ತಿಕೋಟಾ: ಬಬಲೇಶ್ವರ ತಾಲ್ಲೂಕಿನ ಅರ್ಜುಣಗಿ ಗ್ರಾಮದಲ್ಲಿ ಎರಡು ದಿನ ಭೂತಾಳ ಸಿದ್ದೇಶ್ವರ ಜಾತ್ರೆ ಅದ್ದೂರಿಯಾಗಿ ನಡೆಯಿತು.
ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಪಲ್ಲಕ್ಕಿ ಹಾಗೂ ಚೌಕಿ ಉತ್ಸವ ದೇವಸ್ಥಾನದ ಆವರಣದಲ್ಲಿ ನಡೆಯಿತು.
ದೇವರ ಪಲ್ಲಕ್ಕಿ ದೇವಸ್ಥಾನದಿಂದ ಹೊರಗೆ ಬರುತ್ತಿದ್ದಂತೆಯೇ ನೆರೆದಿದ್ದ ಸಹಸ್ರಾರು ಜನರು ಭಂಡಾರ, ಹೂ, ಹಣ್ಣು, ಕಾಯಿ ಮುಂತಾದವುಗಳನ್ನು ಎರಚಿ ಭಕ್ತಿ ಮೆರೆದರು. ಪಲ್ಲಕ್ಕಿ ಹಾಗೂ ಚೌಕಿಗಳು ದೇವಸ್ಥಾನದ ಸುತ್ತು ಹಾಕುತ್ತಿದ್ದಂತೆಯೇ ನೂರಾರು ಜನರು ಪಲ್ಲಕ್ಕಿ ಸಾಗುವ ಮಾರ್ಗದಲ್ಲಿ ಅಡ್ಡಲಾಗಿ ಮಲಗಿಕೊಂಡು ಇಷ್ಟಾರ್ಥ ಈಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು.
ಜಾತ್ರೆ ಅಂಗವಾಗಿ ನಡೆದ ತೆರಬಂಡಿ ಸ್ಪರ್ಧೆ, ಮಿನಿ ಟ್ರ್ಯಾಕ್ಟರ್ ರೇಸ್, ಎತ್ತಿನ ಗಾಡಿ ಓಟದ ಸ್ಪರ್ಧೆ, ಸಂಗ್ರಾಮ ಕಲ್ಲು, ಗುಂಡು ಕಲ್ಲು, ಜೋಳದ ಚೀಲ ಎತ್ತುವುದು, ಜಂಗಿನ ನಿಕಾಲಿ ಕುಸ್ತಿ ಸೇರಿದಂತೆ ವಿವಿಧ ಸ್ಪರ್ಧೆಗಳು ಜನರನ್ನು ರಂಜಿಸಿದವು.
ತೆರಬಂಡಿ ಸ್ಪರ್ಧೆಯಲ್ಲಿ ಕರಿಸಿದ್ದೇಶ್ವರ ಪ್ರಸನ್ನ ಮಹಾಲಿಂಗಪೂರ –ಪ್ರಥಮ , ಸಿದ್ರಾಮೇಶ್ವರ ಪ್ರಸನ್ನ ಬಬಲಾದಿ –ದ್ವಿತೀಯ, ಒಂಟಗೋಡಿಯ ಭೀಮಸಿ ಐನಾಪೂರ ಅವರ ಎತ್ತುಗಳು ತೃತೀಯ ಸ್ಥಾನ ಪಡೆದವು.
ಜೋಡೆತ್ತಿನ ಗಾಡಿ ಓಡಿಸುವ ಸ್ಪರ್ಧೆಯಲ್ಲಿ ಸೂಳೆಬಾವಿಯ ಪ್ರಕಾಶ ಕುರಿ –ಪ್ರಥಮ, ಕುಮಠೆಯ ಸಿದರಾಯ ಸಾರವಾಡ –ದ್ವಿತೀಯ ಹಾಗೂ ನಿಜಲಿಂಗಪ್ಪ ಎಸ್. ಪೂಜಾರಿ ಅವರ ಎತ್ತುಗಳು ತೃತೀಯ ಸ್ಥಾನ ಪಡೆದವು.
ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಅರ್ಜುಣಗಿ ಗ್ರಾಮದ ರಂಜಾನ್ ಮುಜಾವಾರ 90 ಕೆಜಿ ತೂಕದವರೆಗೆ ವಿವಿಧ ತೂಕದ ಕಲ್ಲುಗಳನ್ನು ಸರಾಗವಾಗಿ ಎತ್ತುವ ಮೂಲಕ ಕ್ರೀಡಾಪ್ರೇಮಿಗಳು ಹುಬ್ಬೇರುವಂತೆ ಮಾಡಿದರು. ಮುತ್ತಪ್ಪ ದಡ್ಡಿ, ಪೈಗಂಬರ ಮಮದಾಪೂರ, ಅವಧೂತ ಬಾಡಗೆ, ದಯಾನಂದ ಪಳಕೆ ಮುಂತಾದವರು ಸಂಗ್ರಾಮ ಹಾಗೂ ಗುಂಡು ಕಲ್ಲು ಎತ್ತುವ ಮೂಲಕ ಸಾಹಸ ಮೆರೆದರು.
ರಸಮಂಜರಿ, ನಾಟಕ, ಜನಪದ ಜಾತ್ರೆ ಮುಂತಾದ ಮನೋರಂಜನಾ ಕಾರ್ಯಕ್ರಮಗಳು ಜನರನ್ನು ರಂಜಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.