ಅಳ್ನಾವರ: ಪ್ರಭು ಯೇಸು ಅವರ ಜೀವನದ ಕೊನೆಯ ಕ್ಷಣಗಳ ಪವಿತ್ರ ಈಸ್ಟರ್ ಆಚರಣೆಯ ಮೊದಲನೇ ಭಾನುವಾರ ಇಲ್ಲಿನ ಸಂತ ಅನ್ನಮ್ಮ ಚರ್ಚ್ನಲ್ಲಿ ವಿಶೇಷ
ಪ್ರಾರ್ಥನೆಯೊಂದಿಗೆ ತಾಳೆಗರಿಗಳನ್ನು ಧರ್ಮಗುರುಗಳು ಆಶೀರ್ವದಿಸಿ, ಪೂಜಿಸಿ, ಕ್ರೈಸ್ತರಿಗೆ ವಿತರಿಸಿದರು.
ಫಾದರ್ ಜೋಸೆಫ್ ರೂಡ್ರಿಗ್ಸ್ ಆಶೀರ್ವಚನ ನೀಡಿ, ಯೇಸು ಅವರನ್ನು ಸಿಲುಬೆಗೆ ಏರಿಸುವ ಮುನ್ನ ಪಟ್ಟ ಕಷ್ಟ, ಅಪವಾದ, ಯಾತನೆ ಸನ್ನಿವೇಶಗಳನ್ನು ಏಳೆ ಏಳೆಯಾಗಿ ಬಡಿಸಿಟ್ಟು, ಸಿಲುಬೆಗೆ ಎರುವ ವಾರದ ಮುನ್ನ ಧ್ಯಾನಿಸಲು ಈ ಆಚರಣೆ ನಡೆದು ಬಂದಿದೆ ಎಂದರು.
ಜೆರೋಸಲಿಯಂಗೆ ಕ್ರಿಸ್ತನ ವಿಜಯೋತ್ಸವದ ಪ್ರವೇಶ ಸ್ಮರಿಸುವ ಸಂಪ್ರದಾಯ ಅನಾದಿ ಕಾಲದಿಂದ ನಡೆದು ಬಂದಿದೆ. ಯೇಸು ಅವರನ್ನು ರಾಜನ ರೂಪದಲ್ಲಿ ನೋಡಲು ಬಯಸಿದ ಪ್ರಜೆಗಳು ಅವರನ್ನು ಒತ್ತಾಯಪೂರ್ವಕವಾಗಿ ಮೆರವಣಿಗೆ ಮಾಡಲು ಹೊರಡುತ್ತಾರೆ.
ಸಾಮಾನ್ಯ ಮಾನವನ ರೂಪದ ಯೇಸು ಅವರು ಕುದುರೆ ಬದಲು ಕತ್ತೆ ಮೇಲೆ ಕುಳಿತು ಮೆರವಣಿಗೆ ಹೊರಡುತ್ತಾರೆ. ಅವರ ಪ್ರವೇಶ ಸ್ವಾಗತಿಸಲು ಮತ್ತು ಗೌರವಿಸಲು ಜನ ಸಮೂಹದಿಂದ ಬೀಸಲ್ಪಟ್ಟ ತಾಳೆ ಕೊಂಬೆಗಳಿಂದ ಆ ಆಚರಣೆ ಹುಟ್ಟುಕೊಂಡಿದೆ ಎಂದರು.
ಧರ್ಮಗುರುಗಳು ನೀಡಿದ ತಾಳೆ ಗರಿಗಳನ್ನು ಕ್ರೈಸ್ತರು ತಮ್ಮ ಮೆನಗಳಿಗೆ ತೆಗೆದುಕೊಂಡು ಹೋದರು. ಅದಕ್ಕೂ ಮುಂಚೆ ಚರ್ಚ್ ಆವರಣದಲ್ಲಿ ತಾಳೆಗರಿಗಳ ಮೆರವಣಿಗೆ ನಡೆಯಿತು. ಪ್ರಾರ್ಥನೆಯಿಂದ ಪಡೆದ ಈ ಪವಿತ್ರ ತಾಳೆ ಗರಿಗಳನ್ನು ಮನೆಗಳಲ್ಲಿ ನೇತು ಹಾಕುವುದು ಮತ್ತು ಪವಿತ್ರ ಬೈಬಲ್ ಗ್ರಂಥದಲ್ಲಿಡುವುದು ವಾಡಿಕೆ, ಹಲವರು ಇದನ್ನು ಸಿಲುಬೆ
ರೂಪದಲ್ಲಿ ನೇಯ್ದು ಮನೆಯಲ್ಲಿ ನೇತು ಹಾಕುತ್ತಾರೆ. ಇನ್ನೂ ಹಲವರು ಚಿಕ್ಕ ರೂಪದಲ್ಲಿ ನೇಯ್ದು ಕೊರಳಲ್ಲಿ ಹಾಕಿಕೊಳ್ಳವುದು ವಾಡಿಕೆ. ಜನರಿಗೆ ಕಷ್ಟ ಬಂದಾಗ ಈ ತಾಳೆ
ಗರಿಗಳಿಗೆ ಪ್ರಾರ್ಥಿಸುವುದು ರೂಢಿಯಲ್ಲಿದೆ ಎಂದು ಕ್ರೈಸ್ಥ ಸಮಾಜದ ಹಿರಿಯರು ಹೇಳುತ್ತಾರೆ.
ಹಲವು ರಾಷ್ಟ್ರಗಳಲ್ಲಿ ತಾಳೆ ಮರದ ಬದಲು ಆಲಿವ್, ವಿಲೋ ಸ್ಥಳೀಯ ಮರಗಳ ಕೊಂಬೆ ಬಳಕೆ ರೂಢಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.