ವಿಜಯಪುರ: ಕಲಬುರ್ಗಿ ಜಿಲ್ಲಾಧಿಕಾರಿಗಳನ್ನು ಪಾಕಿಸ್ತಾನದಿಂದ ಬಂದವರು ಎಂಬ ಹೇಳಿಕೆ ನೀಡಿರುವ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ ಅವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಬುಧವಾರ ವಿಜಯಪುರ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಕೀಲ್ ಬಾಗಮಾರೆ ಮಾತನಾಡಿ, ವಿಧಾನ ಪರಿಷತ್ ಸದಸ್ಯರಾಗಿರುವ ಎನ್. ರವಿಕುಮಾರ ಅವರು ಕಲಬುರ್ಗಿ ಜಿಲ್ಲಾಧಿಕಾರಿಗಳನ್ನು ಪಾಕಿಸ್ತಾನಿ ಎಂದು ಕರೆಯುವ ಮೂಲಕ ದೊಡ್ಡ ತಪ್ಪು ಮಾಡಿದ್ದಾರೆ. ಈ ದೇಶದ ಹೆಮ್ಮೆಯ ನಾಗರಿಕರಾಗಿರುವ, ಜವಾಬ್ದಾರಿಯುತ ಸ್ಥಾನದಲ್ಲಿರುವ ಓರ್ವ ಮಹಿಳಾ ಅಧಿಕಾರಿಯನ್ನು ಈ ರೀತಿ ಹೇಳಿಕೆ ನೀಡಿರುವುದು ಖಂಡನೀಯ ಎಂದರು.
ಪ್ರತಿಯೊಬ್ಬರು ಈ ದೇಶದ ಹೆಮ್ಮೆಯ ನಾಗರಿಕರು, ದೇಶಾಭಿಮಾನಿಗಳು, ಈ ದೇಶದ ನಿವಾಸಿಗಳನ್ನೇ ಪಾಕಿಸ್ತಾನಿ ಎಂದು ಕರೆದರೆ ಮನಸ್ಸಿಗೂ ನೋವುಂಟಾಗುತ್ತದೆ. ವಿಧಾನ ಪರಿಷತ್ ಎಂಬುದು ಚಿಂತಕರ ಚಾವಡಿ ಎಂದು ಕರೆಯಲಾಗುತ್ತದೆ, ಇಂತಹ ಪವಿತ್ರ ಮೇಲ್ಮನೆಯ ಸದಸ್ಯನಾಗಿರುವ ಎನ್.ರವಿಕುಮಾರ ತಮ್ಮ ನಾಲಿಗೆ ಹರಬಿಟ್ಟಿರುವುದು ಖಂಡನೀಯ ಎಂದರು.
ಈ ರೀತಿಯ ಮನಸ್ಥಿತಿ ಇರುವವರು ಮೇಲ್ಮನೆಯ ಸದಸ್ಯರಾಗಿ ಇರಲು ಅರ್ಹರಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ ಅವರ ಮೇಲೆ ಎಫ್ಐಆರ್ ದಾಖಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು, ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ವಕೀಲರಾದ ಎನ್.ಬಿ. ಕಾಸರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ಮುನ್ನಾ ಭಕ್ಷಿ, ಸರ್ಫರಾಜ್ ಅಗಸಬಾಳ, ಹಮೀದ್ ಮನಗೂಳಿ, ಇಮ್ತಿಯಾಜ್ ಮುಲ್ಲಾ, ಆಬೀದ್ ಇಳಕಲ್ ಮೊದಲಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.