ADVERTISEMENT

ನಾನು ಮುಖ್ಯಮಂತ್ರಿ ಆದರೆ ಆಲಮೇಲ ತಾಲ್ಲೂಕು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 5:42 IST
Last Updated 4 ಡಿಸೆಂಬರ್ 2017, 5:42 IST
ಸಿಂದಗಿಯಲ್ಲಿ ಭಾನುವಾರ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಪಾಲ್ಗೊಂಡ ಜನಸ್ತೋಮ.
ಸಿಂದಗಿಯಲ್ಲಿ ಭಾನುವಾರ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಪಾಲ್ಗೊಂಡ ಜನಸ್ತೋಮ.   

ಸಿಂದಗಿ: ನಾನು ಸಿಎಂ ಆದ 2–3 ತಿಂಗಳಲ್ಲಿ ಸಿಂದಗಿ ತಾಲ್ಲೂಕಿನ ಆಲಮೇಲ ಅನ್ನು ತಾಲ್ಲೂಕನ್ನಾಗಿ ಘೋಷಣೆ ಮಾಡುವೆ. ಈ ಚುನಾವಣೆಯನ್ನು ಹಗುರವಾಗಿ ತೆಗೆದುಕೊಳ್ಳಬೇಡಿ ಎಚ್ಚರಿಕೆಯಿಂದ ಕಮಲಕ್ಕೆ ಮತ ನೀಡಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತದಾರರಲ್ಲಿ ಮನವಿ ಮಾಡಿಕೊಂಡರು.

ಭಾನುವಾರ ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ವಿಜಯಪುರ ಜಿಲ್ಲೆ ಕೊನೆಯ 75ನೇ ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ಮಾತನಾಡಿದರು. ಸಿದ್ಧರಾಮಯ್ಯ ಸರ್ಕಾರ ರಾಜ್ಯಕ್ಕೆ ಮಲ್ಯೇಶಿಯಾದಿಂದ ಮರಳು ತರುವ ಕಾರ್ಯಕ್ಕೆ ಮುಂದಾಗಿದೆ. ರಾಜ್ಯದಲ್ಲಿನ ಮರಳು ಸಿಗುತ್ತಿಲ್ಲವೇ...? ಮಂತ್ರಿಗಳ ಮಕ್ಕಳು ಮರಳು ದಂಧೆಯಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯದ ಕಾಂಗ್ರೆಸ್ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ ಎಂದು ಟೀಕಿಸಿದರು.

ಇನ್ನು ಜೆಡಿಎಸ್ ಅಪ್ಪ–ಮಕ್ಕಳ ಪಾರ್ಟಿ ಇದನ್ನು ನಂಬಲೇ ಬೇಡಿ. ಜೆಡಿಎಸ್‌ಗೆ ವೋಟ್ ಕೊಟ್ಟರೆ ಅದು ಕಾಂಗ್ರೆಸ್ ಆಗಿ ಪರಿವರ್ತನೆಯಾಗುತ್ತದೆ ಎಂದು ಕಾಂಗ್ರೆಸ್–ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸುವುದರ ಜೊತೆಗೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ವಿರುದ್ಧ ಟೀಕಿಸಿ ಜನವರಿ ತಿಂಗಳಲ್ಲಿ ಅವರ ಹಗರಣ ಬಯಲಿಗೆ ಬರುತ್ತದೆ. ತಾಕತ್ತಿದ್ದರೆ ವೇದಿಕೆಗೆ ಬರಲಿ ಎಂದರು.

ADVERTISEMENT

ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ನೆಲಸಮ ಆಗಿದೆ. ಗುಜರಾತ್‌ನಲ್ಲೂ ಬಿಜೆಪಿ ದೊಡ್ಡ ಬಹುಮತ ಪಡೆದುಕೊಳ್ಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರ ಸಚಿವ ರಮೇಶ ಜಿಗಜಿಣಗಿ ಮಾತನಾಡಿ, ಕಾಂಗ್ರೆಸ್ ಅಂಬೇಡ್ಕರ್ ವಿರೋಧಿ ಪಕ್ಷ ಎಂದು ಜರಿದರು.

