ವಿಜಯಪುರ: ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಕೋವಿಡ್ ಕಾಲದ ಸೇವೆ ಗುರುತಿಸಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯ್ತಿ ವತಿಯಿಂದ ಆಹಾರಧಾನ್ಯದ ಕಿಟ್ ಜೊತೆಗೆ ಸೀರೆ ನೀಡಿ ಗೌರವಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ನಾಗಠಾಣ ಕ್ಷೇತ್ರದ ಶಾಸಕ ಡಾ.ದೇವಾನಂದ ಚವ್ಹಾಣ ಹೇಳಿದರು.
ನಾಗಠಾಣ ಮತಕ್ಷೇತ್ರದ ಐನಾಪುರ, ಹಡಗಲಿ, ಅಲಿಯಾಬಾದ್, ಮಕಣಾಪೂರ ಗ್ರಾಮಗಳಲ್ಲಿ ಕೊರೊನಾ ವಾರಿಯರ್ಸ್ಗಳಿಗೆ ಜಿಲ್ಲಾಡಳಿತದಿಂದ ನೀಡಿದ ಆಹಾರಧಾನ್ಯದ ಕಿಟ್ ಹಾಗೂ ಸೀರೆ ವಿತರಿಸಿ ಅವರುಮಾತನಾಡಿದರು.
ಕೊರೊನಾ ನಿಯಂತ್ರಿಸುವಲ್ಲಿ ಜಿಲ್ಲೆಯ ಚುಕ್ಕಾಣಿ ಹಿಡಿದಿರುವ ಜಿಲ್ಲಾಧಿಕಾರಿ ಪಿ.ಸುನೀಲ್ಕುಮಾರ್ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ ಹಗಲಿರುಳು ಎನ್ನದೆ ಇಡೀ ಜಿಲ್ಲೆಯಾದ್ಯಂತ ಸಂಚರಿಸಿ ಕೊರೊನಾ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದಾರೆ. ಯಾವುದೇ ಸಮಯದಲ್ಲಿ ಸಂಪರ್ಕಿಸಿದರೂ ತಕ್ಷಣವೇ ಸ್ಪಂದಿಸುವ ಮನೋಭಾವ ಉತ್ತಮವಾಗಿದೆ. ಇಂತಹ ಅಧಿಕಾರಿಗಳಿಂದ ನಮ್ಮ ಜಿಲ್ಲೆಯಲ್ಲಿ ಕೊರೊನಾ ತಗ್ಗಿದ್ದು, ನಾವೆಲ್ಲ ಅವರೊಂದಿಗೆ ಕೈ ಜೋಡಿಸಬೇಕು ಎಂದರು.
ಜಿಲ್ಲಾ ಪಂಚಾಯ್ತಿ ಸಿಇಒ ಅವರು ಆಶಾ ಹಾಗೂ ಅಂಗನವಾಡಿ ಕಾರ್ಯರ್ತೆಯರಿಗೆ ಪ್ರೋತ್ಸಾಹದಾಯಕವಾಗಿ ಆಹಾರಧಾನ್ಯದ ಕಿಟ್ ಹಾಗೂ ಸೀರೆ ನೀಡುತ್ತಿರುವುದು ಶ್ಲಾಘನೀಯವಾಗಿದೆ. ಈ ಕಾರ್ಯವನ್ನು ಕೊರೊನಾ ನಿಯಂತ್ರಣದಲ್ಲಿ ಪಾಲ್ಗೊಂಡಿರುವ ಪೊಲೀಸ್, ಕಂದಾಯ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕೊರೊನಾ ವಾರಿಯರ್ಸ್ಗಳಿಗೆ ನೀಡಿದರೆ ಉತ್ತಮವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ನಾಗಠಾಣ ಮತಕ್ಷೇತ್ರದ ವಿಜಯಪುರ ತಾಲ್ಲೂಕಿನ ನಾಲ್ಕು ಜಿ.ಪಂ. ಕ್ಷೇತ್ರಗಳ ಆಯ್ದ ಒಂದೊಂದು ಪಂಚಾಯ್ತಿಯಲ್ಲಿ ಸಾಂಕೇತಿಕವಾಗಿ ಆಹಾರ ಧಾನ್ಯದ ಕಿಟ್, ಸೀರೆ ವಿತರಿಸಲಾಯಿತು.
ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಬಿರಾದಾರ ಮಾತನಾಡಿದರು. ಪಿಎಸ್ಐ ರೇಣುಕಾ ದಿನ್ನಿ, ಐನಾಪೂರ ಗ್ರಾ.ಪಂ. ಅಧ್ಯಕ್ಷೆ ಯಲ್ಲಕ್ಕ ಒಂಬಾಸೆ, ಪಿಡಿಒ ಜಯಶ್ರೀ ಪವಾರ, ಎಸ್.ಬಿ. ಹೈದರಖಾನ್, ಮಹಾದೇವ ರಾಠೋಡ, ಖಂಡೋಬಾ ಒಂಬಾಸೆ, ಸುಭಾಷ ಹಳ್ಳದ, ಚಂದು ಜಾಧವ, ಕರಿಯಪ್ಪ ಬಿಸನಾಳ, ಆರೋಗ್ಯ ಅಧಿಕಾರಿ ಜಯಶ್ರೀ ದೇವಗಿರಿಕರ, ಹಡಗಲಿ ಗ್ರಾ.ಪಂ. ಅಧ್ಯಕ್ಷೆ ಸುಶೀಲಾಬಾಯಿ ಜಾಧವ, ರಾಜೇಶ ಗಾಯಕವಾಡ, ಅಲಿಯಾಬಾದ್ ಗ್ರಾ.ಪಂ. ಅಧ್ಯಕ್ಷ ರಾವಣ್ಣ ಹಕ್ಕೆ, ಜಾಫರ ಕಲಾಲ, ಮಕಣಾಪುರ ಗ್ರಾ.ಪಂ. ಅಧ್ಯಕ್ಷ ರಮೇಶ ಚವ್ಹಾಣ, ಪ್ರಕಾಶ ಚವ್ಹಾಣ ಸೇರಿದಂತೆ ಅಂಗನವಾಡಿ, ಆಶಾ, ಆರೋಗ್ಯ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.