಿಲ್ಲ. ಹೊಸ ಜಿಲ್ಲಾ ಆಡಳಿತ ಭವನ ನಿರ್ಮಿಸಬೇಕು ಎಂಬ ಜಿಲ್ಲಾ ಆಡಳಿತದ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿಲ್ಲ.

ಈಗ ಜಿಲ್ಲಾಧಿಕಾರಿಗಳ ಕಚೇರಿ ಇರು ವುದು ಫಾರೂಕ್‌ ಮಹಲ್‌ನಲ್ಲಿ. ಅದಾ ಲತ್‌ ಮಹಲ್‌ನ್ನೇ ಜಿಲ್ಲಾಧಿಕಾರಿಗಳ ಕಚೇರಿಯನ್ನಾಗಿ ಪರಿವರ್ತಿಸಲಾಗಿದೆ. ಇವೆರಡೂ ಆದಿಲ್‌ಶಾಹಿ ಅರಸರ ಕಾಲ ದಲ್ಲಿ ನಿರ್ಮಾಣಗೊಂಡ ಐತಿಹಾಸಿಕ ಸ್ಮಾರಕಗಳು. ಕೇಂದ್ರ ಸರ್ಕಾರದ ಪ್ರಾಚ್ಯ ವಸ್ತು ಸರ್ವೇಕ್ಷಣ ಇಲಾಖೆ 1985 ರಲ್ಲಿಯೇ ಈ ಕಟ್ಟಡಗಳನ್ನು ‘ಸಂರಕ್ಷಿತ ಸ್ಮಾರಕಗಳು’ ಎಂದು ಘೋಷಿಸಿದೆ.

‘ನಮ್ಮ ಕಚೇರಿಯಲ್ಲಿ ಯಾವುದೇ ಮೂಲಸೌಲಭ್ಯಗಳಿಲ್ಲ. ಕಚೇರಿಗೆ ಬರುವ ಸಾರ್ವಜನಿಕರಿಗೆ ಬಿಡಿ, ಸಿಬ್ಬಂದಿಗಾಗಿ ಒಂದು ಶೌಚಾಲಯವೂ ಇಲ್ಲ. ಇದು ದೌರ್ಭಾಗ್ಯದ ಸಂಗತಿ’ ಎಂದು ಹೆಸರು ಬಹಿರಂಗ ಪಡಿಸಲು ಒಲ್ಲದ ಜಿಲ್ಲಾಧಿ ಕಾರಿಗಳ ಕಚೇರಿಯ ಸಿಬ್ಬಂದಿಯೊಬ್ಬರು ಹೇಳಿದರು.

‘ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅಂಗವಿಕಲರಿಗೆ ಕಡ್ಡಾಯವಾಗಿ ರ್‍್ಯಾಂಪ್‌ ನಿರ್ಮಿಸಬೇಕು ಎಂಬ ನ್ಯಾಯಾಲಯದ ಆದೇಶವಿದೆ. ಆದರೆ, ವಿಜಾಪುರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೇ ರ್‍್ಯಾಂಪ್‌ ನಿರ್ಮಿಸಿಲ್ಲ. ಜಿಲ್ಲಾಧಿಕಾರಿಗಳ ಕೊಠಡಿ ಮಾತ್ರ ನೆಲ ಮಹಡಿ ಯಲ್ಲಿದ್ದು, ಅವರ ಇಡೀ ಕಚೇರಿ, ಹೆಚ್ಚುವರಿ ಜಿಲ್ಲಾಧಿಕಾರಿಗಳ ಕೊಠಡಿ ಇರುವುದು ಮೊದಲ ಮಹಡಿಯಲ್ಲಿ. ನಾವು ಅಲ್ಲಿಗೆ ಹೋಗಿ ಕೆಲಸ ಮಾಡಿ ಸಿಕೊಳ್ಳುವುದಾದರೂ ಹೇಗೆ’ ಎಂಬುದು ಅಂಗವಿಕಲರ ಒಕ್ಕೂಟದ ಮುಖಂಡ ಪರಶುರಾಮ ಗುನ್ನಾಪುರ ಅವರ ಪ್ರಶ್ನೆ.

