ವಿಜಯಪುರ: ‘ಜೀವನದ ಮೌಲ್ಯಗಳನ್ನು ತಿಳಿಸುವ ಜಾನಪದ ಸಾಹಿತ್ಯವನ್ನು ನಾವು ಮರೆತರೆ ಮಾನವೀಯತೆ ಹಾಗೂ ನೈತಿಕತೆ ಮರೆತಂತೆ’ ಎಂದು ಕೇಂದ್ರ ಕಾರಾಗೃಹದ ಅಧೀಕ್ಷಕ ಐ.ಜೆ. ಮ್ಯಾಗೇರಿ ಹೇಳಿದರು.
ನಗರದ ಕೇಂದ್ರ ಕಾರಾಗೃಹದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಾರಾಗೃಹ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಜಾನಪದ ಚಿಂತನಾ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
‘ಜಾನಪದ ಸಾಹಿತ್ಯವು ಜೀವನದ ಮೌಲ್ಯಗಳನ್ನು ಸಾರುತ್ತದೆ. ಮಕ್ಕಳ ಪಠ್ಯಕ್ರಮದಲ್ಲಿ ಜಾನಪದ ಸಾಹಿತ್ಯಕ್ಕೆ ಇಂದು ಮಹತ್ವ ನೀಡಬೇಕಾಗಿದ್ದು, 21ನೇ ಶತಮಾನದ ಮಕ್ಕಳಿಗೆ ಜಾನಪದದ ಅರಿವು ಅತ್ಯಗತ್ಯ’ ಎಂದರು.
‘ಜಾನಪದ ಸಾಹಿತ್ಯ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ಬಂಧಿಗಳಿಗೆ ಮನಪರಿವರ್ತನೆಗೆ ದಾರಿದೀಪವಾಗಿದೆ, ಈ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯ ತುಂಬ ಕ್ರಿಯಾಶೀಲವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ‘ಜಾನಪದ ಸಾಹಿತ್ಯ ಭಾರತೀಯ ಸಂಸ್ಕೃತಿಯ ತಾಯಿಬೇರು, ಗ್ರಾಮೀಣರ ಜೀವನ ಜಾನಪದ ಮೌಲ್ಯಗಳಿಂದ ಕೂಡಿಕೊಂಡಿದೆ. ಜನಪದ ಸಾಹಿತ್ಯ ಉಳಿಸಿ, ಬೆಳೆಸಿದ ಕೀರ್ತಿ ಜನಪದರಿಗೆ ಸಲ್ಲುತ್ತದೆ. ಆ ಜಾನಪದ ಜೀವನ ಮೌಲ್ಯಗಳನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಿದೆ’ ಎಂದರು.
ಸಾಹಿತಿ ಸಂಗಮೇಶ ಮೇತ್ರಿ ಮಾತನಾಡಿ, ‘ಜನಪದ ಸಾಹಿತ್ಯ ಹುಟ್ಟಿನಿಂದ ಸಾಯುತನಕ ಬೆಳೆಯುತ್ತ ಹೋಗುತ್ತದೆ. ಇದು ಮುಂದಿನ ತೆಲೆಮಾರಿಗೆ ಸಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಜನಪದ ಸಾಹಿತ್ಯಕ್ಕೆ ಎಲ್ಲರನ್ನೂ ಮನಪರಿವರ್ತನೆ ಮಾಡುವ ತಾಕತ್ತಿದೆ’ ಎಂದರು.
ಶಿಕ್ಷಕ ಮೆಹತಾಬ್ ಕಾಗವಾಡ ಮಾತನಾಡಿದರು. ಉಪನ್ಯಾಸಕ ಶಿವಾನಂದ ಮಂಗಾನವರ, ಸಾಹಿತಿ ಶಿವಲೀಲಾ ಮುರಾಳ, ಶಿವಮ್ಮ, ಸಂತೋಷ ಸಂತಾಗೋಳ, ಶಕೀಲಾ ನದಾಫ್, ಮೌನೇಶ, ಕೆ.ಎಂ.ಚೌಧರಿ, ಎಸ್.ಎಸ್.ಪೂಜಾರಿ, ಎಸ್.ಎಸ್.ಕೋರವಾರ, ಈರಯ್ಯಾ ಹಿರೇಮಠ, ಗೋಪಾಲಕೃಷ್ಣ ಕುಲಕರ್ಣಿ, ಎ.ಕೆ.ಅನಸಾರಿ, ಸವಿತಾ ಬೆಳ್ಳೂಂಡಿಗಿ, ದೀಕ್ಷಿತ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.