ADVERTISEMENT

ಮುದ್ದೇಬಿಹಾಳ: ಡಿಜಿಟಲ್ ಹಕ್ಕುಪತ್ರಕ್ಕಾಗಿ ತಾಂಡಾ ನಿವಾಸಿಗಳ ದೌಡು

​ಪ್ರಜಾವಾಣಿ ವಾರ್ತೆ
Published 15 ಮೇ 2025, 5:13 IST
Last Updated 15 ಮೇ 2025, 5:13 IST
ಮುದ್ದೇಬಿಹಾಳ ಪಟ್ಟಣದ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಂದಾಯ ಗ್ರಾಮಗಳಲ್ಲಿ ಬರುವ ತಾಂಡಾ ನಿವಾಸಿಗಳು ಹಕ್ಕುಪತ್ರಗಳ ನೋಂದಣಿ ಪ್ರಕ್ರಿಯೆಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿರುವುದು
ಮುದ್ದೇಬಿಹಾಳ ಪಟ್ಟಣದ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಂದಾಯ ಗ್ರಾಮಗಳಲ್ಲಿ ಬರುವ ತಾಂಡಾ ನಿವಾಸಿಗಳು ಹಕ್ಕುಪತ್ರಗಳ ನೋಂದಣಿ ಪ್ರಕ್ರಿಯೆಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿರುವುದು   

ಮುದ್ದೇಬಿಹಾಳ: ಕಂದಾಯ ಗ್ರಾಮಗಳಾಗಿ ಘೋಷಣೆಯಾಗಿರುವ ತಾಂಡಾಗಳ ನಿವಾಸಿಗಳಿಗೆ ಡಿಜಿಟಲ್ ಹಕ್ಕು ಪತ್ರ ವಿತರಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿರುವುದರಿಂದ ಮುದ್ದೇಬಿಹಾಳ ಕಂದಾಯ ವಿಭಾಗದಲ್ಲೂ ನೋಂದಣಿ ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ.

ಪಟ್ಟಣದ ತಹಶೀಲ್ದಾರ್ ಕಚೇರಿಯ ಪಕ್ಕದಲ್ಲಿಯೇ ಇರುವ ಉಪ ನೋಂದಣಾಧಿಕಾರಿಗಳ ಕಚೇರಿ ಕಳೆದ ಎರಡು ವಾರಗಳಿಂದ ತಾಂಡಾದ ನಿವಾಸಿಗಳಿಂದ ತುಂಬಿ ತುಳುಕುತ್ತಿದೆ.

ಸರ್ಕಾರ ಹಾಡಿ, ಹಟ್ಟಿ ಹಾಗೂ ತಾಂಡಾಗಳಲ್ಲಿನ ನಿವಾಸಿಗಳಿಗೆ 94 ‘ಡಿ’ ಅಡಿ ಒಂದು ಲಕ್ಷ ಡಿಜಿಟಲ್ ಹಕ್ಕುಪತ್ರ ವಿತರಿಸುವ ಘೋಷಣೆ ಮಾಡಿದೆ. ಅದರನ್ವಯ ಕಂದಾಯ ಇಲಾಖೆಯ ಅಧಿಕಾರಿಗಳು ಆಯಾ ಘೋಷಿತ ಕಂದಾಯ ಗ್ರಾಮಗಳಲ್ಲಿರುವ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡಿ ಅದನ್ನು ನೋಂದಣಿ ಮಾಡಿಸಲು ಉಪ ನೋಂದಣಾಧಿಕಾರಿ ಕಚೇರಿಗೆ ಕಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ADVERTISEMENT

ಸರ್ಕಾರದ ವಿವಿಧ ಸವಲತ್ತುಗಳು ದೊರೆಯಬೇಕಾದರೆ ಅಲ್ಲಿನ ನಿವಾಸಿಗಳಿಗೆ ಶಾಶ್ವತ ಹಕ್ಕುಪತ್ರ ನೀಡುವ ಉದ್ದೇಶದಿಂದ 2016ರಲ್ಲೇ ಕಾನೂನಿಗೆ ತಿದ್ದುಪಡಿ ತರಲಾಗಿತ್ತು. ಕಳೆದ ಐದು ವರ್ಷಗಳಲ್ಲಿ ಒಂದು ಲಕ್ಷ ಹಕ್ಕುಪತ್ರಗಳನ್ನು ಮಾತ್ರ ವಿತರಿಸಲಾಗಿದ್ದು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ₹1.30 ಲಕ್ಷ ಹಕ್ಕುಪತ್ರಗಳನ್ನು ವಿತರಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಈಚೆಗೆ ತಿಳಿಸಿದ್ದರು.