‘ಆದಿಲ್‌ಶಾಹಿಗಳ ಕಾಲದಲ್ಲಿ ನಿರ್ಮಾಣವಾಗಿರುವ ವಿಜಾಪುರದ ಒಳಕೋಟೆಯ ಇಡೀ ಪ್ರದೇಶ ಸಂರಕ್ಷಿತ ಸ್ಮಾರಕಗಳನ್ನು ಒಳಗೊಂಡಿದೆ. ಈ ಸ್ಮಾರಕಗಳನ್ನು ಸರ್ಕಾರ ಕಚೇರಿ, ವಸತಿಗೆ ಬಳಸುತ್ತಿರುವುದು ಅಕ್ರಮ. 1985ರ ನಂತರ ಇಲ್ಲಿ ನಿರ್ಮಾಣ ವಾಗಿರುವ ಎಲ್ಲ ಕಟ್ಟಡಗಳು ಅನಧಿಕೃತ. ಇಲ್ಲಿಯ ಎಲ್ಲ ಕಚೇರಿಗಳನ್ನು ತೆರವು ಗೊಳಿಸಿ, ಈ ಪ್ರದೇಶವನ್ನು ಸಂರಕ್ಷಿಸ ಬೇಕು. ಇಲ್ಲದಿದ್ದರೆ ಸುಪ್ರೀಂಕೋರ್ಟ್‌ ಮೊರೆ ಹೋಗುವ ಚಿಂತನೆಯೂ ಇದೆ’ ಎನ್ನುತ್ತಾರೆ ಇತಿಹಾಸ ತಜ್ಞ ಡಾ.ಕೃಷ್ಣ ಕೊಲ್ಹಾರಕುಲಕರ್ಣಿ.

ದಿಕ್ಕಿಗೊಂದು ಕಚೇರಿ: ‘ಜಿಲ್ಲಾ ಆಡ ಳಿತ ಭವನ ಇಲ್ಲದ ಕಾರಣ ಬಹುತೇಕ ಸರ್ಕಾರಿ ಕಚೇರಿಗಳು ಖಾಸಗಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಧಿಕಾರಿಗಳು ಮನಬಂದಂತೆ ದೂರದ ಬಡಾವಣೆಗಳಲ್ಲಿ ಕಟ್ಟಡಗಳನ್ನು ಬಾಡಿ ಗೆಗೆ ಪಡೆದಿದ್ದಾರೆ. ಯಾವ ಕಚೇರಿ ಎಲ್ಲಿದೆ ಎಂಬ ಮಾಹಿತಿಯೇ ದೊರೆ ಯುವುದಿಲ್ಲ. ದಿಕ್ಕಿಗೊಂದಿರುವ ಈ ಕಚೇರಿಗಳಿಗೆ ಅಲೆಯುವುದೇ ದೊಡ್ಡ ಸಮಸ್ಯೆಯಾಗಿದೆ’ ಎನ್ನುತ್ತಾರೆ ಸಾರ್ವ ಜನಿಕರು.

‘ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಅಗತ್ಯವಿರುವಷ್ಟು ಸರ್ಕಾರಿ ವಸತಿ ಗೃಹಗಳಿಲ್ಲ. ಅವುಗಳಲ್ಲಿ ವಾಸವಾಗಿ ರುವ ಕೆಲವರು ತಮಗೆ ವರ್ಗ ವಾಗಿ ದ್ದರೂ ಖಾಲಿ ಮಾಡಿಲ್ಲ. ಇನ್ನು ಇರುವ ಕೆಲವೇ ಕೆಲವು ವಸತಿ ನಿಲಯ ಗಳನ್ನು ಪಡೆಯಬೇಕೆಂದರೆ ಹರಸಾಹಸ ಮಾಡ ಬೇಕು. ಹಲವು ವರ್ಷ ಸರದಿ ಯಲ್ಲಿ ಕಾಯಬೇಕು’ ಎಂದು ನೌಕರರೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಪ್ರಸ್ತಾವ: ‘ಜಿಲ್ಲಾ ಮಟ್ಟದ ಎಲ್ಲ ಕಚೇರಿಗಳು ಒಂದೇ ಸೂರಿನಡಿ ಕಾರ್ಯ ನಿರ್ವಹಿಸುವಂತಾಗಲು ಜಿಲ್ಲಾ ಆಡಳಿತ ಭವನ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಅಗತ್ಯವಿರುವ ವಸತಿ ಸಮುಚ್ಛಯ ನಿರ್ಮಿಸುವ ಪ್ರಸ್ತಾವವೂ ಅದರಲ್ಲಿದೆ. ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಹತ್ತಿರ ಜಿಲ್ಲಾ ಆಡಳಿತ ಭವನ ನಿರ್ಮಾಣಕ್ಕಾಗಿ ಅಗತ್ಯ ಜಮೀನು ಮೀಸಲಿಡಲಾಗಿದೆ’ ಎಂಬುದು ಹೆಚ್ಚುವರಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರ ವಿವರಣೆ.

‘ಈಗಿರುವ ಜಿಲ್ಲಾಧಿಕಾರಿಗಳ ಕಚೇರಿ ಸಂರಕ್ಷಿತ ಸ್ಮಾರಕದಲ್ಲಿದೆ. ಶೌಚಾಲಯ ನಿರ್ಮಾಣ, ಚಿಕ್ಕಪುಟ್ಟ ಪರಿವರ್ತನೆ ಮತ್ತು ಕಟ್ಟಡ ನವೀಕರಣಕ್ಕೂ ಅವಕಾಶ ಇಲ್ಲವಾಗಿದೆ’ ಎಂಬುದು ಅವರ ಅಸಹಾಯಕತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.