ವಿಜಾಪುರ: `ಮಹಾದೇವನ (ಶಿವ) ಸ್ಮರಣೆಯಿಂದ ಜೀವನದಲ್ಲಿ ಸಮೃದ್ಧಿ ದೊರೆಯು ತ್ತದೆ. ಮೋಕ್ಷವೂ ಪ್ರಾಪ್ತಿಯಾಗುತ್ತದೆ~ ಎಂದು ಉಜನಿ ಪೀಠದ ಸಿದ್ಧಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿಯ ಶಹಾಪೇಟಿಯ ಐತಿಹಾಸಿಕ ಮಹಾದೇವ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಹಾಗೂ ಧರ್ಮ ಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
`ಹಿಂದಿನ ಕಾಲದಲ್ಲಿ ನಾಲ್ಕೂ ವೇದಗಳನ್ನು ಅಧ್ಯಯನ ಮಾಡುವ ಪರಂಪರೆ ಇತ್ತು. ಆದರೀಗ ಅದು ಆಗುತ್ತಿಲ್ಲ. ಎಲ್ಲರೂ ಶಿವನ ಚಿಂತನೆಯಲ್ಲಿ ತೊಡಗಿ ಜೀವನ ಪಾವನ ಮಾಡಿಕೊಳ್ಳಬೇಕು~ ಎಂದರು.
`ವಿಜಾಪುರ ಕೇವಲ ಕರ್ನಾಟಕದ ಪಂಜಾಬ್ ಅಷ್ಟೇ ಅಲ್ಲ. ಜಗದ್ಗುರು ಪಂಚ ಪೀಠಾಧೀಶರರಿಗೆ ಮಾತೃ ಸ್ವರೂಪಿಯಾಗಿರುವ ನಾಡು. ಎಲ್ಲರಿಗೂ ಆಶ್ರಯ ನೀಡುವ ತಾಣ. ಎಲ್ಲ ಕಾರ್ಯಕ್ರಮ ಗಳನ್ನೂ ಯಶಸ್ವಿಗೊಳಿಸುವ ವಿಜಯಪುರ~ ಎಂದು ಬಣ್ಣಿಸಿದರು.
ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
`ಜೀರ್ಣೋದ್ಧಾರಗೊಂಡ ನಂತರ ಈ ದೇವಾಲಯವನ್ನು ಪಂಚ ಪೀಠಾಧೀಶರಿಂದಲೇ ಉದ್ಘಾಟಿಸಬೇಕು~ ಎಂದು ನಾಗಠಾಣದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಸಲಹೆ ನೀಡಿದರು. ಸಿಂದಗಿ ಸಾರಂಗಮಠದ ಪ್ರಭು ಸಾರಂಗದೇವ ಸ್ವಾಮೀಜಿ ಮಾತನಾಡಿದರು.
ಶಾಸಕ ಅಪ್ಪು ಪಟ್ಟಣಶೆಟ್ಟಿ, ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಮಹಾದೇವ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಐದು ಲಕ್ಷ ರೂಪಾಯಿ ನೆರವು ನೀಡುವುದಾಗಿ ಭರವಸೆ ನೀಡಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಮಹಾದೇವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಎರಡು ವರ್ಷದಲ್ಲಿ ಪೂರ್ಣಗೊಳ್ಳಬೇಕು. ಇಲ್ಲಿ ಮಂಗಲ ಕಾರ್ಯಾಲಯ ನಿರ್ಮಿಸುವುದು ಬೇಡ. ಇದು ಸುಂದರ ಮಂದಿರವಾಗಿ ರೂಪಗೊಳ್ಳಬೇಕು. ಈ ಜಿಲ್ಲೆಯನ್ನು ಬೇಗನೆ ಧೂಳಿನಿಂದ ಮುಕ್ತಗೊಳಿಸಬೇಕು ಎಂದರು.
ಶಾಸಕ ವಿಠ್ಠಲ ಕಟಕಧೋಂಡ, ನಗರಸಭೆ ಸದಸ್ಯ ಮಿಲಿಂದ ಚಂಚಲಕರ ಮಾತನಾಡಿದರು.
ಚಿಮ್ಮಲಗಿಯ ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ರಾಮದುರ್ಗ ಬನ್ನೂರ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಬರಗಿ ಮಠದ ಸ್ವಾಮೀಜಿ, ತಿಕೋಟಾ ಸ್ವಾಮೀಜಿ, ನಗರಸಭೆ ಸದಸ್ಯ ರಾಜೇಶ ದೇವಗಿರಿ ಇತರರು ವೇದಿಕೆಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.