ಮುದ್ದೇಬಿಹಾಳ: ಟೋಕ್ರೆ ಕೋಳಿ, ಕಬ್ಬಲಿಗ, ತಳವಾರ, ಅಂಬಿಗ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕಿನ ನಿಜ ಶರಣ ಅಂಬಿಗರ ಚೌಡಯ್ಯನವರ ಜನಾಂಗದ ಹಿತರಕ್ಷಣಾ ಸಮಿತಿ ವತಿಯಿಂದ ಪಟ್ಟಣದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿ, ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
ಟೋಕರೆ ಕೋಳಿ ಸಮಾನಾರ್ಥಕ ಪದಗಳಾದ ಕೋಲಿ, ಕಬ್ಬಲಿಗ, ತಳವಾರ, ಅಂಬಿಗ ಜನಾಂಗದವರು ಒಂದೇ ಬುಡಕಟ್ಟಿಗೆ ಸೇರಿದವರು ಎಂದು 1983ರಲ್ಲಿ ಪ್ರಕರಣವೊಂದರಲ್ಲಿ ಉಚ್ಛ ನ್ಯಾಯಾಲಯ ತೀರ್ಪು ನೀಡಿದೆ. ಈ ಜನಾಂಗದವರು ಅಲೆಮಾರಿಗಳಾಗಿ ದುಡಿಯಲು ಗುಳೇ ಹೋಗುತ್ತಿದ್ದಾರೆ. ಶೈಕ್ಷಣಿಕ, ಆರ್ಥಿಕವಾಗಿ ಇವರು ಹಿಂದುಳಿದಿದ್ದಾರೆ. 1981ಕ್ಕೂ ಮುಂಚೆ ಶಾಲಾ ವರ್ಗಾವಣೆ ಪತ್ರದಲ್ಲಿ ಟೋಕ್ರೆ ಕೋಳಿ ಎಂದು ಪ್ರಸ್ತಾಪಿಸಿದವರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣಪತ್ರ ನೀಡಲು ಆದೇಶಿಸಬೇಕು.
ಅಂಬಿಗ ಸಮಾಜ ಎಲ್ಲ ಹೆಸರುಗಳನ್ನು ಹೊಂದಿದವರ ಶಿಕ್ಷಣಕ್ಕಾಗಿ ಮೀಸಲಾತಿ, ರಿಯಾಯಿತಿ ಜಾರಿಗೊಳಿಸಬೇಕು. ಟೋಕ್ರೆ ಕೋಳಿ, ಕೋಯಾ ಹೆಸರಲ್ಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡು ರಾಜ್ಯ, ಕೇಂದ್ರ ಸರ್ಕಾರದ ಸೇವೆ ಸಲ್ಲಿಸುವವರಿಗೆ, ನಾಗರಿಕರಿಗೆ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾನಸಿಕ ಕಿರುಕುಳ ನೀಡುವುದನ್ನು, ಪೊಲೀಸ್ ಕೇಸ್ ದಾಖಲಿಸಿ ಮಾನ ಹರಾಜು ಮಾಡುವುದನ್ನು ನಿಲ್ಲಿಸಬೇಕು. ಈ ಬೇಡಿಕೆಗಳನ್ನು ಒಂದು ತಿಂಗಳಲ್ಲಿ ಈಡೇರಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಆಮರಣ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಣ್ಣ ಐರೋಡಗಿ, ತಾಲ್ಲೂಕಾಧ್ಯಕ್ಷ ಚಂದ್ರಶೇಖರ ಅಂಬಿಗೇರ, ಪ್ರಧಾನ ಕಾರ್ಯದರ್ಶಿ ಅಯ್ಯಪ್ಪ ತಂಗಡಗಿ, ಸಂಗಮೇಶ ಪ್ಯಾಟಿ, ರಾಜು ಮುದ್ದೇಬಿಹಾಳ, ಶಿವಪ್ಪ ಕೋಲಕಾರ, ಮಲ್ಲಪ್ಪ ಬಳಬಟ್ಟಿ, ಅನಿಲಕುಮಾರ ಕಟ್ಟಿಮನಿ, ಕಾಶಿನಾಥ ನಾಟಿಕಾರ, ಯಲ್ಲಪ್ಪ ಅಂಬಿಗೇರಿ ಸೇರಿದಂತೆ ತಂಗಡಗಿ, ಮುದ್ದೇಬಿಹಾಳ, ಕಾಳಗಿ, ಕವಡಿಮಟ್ಟಿ, ಮುದೂರ, ರಕ್ಕಸಗಿ, ರೂಢಗಿ, ಆಲಕೊಪ್ಪರ, ಇಣಚಗಲ್, ಹಿರೇಮುರಾಳ, ಹಡಗಲಿ, ದೇವೂರು, ಬಳಬಟ್ಟಿಯ ಅಂಬಿಗೆರ ಸಮಾಜ ಬಾಂಧವರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.