ವಿಜಯಪುರ: ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಶೇ 99.03 ರಷ್ಟು ಫಲಿತಾಂಶ ಲಭಿಸಿದೆ. ಜಿಲ್ಲೆಯ ಎಂಟು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.
ಜೂನ್ನಲ್ಲಿ ನಡೆದಿದ್ದ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗಿದ್ದ18,468 ಬಾಲಕರು, 14,892 ಬಾಲಕಿಯರು ಸೇರಿದಂತೆ ಒಟ್ಟು 33,360 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ವಿ. ಹೊಸೂರ ತಿಳಿಸಿದ್ದಾರೆ.
ಎಂಟು ವಿದ್ಯಾರ್ಥಿಗಳು ಸಾಧನೆ:
ಮುದ್ದೇಬಿಹಾಳ ತಾಲ್ಲೂಕಿನ ಮೈಲೇಶ್ವರದ ಬ್ರಿಲಿಯಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಆಕರ್ಷ ಎಸ್.ಕರೆಕಲ್, ಗುರುರಾಜ ಬಿರಾದಾರ, ನಯಿಮ್ ಜುಮನಾಳ, ಸಿಂಚನಾ ಆರ್. ದಮ್ಮೂರಮಠ, ಬಸವನ ಬಾಗೇವಾಡಿಯ ಅಕ್ಕನಾಗಮ್ಮ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಕೀರ್ತನಾ ಉಕ್ಕಲಿ, ವಿಜಯಪುರ ತಾಲ್ಲೂಕಿನ ಇಟ್ಟಂಗಿಹಾಳದ ತುಂಗಳ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ರತ್ನಮಾಲಾ ವಿ.ಪೂಜಾರಿ, ಮುದ್ದೇಬಿಹಾಳ ತಾಲ್ಲೂಕಿನ ನಾಗರಬೆಟ್ಟದ ಆಕ್ಸ್ಫರ್ಡ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಂಜನಾ ಎಂ.ಹಿರೇಮಠ, ದೇವರಹಿಪ್ಪರಗಿಯ ಶ್ರೀಸಿದ್ಧೇಶ್ವರ ಸ್ವಾಮೀಜಿ ಪ್ರೌಢಶಾಲೆಯ ವಿಕಾಸ ಕುಲಕರ್ಣಿ 625ಕ್ಕೆ 625 ಅಂಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕೋವಿಡ್ ಸಂಕಷ್ಟ, ಭಯದ ನಡುವೆಯೂ ಜಿಲ್ಲೆಯ ವಿದ್ಯಾರ್ಥಿಗಳು ಎರಡು ದಿನಗಳ ಕಾಲ ಪರೀಕ್ಷೆ ಬರೆಯುವ ಮೂಲಕ ಧೈರ್ಯ ಮೆರೆದಿದ್ದರು.
524 ಪ್ರೌಢಶಾಲೆಗಳು ಇದ್ದು, ಜಿಲ್ಲೆಗೆ ಉತ್ತಮ ಫಲಿತಾಂಶ ಬಂದಿದೆ. ಗಣಿತ, ವಿಜ್ಞಾನ ವಿಷಯದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆ ಮುಂದಿನ ಶಿಕ್ಷಣಕ್ಕೆ ಅನುಕೂಲವಾಗಲಿದೆ ಎಂದರು.
****
ಶಿಕ್ಷಕರು ಆನ್ಲೈನ್ ಮೂಲಕ ಪರಿಣಾಮಾತ್ಮಕವಾಗಿ ಪಾಠ ಬೋಧನೆ ಮಾಡಿದ್ದರು. ಸರಣಿ ಪರೀಕ್ಷೆ ಮಾಡಲಾಗಿತ್ತು. ಜಿಲ್ಲೆಯ ಫಲಿತಾಂಶ ಹೆಚ್ಚುಲು ಇದು ಹೆಚ್ಚು ಪರಿಣಾಮ ಬೀರಿದೆ
–ಎನ್.ಬಿ.ಹೊಸೂರ, ಡಿಡಿಪಿಐ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.