ADVERTISEMENT

ಮಸೂತೆವ್ವ ದೇವಿಗೆ ಅದ್ದೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 8:25 IST
Last Updated 12 ಅಕ್ಟೋಬರ್ 2012, 8:25 IST

ಚಡಚಣ: ಬರಡೋಲ ಗ್ರಾಮದಲ್ಲಿ ಸುಮಾರು 28 ವರ್ಷಗಳಿಂದ ನಿಂತು ಹೋಗಿದ್ದ  ಮಸೂತೆವ್ವ ದೇವಿಯ ಧಾರ್ಮಿಕ ಆಚರಣೆಗೆ ಗುರುವಾರ ಗ್ರಾಮಸ್ಥರು ಮತ್ತೆ ಚಾಲನೆ ನೀಡಿದರು.

 ವಾಡಿಕೆಯಂತೆ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಲೋಣಿ ಗ್ರಾಮದಿಂದ ತವರು ಮನೆ ಬರಡೋಲ ಗ್ರಾಮಕ್ಕೆ ಮಹಾಸತಿ ಮಸೂತೆವ್ವ ಅವಳನ್ನು ಕರೆ ತರುವ ವಾಡಿಕೆ. ಆದರೆ 28 ವರ್ಷ ಗತಿಸಿದರೂ ಮಸೂತೆವ್ವ ದೇವಿಯನ್ನು ಕರೆ ತರುವಲ್ಲಿ ಬರಡೋಲ ಗ್ರಾಮಸ್ಥರು ನಿರ್ಲಕ್ಷ ತೋರಿದ್ದಾರೆ. ಇದರಿಂದ ಮಳೆ ಬೆಳೆ ಚೆನ್ನಾಗಿ ಆಗುತ್ತಿಲ್ಲ, ಗ್ರಾಮದಲ್ಲಿ ನೆಮ್ಮದಿ ಇಲ್ಲ, ಹೀಗಾಗಿ ದೇವಿಯನ್ನು ಮತ್ತೆ ಕರೆ ತಂದರೆ, ಗ್ರಾಮದಲ್ಲಿ ಸುಖ ಶಾಂತಿ ಹಾಗೂ ನೆಮ್ಮದಿ ಮೂಡುವುದು  ಎನ್ನುವ  ನಂಬಿಕೆಯಂತೆ ಈ ಧಾರ್ಮಿಕ ಆಚರಣೆ ಮಾಡಲಾಗುತ್ತಿದೆ ಎಂದು ಗ್ರಾಮದ ಹಿರಿಯರಾದ ಭೀಮಶ್ಯಾ ಮುಂಡೇವಾಡಿ, ಕಾಂತಪ್ಪಗೌಡ ಬಿರಾದಾರ, ಜ್ಞಾನೋಬರಾಯ ಬಿರಾದಾರ, ಭಿಮಶ್ಯಾ ಮೇತ್ರಿ “ಪ್ರಜಾವಾಣಿ”ಗೆ  ಮಾಹಿತಿ ನೀಡಿದರು.

  ಬೆಳಿಗ್ಗೆ ಕಾಲ್ನಡಿಗೆಯ ಮೂಲಕ ಮಸೂತೆವ್ವ ದೇವಿಯ ಗಂಡನೆ ಮನೆ ಲೋಣಿ(ಬಿ.ಕೆ.) ಗ್ರಾಮಕ್ಕೆ ತೆರಳಿದ ನೂರಾರು ಭಕ್ತರು, ಸಾಯಂಕಾಲ ಕುದರೆಯ ಮೇಲೆ ಅವಳನ್ನು ಕರೆ ತಂದರು. ದೇವಿ ಗ್ರಾಮ ಪ್ರವೇಶ ಮಾಡುತ್ತಿದ್ದಂತೆ ಗ್ರಾಮದ ಮಹಿಳೆಯರು, ಪುರುಷರು ಸೇರಿ ವಾದ್ಯ  ವೃಂದಗಳ ಮೂಲಕ ಅದ್ದೂರಿ ಸ್ವಾಗತ ನೀಡಿದರು. ನಂತರ ಮಸೂತೆವ್ವ ದೇವಾಲಯದಲ್ಲಿ ವಿವಿಧ ಧಾರ್ಮಿಕ ಆಚರಣೆ ಕೈಗೊಂಡು ಭಕ್ತಾದಿಗಳಿಗೆ ಮಹಾ ಪ್ರಸಾದ ವ್ಯವಸ್ಥೆ ಮಾಡಿದರು.  ನಂತರ ಸಾರ್ವಜನಿಕರು `ಗ್ರಾಮಕ್ಕೆ ಮಳೆ ಬೆಳೆ ಚೆನ್ನಾಗಿ ಕೊಡು~ ಎಂದು ದೇವಿಯಲ್ಲಿ ಪ್ರಾರ್ಥಿಸಿದರು.

ಮಸೂತೆವ್ವ ದೇವಿಯ ಸ್ವಾಗತ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ, ಗ್ರಾಮ ಪಂಚಾಯಿತಿ ಅಧ್ಯಕ್ಷ ತುಕಾರಾಮ ಶಿಂಧೆ, ಮಾಳಿ ಸಮಾಜದ ಅಧ್ಯಕ್ಷ ಭೀಮಶ್ಯಾ ಮೇತ್ರಿ,ಮಲಕಣ್ಣ ಪಟ್ಟಣಶೆಟ್ಟಿ, ಜೈನುಸಾಬ ಕೊಂಕಣಿ,ದಾದಾಸಾಹೇಬ ಗುಮಾಸ್ತೆ,ಬಸವರಾಜ ಮೇತ್ರಿ,ವಿಠ್ಠಲ ಹೊಸವಕ್ಕಲಿಗ, ಗೌತಮ ಕಟ್ಟಿಮನಿ, ಮುದಕಪ್ಪ ತಳವಾರ, ಹಣಮಂತ ನಂದೂರ, ಗುರುಶಾಂತ ಕುಂಬಾರ, ಭೋಜು ಪವಾರ, ಸಿದ್ದಣ್ಣ ಕುಂಬಾರ, ನಿಂಗು ಮೇತ್ರಿ, ಬಾಬಣ್ಣ ಝಳಕಿ, ರೇವಪ್ಪ ಬಜಂತ್ರಿ, ಪಿಎಸ್ಸೈ ಮಹಾದೇವ ಯಲಿಗಾರ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.