ADVERTISEMENT

ಪುನರ್ವಸತಿ ಕೇಂದ್ರಕ್ಕೆ ಮಕ್ಕಳ ಕೊರತೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 4:42 IST
Last Updated 24 ಜೂನ್ 2013, 4:42 IST

ವಿಜಾಪುರ: ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆ ಅಡಿ ಇಲ್ಲಿಯ ಹಳೆಯ ಜಿಲ್ಲಾ ಆಸ್ಪತ್ರೆಯಲ್ಲಿ ಆರಂಭಿಸಿರುವ `ಪೌಷ್ಟಿಕ ಆಹಾರ ಪುನರ್ವಸತಿ ಕೇಂದ್ರ' ಮಕ್ಕಳ ಕೊರತೆ ಎದುರಿಸುತ್ತಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಕಿ ಸಂಖ್ಯೆಗಳ ಪ್ರಕಾರ ಜಿಲ್ಲೆಯಲ್ಲಿ ಆರು ವರ್ಷದೊಳಗಿನ ಮಕ್ಕಳ ಸಂಖ್ಯೆ 2.25 ಲಕ್ಷ. ಪೌಷ್ಟಿಕಾಂಶದಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ 4,000ಕ್ಕೂ ಅಧಿಕ.

ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿರುವ ಮಕ್ಕಳ ಆರೈಕೆಗಾಗಿಯೇ ರೂ.25 ಲಕ್ಷ ವೆಚ್ಚದಲ್ಲಿ ಇಲ್ಲಿಯ ಜಿಲ್ಲಾ ಆಸ್ಪತ್ರೆಯಲ್ಲಿ ಈ ಕೇಂದ್ರ ತೆರೆಯಲಾಗಿತ್ತು. ಆ ನಂತರ ಅದನ್ನು ಇಲ್ಲಿಯ ಹಳೆಯ ಜಿಲ್ಲಾ ಆಸ್ಪತ್ರೆ (ಈಗ ಡಿಎಚ್‌ಒ ಕಚೇರಿ) ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.

10 ಹಾಸಿಗೆಗಳ ಸುಸಜ್ಜಿತ ಕೇಂದ್ರ ಇದಾಗಿದೆ. ಮಕ್ಕಳ ಆಟಕ್ಕಾಗಿ ಪುಟ್ಟ ಉದ್ಯಾನ ಇದ್ದು, ಆಟಿಗೆ ಸಾಮಾನು ಅಳವಡಿಸಲಾಗಿದೆ. ಆದರೆ, ಇಲಾಖೆಗಳ ಮಧ್ಯೆ ಹೊಂದಾಣಿಕೆ ಇಲ್ಲದಿರುವುದು ಮತ್ತು ಗ್ರಾಮೀಣ ಪ್ರದೇಶದಲ್ಲಿ ಜಾಗೃತಿಯ ಕೊರತೆಯಿಂದಾಗಿ ಈ ಕೇಂದ್ರದ ಹೆಚ್ಚಿನ ಪ್ರಯೋಜನ ಫಲಾನುಭವಿಗಳಿಗೆ ದೊರೆಯುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ.

`ಮೂವರು ಶುಶ್ರೂಷಕಿಯರು, ಒಬ್ಬರು ಅಡುಗೆಯವರು, `ಡಿ' ದರ್ಜೆಯ ಸಿಬ್ಬಂದಿಯನ್ನು ಈ ಕೇಂದ್ರಕ್ಕೆ ನೇಮಕ ಮಾಡಲಾಗಿದೆ. ವೈದ್ಯರೂ ಸಹ ನಿಯಮಿತವಾಗಿ ಕೇಂದ್ರಕ್ಕೆ ಭೇಟಿ ನೀಡುತ್ತಾರೆ. ರೋಗಿ ಹಾಗೂ ಅವರೊಟ್ಟಿಗೆ ಇರುವ ಒಬ್ಬರಿಗೆ ಊಟವನ್ನು ಉಚಿತವಾಗಿ ನೀಡಲಾಗುತ್ತಿದೆ.

