ನಾಲತವಾಡ: ಮುಂಗಾರಿನ ಪ್ರಥಮ ಹಬ್ಬ ಕಾರ ಹುಣ್ಣಿಮೆ ಆಚರಣೆಗೆ ಆಸಕ್ತಿ ಕುಂದಿದೆ. ಕೃಷಿಯಲ್ಲಿ ಯಂತ್ರಗಳ ಬಳಕೆಯೇ ಹೆಚ್ಚುತ್ತಿದ್ದು, ಜಾನುವಾರುಗಳ ಸಂಖ್ಯೆ ಕಡಿಮೆಯಾಗಿರುವುದೇ ಇದಕ್ಕೆ ಕಾರಣ.
ಪಟ್ಟಣ ಸೇರಿದಂತೆ ಹೋಬಳಿಯಲ್ಲಿ ದನ–ಕರುಗಳ ಪ್ರಮಾಣ ತೀರಾ ಕಡಿಮೆಯಾಗಿದೆ. ತೀವ್ರ ಬರದ ಕಾರಣ ರಾಸುಗಳನ್ನು ಸಾಕುವುದೇ ಸವಾಲೆಂದು ಯುವ ರೈತರು ಭಾವಿಸಿದ್ದಾರೆ. ಎಲ್ಲೆಡೆ ಯಂತ್ರೋಪಕರಣಗಳೇ ಹೆಚ್ಚಿವೆ.
‘ಎತ್ತು, ದನ, ಕರುಗಳು ಕಡಿಮೆಯಾಗುತ್ತಿರುವ ಕಾರಣ ರೈತರ ಹಬ್ಬಗಳಾದ ಕಾರಹುಣ್ಣಿಮೆ, ಮಣ್ಣೆತ್ತಿನ ಅಮಾವಾಸ್ಯೆ, ಎಳ್ಳು ಅಮಾವಾಸ್ಯೆ ಹಬ್ಬಗಳ ಸಂಭ್ರಮವೂ ಅಷ್ಟಾಗಿ ಕಂಡುಬರುತ್ತಿಲ್ಲ. ರಾಸುಗಳಿಲ್ಲದೆ ಭೂಮಿಯ ಫಲವತ್ತತೆಗೆ ಅಗತ್ಯವಿರುವ ಕೊಟ್ಟಿಗೆ ಗೊಬ್ಬರವೇ ಇಲ್ಲದಂತಾಗಿದೆ’ ಎಂದು ರೈತ ಅಡಿವೆಪ್ಪ ಕೆಂಭಾವಿ ನೋವಿನಿಂದ ನುಡಿದರು..
‘ಕಳೆದ ವರ್ಷ ಆದಷ್ಟು ವ್ಯಾಪಾರವೂ ಈ ವರ್ಷ ಆಗಿಲ್ಲ. ಎತ್ತುಗಳ ಸಿಂಗರಿಸುವವರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ, ಆಲಂಕಾರಿಕ ಸಾಮಗ್ರಿಗಳ ವ್ಯಾಪಾರಕ್ಕೂ ಹೊಡೆತ ಬಿದ್ದಿದೆ’ ಎಂದು ವ್ಯಾಪಾರಿ ರಮೇಶ ಶಿವಾಜಿ ತಿರುಮುಖೆ ತಿಳಿಸಿದರು.
ಹಬ್ಬದ ಮಹತ್ವ: ಕಾರ ಹುಣ್ಣಿಮೆ ಪ್ರಯುಕ್ತ ಮನೆ ಅಥವಾ ಹೊಲಗಳಲ್ಲಿ ದನ, ಕರುಗಳನ್ನು ಸ್ವಚ್ಛವಾಗಿ ತೊಳೆದು, ಬಣ್ಣ ಬಳಿಯುತ್ತಾರೆ. ಕೋಡುಗಳಿಗೆ ಬಣ್ಣ, ಗೊಂಡೆ, ಕರಿದಾರ, ಕಾಲುಗೆಜ್ಜೆ, ಹುರಿಗೆಜ್ಜೆ ಕಟ್ಟುತ್ತಾರೆ. ರೋಗ ಬಾರದಂತೆ ಔಷಧೋಪಚಾರ ಮಾಡುತ್ತಾರೆ. ರಂಗು ರಂಗಿನ ಬಣ್ಣ, ಗೆಜ್ಜೆ ಸರ, ಗುಮರಿ ಸರ, ಮುತ್ತಿನ ಸರ, ಬಣ್ಣ ಬಣ್ಣದ ಹಗ್ಗಗಳಿಂದ ಎತ್ತುಗಳನ್ನು ಸಿಂಗರಿಸಿ, ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.