ತಾಂಬಾ: ಹೊಲದಲ್ಲಿ ತಲೆತೂಗುವ ತೆನೆಗಳು, ಅವುಗಳ ವಯ್ಯಾರ ಭೂಸಿರಿ. ಹಿಂಗಾರಿ ಬೆಳೆಗಳು ಚಿಗುರು ಹಂತವನ್ನು ದಾಟಿ ತೆನೆ ಹಾಕಿದ ಈ ಹಂತದಲ್ಲಿ ಬರುವ ಎಳ್ಳ ಅಮಾವಾಸ್ಯೆಯಂದು ರೈತನಿಗೆ,ಆತನ ಬಂಧು ಬಳಗಕ್ಕೆ ಅದೇನು ಸಡಗರ ಅದೇನು ಸಂಭ್ರಮ!
ಬುಧವಾರ ನಡೆದ ಎಳ್ಳ ಅಮಾವಾಸ್ಯೆ ರೈತರಿಗೆ ಸಂಭ್ರಮ ತಂದಿತ್ತು.
ನೆಲವನ್ನು ಉತ್ತಿ, ಬೀಜ ಬಿತ್ತಿ, ಗೊಬ್ಬರಹಾಕಿ ಬೆಳೆ ಮೈತುಂಬಿಕೊಂಡಾಗ ರಾಶಿಗಾಗಿ ಕಾಯುವ ದಿನಗಳಲ್ಲಿ ಬೆಳೆ ಹುಲುಸಾಗಿ ಬರಲಿ ಎಂದು ದೇವರಿಗೆ ಪೊಜೆಯೊಂದೇ ಮುಖ್ಯವಾದರೂ ಅದರೊಂದಿಗೆನ ಮನೆ ಮಂದಿಯೆಲ್ಲ ಕೂಡಿ ಚಕ್ಕಡಿ ಕಟ್ಟಿಕೊಂಡು, ಬುತ್ತಿ ಹೊತ್ತು ಹೊಲಕ್ಕೆ ಸಾಗಿ,ಅಲ್ಲಿ ಸಹಭೋಜನ ಮಾಡಿ ಸಂಭ್ರಮಿಸಿದರು.
ಶೃಂಗಾರ ಮಾಡಿದ ಎತ್ತುಗಳು, ಸೊಂಡಿ ಚೀಲ ಹಾಕಿದ ಬಂಡಿಯಲ್ಲಿ ಚೆಂದದ ಬಾರುಕೋಲಿನಿಂದ ಮನೆ ಯಜಮಾನ ಪ್ರೀತಿಯಿಂದ ಎತ್ತುಗಳನ್ನು ಬೆದರಿಸುತ್ತಿದ್ದರೆ, ತನ್ನದೇ ಆದ ಲಯದೊಂದಿಗೆ ಮಕ್ಕಳ ಕೇಕೆ,ಹೆಂಗಳೆಯರ ಮಾತುಗಳೊಂದಿಗೆ ಬಂಡಿ ಹೊಲದತ್ತ ಸಾಗಿದರು.
ಬಗೆಯ ಕಾಳುಗಳು, ಪುಂಡಿಪಲ್ಲೆ, ವಿಶೇಷ ಖಾದ್ಯ ಬರ್ತ, ಮೊಸರು,ಶೇಂಗಾ ಚಟ್ನಿ ಕಾರೆಳ್ಳು ಚಟ್ನಿ, ಕರಿಗೆಡಬು, ಸೆಜ್ಜಿಕಡಬು, ಸೆಂಗಾ ಹೋಳಿಗೆ, ಹೂರಣದ ಹೋಳಿಗೆ, ತುಪ್ಪ, ಸಂಡಿಗೆ, ಅನ್ನ ಮುಂತಾದ ಭೋಜನ ಸವಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.