ಮುದ್ದೇಬಿಹಾಳ: ‘ಪತ್ರಕರ್ತರು ಕೆಟ್ಟ ಸುದ್ದಿಗಳಿಗೆ ಕಡಿಮೆ ಆದ್ಯತೆ ಕೊಟ್ಟು, ಒಳ್ಳೆಯ ಮೌಲ್ಯ ಸಾರುವ ಸುದ್ದಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಕಟಿಸಬೇಕು’ ಎಂದು ರಾಜಸ್ತಾನದ ರಾಜಖುಷಿ ಮತ್ತು ಮೌಲ್ಯಾನುಗತ ಪತ್ರಿಕಾ ಪತ್ರಿಕೆಗಳ ಸಂಪಾದಕ ಬಿಕೆ ಕಮಲ್ ದೀಕ್ಷಿತ್ ಹೇಳಿದರು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮಾಧ್ಯಮ ವಿಭಾಗದ ತಾಲ್ಲೂಕಿನ ಮಾಧ್ಯಮ ಪ್ರತಿನಿಧಿಗಳಿಗೆ ಪಟ್ಟಣದಲ್ಲಿ ಮಂಗಳವಾರ ಏರ್ಪಡಿಸಿದ್ದ, ‘ಮೌಲ್ಯಯುತ ಸಮಾಜ ಸ್ಥಾಪಿಸುವಲ್ಲಿ ಮಾಧ್ಯಮಗಳ ಪಾತ್ರ’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
‘ಮಾಧ್ಯಮ ಪ್ರತಿನಿಧಿಗಳು ಮೌಲ್ಯಗಳನ್ನು ಅರಿತು ಕರ್ತವ್ಯ ನಿರ್ವಹಿಸಬೇಕು. ಹಿಂಸೆ ಮತ್ತು ನಕಾರಾತ್ಮಕ ವಿಷಯಗಳ ವಿಜೃಂಭಣೆಗೆ ಅವಕಾಶ ನೀಡಬಾರದು. ಇದ್ದದ್ದನ್ನು ಇದ್ದ ಹಾಗೆ ಹೇಳುವ ಮನೋಭಾವ ಬೆಳೆಸಿಕೊಳ್ಳಬೇಕು. ಆಧುನಿಕ ಜಗತ್ತಿನಲ್ಲಿ ಸಾಮಾಜಿಕ ವರ್ತನೆ ಮಾಧ್ಯಮದ ಪ್ರಭಾವಕ್ಕೆ ಒಳಪಡುತ್ತಿದೆ. ಇದರಿಂದಾಗಿ ಮಾಧ್ಯಮದವರು ವೃತ್ತಿ ಮೌಲ್ಯ ಕಾಪಾಡಿಕೊಂಡು, ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು’ ಎಂದು ಅಭಿಪ್ರಾಯಪಟ್ಟರು.
ದೆಹಲಿಯ ಬ್ರಹ್ಮಾಕುಮಾರಿ ಮಾಧ್ಯಮ ವಿಭಾಗದ ರಾಷ್ಟ್ರೀಯ ಸಂಯೋಜಕ ಬಿ.ಕೆ. ಸುಶಾಂತ್, ‘ಮಾನಸಿಕ ಆರೋಗ್ಯ ಸಮಾಜದ ಸ್ವಾಸ್ಥ್ಯ ಕಾಪಾಡು
ತ್ತದೆ. ಹೀಗಾಗಿ, ಪತ್ರಕರ್ತರಿಗೆ ಮಾನಸಿಕ ಸಮತೋಲನ ಮುಖ್ಯ. ಪ್ರತಿಯೊಬ್ಬರು ತಮ್ಮ ಮನಸ್ಸಿನ
ಲ್ಲಿರುವ ಅನಾರೋಗ್ಯ ಹೊಡೆದೋಡಿಸಲು ಸ್ವಲ್ಪ ಸಮಯವನ್ನು ಧ್ಯಾನಕ್ಕೆ ಮೀಸಲಿಡಬೇಕು’ ಎಂದು ಸಲಹೆ ನೀಡಿದರು.
ಸ್ಥಳಿಯ ಓಂಶಾಂತಿ ಭವನದ ರಾಜಯೋಗಿನಿ ಬಿ.ಕೆ. ಮಂಜುಳಾ ಮಾತನಾಡಿದರು. ತಾಲ್ಲೂಕು ಕಾರ್ಯನಿರತರ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಬಿ. ವಡವಡಗಿ, ಕಾರ್ಯದರ್ಶಿ ಶೇಖ್ ಲಾಡ್ಲೇಮಶ್ಯಾಕ್ ನದಾಫ ಹಾಗೂ ಪುಂಡಲಿಕ ಮುರಾಳ ಅನಿಸಿಕೆ ವ್ಯಕ್ತಪಡಿಸಿದರು.
ಬಿ.ಕೆ. ಶಂತನು, ಶ್ರೇಯಾ, ಪೂಜಾ, ಸುವರ್ಣಾ ಹಾಗೂ ಬಸವರಾಜ ಹುನಗುಂದ ಇದ್ದರು. ಉದ್ಯಮಿ ರಾಜೇಂದ್ರ ಭೋಸಲೆ ಸ್ವಾಗತಿಸಿದರು. ರೇಣುಕಾ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.