ADVERTISEMENT

ಮತದಾರರ ಮೋಡಿಗೆ ‘ಹಾಡು...!’

ರಂಗೇರಿದ ‘ಹಾಡಿನ’ ಪ್ರಚಾರ; ಆಕರ್ಷಣೆಗೊಳಗಾಗುತ್ತಿರುವ ಮತದಾರ

​ಪ್ರಜಾವಾಣಿ ವಾರ್ತೆ
Published 4 ಮೇ 2018, 12:39 IST
Last Updated 4 ಮೇ 2018, 12:39 IST

ವಿಜಯಪುರ: ಬಿಸಿಲ ಝಳ ಹೆಚ್ಚಿದಂತೆ ಚುನಾವಣಾ ಕಾವು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮತದಾರರ ಮನವೊಲಿಕೆಗೆ ಹತ್ತು ಹಲವು ಕಸರತ್ತು ನಡೆದಿದೆ.

ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಹಾಡುಗಳ ಮೂಲಕ ಮತದಾರರ ಮನ ಗೆಲ್ಲುವ ತಂತ್ರಗಾರಿಕೆಗೆ ಹಲ ಅಭ್ಯರ್ಥಿಗಳು ಮೊರೆಯಿಕ್ಕಿದ್ದಾರೆ.

ಚುನಾವಣಾ ಪ್ರಚಾರದಲ್ಲಿ ಭಾಷಣಗಳಿಗಿಂತ ಹಾಡುಗಳಿಗೆ ಆದ್ಯತೆ ಹೆಚ್ಚಿದೆ. ಗಲ್ಲಿ ಗಲ್ಲಿಯಲ್ಲೂ, ಓಣಿ ಓಣಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಆಟೊಗಳಲ್ಲಿ ಮೈಕ್‌ ಹಚ್ಚಿ, ಅಭ್ಯರ್ಥಿ ಪರವಿರುವ ಸಾಹಿತ್ಯದ ಹಾಡುಗಳೀಗ ಎಲ್ಲೆಡೆ ಅನುರಣಿಸುತ್ತಿವೆ.

ADVERTISEMENT

ಆಯಾ ಭಾಷೆಯ ಮತದಾರರನ್ನು ಸೆಳೆಯಲು ಕನ್ನಡ, ಹಿಂದಿ ಭಾಷೆಯಲ್ಲೂ ಹಾಡುಗಳನ್ನು ವ್ಯಾಪಕವಾಗಿ ಪ್ರಸಾರ ಮಾಡುವ ಮೂಲಕ ಮತದಾರರ ಮನ ಗೆಲ್ಲುವ ಯತ್ನ ಮತದಾನದ ದಿನ ಸಮೀಪಿಸಿದಂತೆ ಬಿರುಸುಗೊಂಡಿದೆ.

‘ಈ ಹಿಂದೆ ಪಕ್ಷದ ಕುರಿತ ಹಾಡುಗಳನ್ನು ಪ್ರಚಾರ ವಾಹನದಲ್ಲಿ, ಗ್ರಾಮಗಳಲ್ಲಿನ ಪ್ರಚಾರ ಕಾರ್ಯಾಲಯದಲ್ಲಿ ಬಳಸಲಾಗುತ್ತಿತ್ತು. ಆದರೆ ಈ ಚುನಾವಣೆಯಲ್ಲಿ ಪಕ್ಷದ ಹಾಡಿನ ಜತೆಗೆ ಅಭ್ಯರ್ಥಿಗಳು ಪೈಪೋಟಿಗೆ ಬಿದ್ದವರಂತೆ ತಮ್ಮ ಕುರಿತ ಹಾಡುಗಳ ಮೂಲಕ ಜನರನ್ನು ಆಕರ್ಷಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಇದರಿಂದ ಭಾಷಣಕ್ಕಿಂತ ಹಾಡುಗಳ ಅಬ್ಬರ ಹೆಚ್ಚಾಗಿ ಕೇಳಿ ಬರುತ್ತಿದೆ’ ಎನ್ನುತ್ತಾರೆ ವಿಜಯಪುರದ ಆನಂದ ಪಾಟೀಲ.