ಸಾಮಾನ್ಯವಾಗಿ ಒಂದು ಮಗುವಿಗೆ 10ರಿಂದ 15 ದಿನಗಳ ಕಾಲ ಇಲ್ಲಿ ಆರೈಕೆ ಮಾಡಲಾಗುತ್ತಿದೆ' ಎಂದು ಜಿಲ್ಲಾ ಸರ್ಜನ್ ಡಾ.ಆರ್.ಎಂ. ಸಜ್ಜನ ಹೇಳಿದರು.

`ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರೂ ಈ ಕೇಂದ್ರಕ್ಕೆ ಬರುತ್ತಿರುವ ಮಕ್ಕಳ ಸಂಖ್ಯೆ ಕಡಿಮೆ ಇರುವುದು ನಿಜ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ, ಅಂಗನವಾಡಿ ಕಾರ್ಯಕರ್ತೆಯರು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿರುವ ಮಕ್ಕಳನ್ನು ಈ ಕೇಂದ್ರಕ್ಕೆ ಕಳಿಸಲು ಪ್ರಯತ್ನಿಸಬೇಕು' ಎನ್ನುತ್ತಾರೆ ಅವರು.

`ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಅಂದಾಜು 2,000ರಷ್ಟಿದೆ. ಈ ಮಕ್ಕಳನ್ನು ಗುರುತಿಸಿ ಪೌಷ್ಟಿಕ ಆಹಾರ ಪುನರ್ವಸತಿ ಕೇಂದ್ರಕ್ಕೆ ಕಳಿಸುವಲ್ಲಿ ಸಿಡಿಪಿಒ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಸರಿಯಲ್ಲ. ಅಂಗನವಾಡಿಗೆ ಬರುವ ಪ್ರತಿ ಮಗುವಿನ ತೂಕ ಮಾಡಿ ಅದನ್ನು ದಾಖಲೆಯನ್ನು ನಮೂದಿಸುವ ಕೆಲಸವನ್ನು ಅಂಗನವಾಡಿ ಕಾರ್ಯಕರ್ತೆಯರು ಮಾಡುತ್ತಾರೆ. ಅಂತಹ ಮಕ್ಕಳನ್ನು ಈ ಕೇಂದ್ರಕ್ಕೆ ಕಳಿಸಬೇಕಾದ ಜವಾಬ್ದಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರದ್ದು' ಎಂಬುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಿ.ಪಿ. ವಸಂತಪ್ರೇಮ ಅವರ ವಿವರಣೆ.

`ವಿಜಾಪುರ ನಗರದಲ್ಲಿ ಬಿ.ಎಲ್. ಡಿ.ಇ. ಆಸ್ಪತ್ರೆ ಮತ್ತು ಡಾ.ಎಲ್. ಎಚ್. ಬಿದರಿ ಅವರ ಆಸ್ಪತ್ರೆಯಲ್ಲಿ ಬಾಲಸಂಜೀವಿನಿ ಯೋಜನೆಯಡಿ ಚಿಕಿತ್ಸೆ ದೊರೆಯುತ್ತಿದೆ. ಬಹುಪಾಲು ಮಕ್ಕಳು ಈ ಎರಡು ಆಸ್ಪತ್ರೆಗೆ ಹೋಗುತ್ತಿದ್ದಾರೆ. ಪೌಷ್ಟಿಕ ಆಹಾರ ಪುನರ್ವಸತಿ ಕೇಂದ್ರಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗಲು ಇದೂ ಒಂದು ಕಾರಣ' ಎಂದೂ ಅವರು ಹೇಳಿದರು.

`ಇಲಾಖೆಗಳ ಮಧ್ಯೆ ಹೊಂದಾಣಿಕೆ ಇಲ್ಲದಿರುವುದೇ ಇದಕ್ಕೆ ಕಾರಣ. ಸಂಬಂಧಿಸಿದ ಇಲಾಖೆಯವರು ಜಂಟಿಯಾಗಿ ಸಭೆ ನಡೆಸಿ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಇವರ ಜಗಳದಲ್ಲಿ ಕೇಂದ್ರ ಸರ್ಕಾರದ ಯೋಜನೆಯ ಪ್ರಯೋಜನ ನಿಜವಾದ ಫಲಾನುಭವಿಗಳಿಗೆ ದೊರೆಯುತ್ತಿಲ್ಲ. ಇದು ದುರ್ದೈವದ ಸಂಗತಿ' ಎನ್ನುತ್ತಾರೆ ಪಾಲಕರೊಬ್ಬರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.