ಹಿಂದೆಲ್ಲ ಕಾಗದದ ಹಕ್ಕುಪತ್ರಗಳನ್ನು ಕೊಡುತ್ತಿದ್ದಾಗ ಮೂಲ ದಾಖಲೆಗಳು ಇಲ್ಲದೇ ಸಮಸ್ಯೆ ಆಗುತ್ತಿತ್ತು. ವ್ಯಾಜ್ಯಗಳಿಗೂ ಕಾರಣವಾಗುತ್ತಿತ್ತು. ಆದರೆ, ಡಿಜಿಟಲ್ ಹಕ್ಕುಪತ್ರದಿಂದಾಗಿ ಆ ರೀತಿಯ ಸಮಸ್ಯೆಗಳು ನಿವಾರಣೆ ಆಗುತ್ತವೆ ಎಂಬ ಕಾರಣದಿಂದ ಸರ್ಕಾರ ಡಿಜಿಟಲ್ ಹಕ್ಕುಪತ್ರ ನೀಡಲು ಮುಂದಾಗಿದೆ. ಮೂಲ ಕಡತಗಳು ಕಳೆದು ಹೋಗುವ ಅಥವಾ ಸ್ಥಳಾಂತರವಾಗುವ ಸಾಧ್ಯತೆ ಇಲ್ಲ. ನಕಲು ಮಾಡುವುದಕ್ಕೂ ಸಾಧ್ಯವಾಗುವುದಿಲ್ಲ ಎಂಬ ಉದ್ದೇಶದಿಂದ ಡಿಜಿಟಲ್ ಹಕ್ಕುಪತ್ರ ನೀಡುವ ಕಾರ್ಯ ಪ್ರಗತಿಯಲ್ಲಿದೆ ಎನ್ನುತ್ತಾರೆ ಕಂದಾಯ ಇಲಾಖೆಯ ಅಧಿಕಾರಿಗಳು.

ಮುದ್ದೇಬಿಹಾಳ ತಾಂಡಾ ನಿವಾಸಿಗಳಿಂದ ಹಕ್ಕುಪತ್ರಗಳನ್ನು ನೋಂದಣಿ ಮಾಡಿಸುತ್ತಿರುವುದು
ಗ್ಯಾರಂಟಿ ಯೋಜನೆಗಳಿಂದ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ಸರ್ಕಾರ ಇದೀಗ ಕಂದಾಯ ಗ್ರಾಮಗಳಲ್ಲಿರುವ ನಿವಾಸಿಗಳಿಗೆ ಡಿಜಿಟಲ್ ಹಕ್ಕುಪತ್ರ ಕೊಡುವ ಕಾರ್ಯಕ್ಕೆ ಮುಂದಾಗಿರುವುದು ತಾಂಡಾದ ನಿವಾಸಿಗಳಿಗೆ ನೆಮ್ಮದಿ ಭಾವ ತರಿಸಿದೆ
ಸಂತೋಷ ಚವ್ಹಾಣ(ಹುಲ್ಲೂರ) ಬಂಜಾರ ಸಮಾಜದ ಮುಖಂಡ
ದಿನಕ್ಕೆ ನೂರು ಗುರಿ ನೀಡಿದ್ದು ನಮ್ಮಲ್ಲಿ ಈಗಾಗಲೇ 800ಕ್ಕೂ ಹೆಚ್ಚು ಹಕ್ಕುಪತ್ರಗಳನ್ನು ನೋಂದಾಯಿಸಿದ್ದೇವೆ. ಕಂದಾಯ ಇಲಾಖೆಯ ಅಧಿಕಾರಿಗಳು ನೀಡುವ ಹಕ್ಕುಪತ್ರಗಳನ್ನು ನೋಂದಾಯಿಸುವ ಕೆಲಸ ಪ್ರಗತಿಯಲ್ಲಿದೆ
ಸಚಿನ್ ಖೈನೂರ ಉಪನೋಂದಣಾಧಿಕಾರಿ
ಮುದ್ದೇಬಿಹಾಳ ಕಂದಾಯ ವಿಭಾಗದ ವ್ಯಾಪ್ತಿಯಲ್ಲಿ 1200ಕ್ಕೂ ಹೆಚ್ಚು ನಿವಾಸಿಗರಿಗೆ ಡಿಜಿಟಲ್ ಹಕ್ಕುಪತ್ರ ನೀಡುವ ಗುರಿ ಹೊಂದಲಾಗಿದ್ದು ಈಗಾಗಲೇ ಶೇ 80 ರಷ್ಟು ಜನರಿಗೆ ಹಕ್ಕುಪತ್ರ ನೀಡಲಾಗಿದೆ
ಬಲರಾಮ ಕಟ್ಟೀಮನಿ ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.