ಬಸವನಬಾಗೇವಾಡಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲ್ಲೂಕು ಸಮಾವೇಶದ ಅಂಗವಾಗಿ ಭಾನುವಾರ ಗಣವೇಷಧಾರಿ ಸ್ವಯಂಸೇವಕರಿಂದ ಆಕರ್ಷಕ ಪಥ ಸಂಚಲನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ಸ್ಥಳೀಯ ನಿಯೋಜಿತ ಮೆಗಾ ಮಾರುಕಟ್ಟೆ ಆವರಣದಲ್ಲಿ ಬಸವನಬಾಗೇವಾಡಿ ಹಾಗೂ ತಾಳಿಕೋಟೆಯ ಸ್ವಯಂ ಸೇವಕರ ಘೋಷವಾದ್ಯ ತಂಡಗಳೊಂದಿಗೆ 300ಕ್ಕೂ ಹೆಚ್ಚು ಗಣವೇಶಧಾರಿ ಸ್ವಯಂಸೇವಕರೊಂದಿಗೆ ಆರಂಭವಾದ ಪಥ ಸಂಚಲನವು ಪ್ರಮುಖ ರಸ್ತೆಗಳಲ್ಲಿ ಸಾಗಿ ವಿಜಯಪುರ ರಸ್ತೆ ಮಾರ್ಗವಾಗಿ ಬಸವೇಶ್ವರ ಪದವಿ ಪೂರ್ವ ಕಾಲೇಜು ಆವರಣದ ಸಮಾವೇಶದ ಮುಖ್ಯ ವೇದಿಕೆಗೆ ತಲುಪಿತು.
ಸಮಾವೇಶದ ಅಂಗವಾಗಿ ಬಸವೇಶ್ವರ ವೃತ್ತವನ್ನು ಕೇಸರಿ ಬಟ್ಟೆ ಹಾಗೂ ಪರಪರಿಯಿಂದ ಅಲಂಕರಿಸಲಾಗಿತ್ತು. ಪಥಸಂಚಲನ ಸಾಗಿದ ಮಾರ್ಗದ ರಸ್ತೆಯ ಅಲ್ಲಲ್ಲಿ ರಂಗವಲ್ಲಿ ಚಿತ್ತಾರ ಬಿಡಿಸಲಾಗಿತ್ತು. ಸ್ವಾಗತ ಕಮಾನುಗಳು, ಮಾರ್ಗ ಮಧ್ಯೆ ಭಾರತ ಮಾತೆ, ಛತ್ರಪತಿ ಶಿವಾಜಿ, ಸ್ವಾಮಿ ವಿವೇಕಾನಂದರ ಮೂರ್ತಿ ಹಾಗೂ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಗಿತ್ತು.
ಪಥ ಸಂಚಲನದಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಗರಾಜ ದೇಸಾಯಿ, ಜಿಲ್ಲಾ ಪಂಚಾಯ್ತಿ ಸದಸ್ಯ ಸಂತೋಷ ನಾಯಕ, ಮಾಜಿ ಸದಸ್ಯ ಶಿವಾನಂದ ಅವಟಿ, ಸಿದ್ದು ಪಟ್ಟಣಶೆಟ್ಟಿ, ಸಂಗನಗೌಡ ಚಿಕ್ಕೊಂಡ, ಜಗದೀಶ ಕೊಟ್ರಶೆಟ್ಟಿ, ರವಿ ಪಡಶೆಟ್ಟಿ, ಡಾ.ಕರುಣಾಕರ ಚೌಧರಿ, ಸತೀಶ ಕ್ವಾಟಿ, ತಮ್ಮಣ್ಣ ಬಡಿಗೇರ, ರಾಜುಗೌಡ ಚಿಕ್ಕೊಂಡ, ರಾಚಯ್ಯ ಗಣಕುಮಾರ, ಪ್ರವೀಣ ಪವಾರ, ಸುನೀಲ ಜಮಖಂಡಿ, ಶಂಕರ ಹದಿಮೂರ, ಬಸವರಾಜ ಕೂಡಗಿ, ಮಹಾಂತೇಶ ಮನಗೂಳಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.