‘ಪ್ರತಿ ಚುನಾವಣೆಯಲ್ಲಿ ಭಾಷಣ ಕೇಳುವುದು, ಅಲ್ಲಲ್ಲಿ ಪೋಸ್ಟರ್‌ ಹಚ್ಚುವುದು, ದೊಡ್ಡ ದೊಡ್ಡ ಬ್ಯಾನರ್‌ಗಳನ್ನು ಹಾಕುವುದು ಕಂಡು ಬರುತ್ತಿತ್ತು. ಈ ಚುನಾವಣೆಯಲ್ಲಿ ಈ ಎಲ್ಲವೂಗಳ ಜತೆಗೆ ಎಲ್ಲಿ ನೋಡಿದರಲ್ಲಿ ಅಭ್ಯರ್ಥಿಗಳ ಕುರಿತ ಹಾಡುಗಳು ಕೇಳಲಾರಂಭಿಸಿವೆ.

ತಮ್ಮ ಕುರಿತ ಹಾಡುಗಳನ್ನು ಅಭ್ಯರ್ಥಿಗಳು ಎಲ್ಲೆಡೆ ಪ್ರಚಾರ ಮಾಡಿಸುತ್ತಿದ್ದಾರೆ. ಕೆಲ ಕಡೆ ಕಲಾವಿದರಿಂದಲೇ ಹಾಡಿಸಿ ಮತದಾರರನ್ನು ಸೆಳೆಯುವ ಯತ್ನ ನಡೆಸಿದ್ದಾರೆ. ಇದರೊಟ್ಟಿಗೆ ಯುವಕರನ್ನು ಆಕರ್ಷಿಸಲು ಫೇಸ್‌ಬುಕ್‌, ವಾಟ್ಸ್ಆ್ಯಪ್‌ಗಳಲ್ಲಿ ಸಹ ಹರಿಯ ಬಿಡುವ ಮೂಲಕ ಜನರನ್ನು ತಮ್ಮತ್ತ ಸೆಳೆಯುವ ಕೆಲಸ ನಡೆಸಿದ್ದಾರೆ’ ಎಂದು ಬಸವನಬಾಗೇವಾಡಿ ತಾಲ್ಲೂಕು ಬೂದಿಹಾಳ ಗ್ರಾಮದ ಸಿದ್ದನಗೌಡ ಬಿರಾದಾರ ಹೇಳಿದರು.

ಎಲ್‌ಇಡಿ ಬಳಕೆ

ಭಿತ್ತಿ ಪತ್ರ, ಕರ ಪತ್ರಗಳ ಅಬ್ಬರ ಈ ಚುನಾವಣೆಯಲ್ಲೂ ಮುಂದುವರೆದಿದ್ದರೂ, ಇವುಗಳ ಜತೆ ಇದೀಗ ಎಲ್‌ಇಡಿ ಪರದೆ ಮೂಲಕ ಅಭ್ಯರ್ಥಿ, ಪಕ್ಷದ ಆಶಯ, ಸಾಧನೆ ಬಿಂಬಿಸುವ ಪ್ರಚಾರ ವಾಹನಗಳು ಜಿಲ್ಲೆಯ ವಿವಿಧೆಡೆ ಸಂಚರಿಸುತ್ತಿವೆ.

ಕೆಲ ಮತಕ್ಷೇತ್ರಗಳಲ್ಲಿ ತಮ್ಮ ನೆಚ್ಚಿನ ಅಭ್ಯರ್ಥಿ ಗೆಲುವಿಗಾಗಿ ಬೆಂಬಲಿಗರು ತೆಂಗು ಒಡೆಯುವ ಹರಕೆ ಹೊತ್ತಿದ್ದಾರೆ. ಕೆಲವರು ದೀಡ್‌ ನಮಸ್ಕಾರದ ಹರಕೆಯನ್ನು ಈಗಲೇ ತೀರಿಸಲು ಮುಂದಾಗುತ್ತಿರುವುದು ಜಿಲ್ಲಾ ಚುನಾವಣಾ ಕಣದ ಚಿತ್ರಣ.

**
ಪಕ್ಷಕ್ಕಿಂತ ಅಭ್ಯರ್ಥಿಗಳ ಕುರಿತ ಹಾಡುಗಳು ಚುನಾವಣಾ ಕಣದಲ್ಲಿ ಹೆಚ್ಚು ಪ್ರಚಲಿತಗೊಂಡಿವೆ. ಕೆಲವೆಡೆ ಜಾನಪದ ಕಲಾವಿದರಿಂದಲೂ ಹಾಡಿಸಿ, ಮತದಾರರನ್ನು ಸೆಳೆಯಲಾಗುತ್ತಿದೆ
– ಪ್ರಶಾಂತ ಬೈಚಬಾಳ, ಮಸಬಿನಾಳ

**

ಬಾಬುಗೌಡ ರೋಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.