ಬಳ್ಳಾರಿ ಸಂಸದ ಶ್ರೀರಾಮುಲು, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷೆ ಭಾರತಿ ಶೆಟ್ಟಿ ಮಾತನಾಡಿದರು. ವೇದಿಕೆ ಎದುರಿನಲ್ಲೇ ಕಾರ್ಯಕರ್ತರು ನುಗ್ಗಿ ನೂಕು ನುಗ್ಗಲು ನಡೆಸಿದರು. ಕಾಟಾಚಾರಕ್ಕೆ ಕೆಲವು ಯುವಕರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಯಿತು.

ಮಾಜಿ ಶಾಸಕ ರವಿಕಾಂತ ಪಾಟೀಲ, ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಅರವಿಂದ ಲಿಂಬಾವಳಿ, ವಿಧಾನಪರಿಷತ್ ಸದಸ್ಯರಾದ ಅರುಣ ಶಹಾಪುರ, ಹಣಮಂತ ನಿರಾಣಿ ಇದ್ದರು. ಸಿದ್ದು ಬುಳ್ಳಾ ಸ್ವಾಗತಿಸಿದರು. ಶ್ರೀಕಾಂತ ಸೋಮಜಾಳ ವಂದಿಸಿದರು.ಸಮಾವೇಶಕ್ಕೂ ಮುನ್ನ ನಗರದಲ್ಲಿ ಸಾವಿರಾರು ಯುವಕರು ಬೈಕ್ ರ‍್ಯಾಲಿ ನಡೆಸಿದರು.

ಕಾಂಗ್ರೆಸ್‌ ನಾಟಕ ಬಂದ್‌ ಖೇಲ್ ಕತಂ...
ಮಾಜಿ ಸಚಿವ ಲಕ್ಷ್ಮಣ ಸವದಿ ಸಚಿವ ಎಂ.ಬಿ.ಪಾಟೀಲ ವಿರುದ್ದ ವಾಗ್ದಾಳಿ ನಡೆಸಿ ಮಲ್ಲನಗೌಡ ಹೊಸ ರಾಗ ಶುರು ಮಾಡಿದ್ದಾನೆ. ಬಸವಣ್ಣ ಅವರ ಕನಸ್ಸಿನಲ್ಲಿ ಬಂದು ವೀರಶೈವ–ಲಿಂಗಾಯತ ಬೇರೆ, ಬೇರೆ ಎಂದು ಹೇಳಿದ್ದಾರಂತೆ. ಜಾತಿ–ಜಾತಿ ಮಧ್ಯೆ ವಿಷ ಬೀಜ ಬಿತ್ತಲು ಮುಂದಾಗಿದ್ದಾರೆ. ಇನ್ನು ಮೇಲೆ ನಾಟಕ ಬಂದ್ ಖೇಲ್ ಖತಮ್ ಎಂದು ಕಾಂಗ್ರೆಸ್ಸಿಗರಿಗೆ ಎಚ್ಚರಿಕೆ ನೀಡಿದರು.

ಮಾಜಿ ಸಚಿವ ಗೋವಿಂದ ಕಾರಜೋಳ ಯಡಿಯೂರಪ್ಪ ಸಾಮಾಜಿಕ ಕಳಕಳಿ, ಶರಣಸಂಸ್ಕೃತಿ ಹೊಂದಿದ್ದಾರೆ. ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಹಲವಾರು ಜನಪರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ ಎಂದು ವಿವರಿಸಿದರು.

ಶಾಸಕ ರಮೇಶ ಭೂಸನೂರ, ರಾಜ್ಯದಲ್ಲಿ ಜೆಡಿಎಸ್ ಅಪ್ಪ–ಮಗನ ಪಕ್ಷವಾದಂತೆ. ಸಿಂದಗಿ ಮತಕ್ಷೇತ್ರದಲ್ಲೂ ಜೆಡಿಎಸ್ ಅಪ್ಪ–ಮಗನ ಪಕ್ಷವಾಗಿದೆ ಎಂದು ಮನಗೂಳಿ ಕುಟುಂಬ ರಾಜಕಾರಣವನ್ನು ನೇರವಾಗಿ ಟೀಕಿಸಿದರು.

* * 

ಸಿದ್ಧರಾಮಯ್ಯ ಮುಟ್ಟಿದ್ದೆಲ್ಲ ಮಾಯ. ಇದೇ ಅವರ ಆಡಳಿತ ವೈಖರಿ
ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.