ADVERTISEMENT

ವಿಜಯಪುರ |ಶಾಲೆಯಲ್ಲಿ ಹೊಡೆದಾಟ: ವಿದ್ಯಾರ್ಥಿ ಸಾವು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 22:04 IST
Last Updated 7 ಆಗಸ್ಟ್ 2025, 22:04 IST
ಅಂಶ್‌
ಅಂಶ್‌   

ಪ್ರಜಾವಾಣಿ ವಾರ್ತೆ

ವಿಜಯಪುರ: ಇಲ್ಲಿನ ಯೋಗಾಪುರ ಕಾಲೊನಿಯಲ್ಲಿರುವ ಶ್ರೀ ಸತ್ಯಸಾಯಿ ಬಾಬಾ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ನಡುವೆ ನಡೆದ ಹೊಡೆದಾಟದಲ್ಲಿ ಗಾಯಗೊಂಡ ಐದನೇ ತರಗತಿ ವಿದ್ಯಾರ್ಥಿ ಅಂಶ್ (9) ಮೃತಪಟ್ಟಿದ್ದಾನೆ. ಆತನ ಶವವನ್ನು ಶಾಲೆಯ ಆವರಣದಲ್ಲಿಟ್ಟು, ಪೋಷಕರು ಮತ್ತು ಸಂಬಂಧಿಕರು ಪ್ರತಿಭಟನೆ ನಡೆಸಿದರು.

ಉತ್ತರಪ್ರದೇಶ ರಾಜ್ಯದ ಜಾಲೂನ್‌ ಜಿಲ್ಲೆಯ ಕಕ್ರೋಲಿ ಗ್ರಾಮದ ಸುನೀಲ್‌ ಜಾಟಪ್‌ ಮತ್ತು ಶೃತಿ ದಂಪತಿಯು ಪುತ್ರ ಅಂಶ್‌ ಜೊತೆ, ನಾಲ್ಕು ವರ್ಷಗಳಿಂದ ತಳ್ಳುವ ಗಾಡಿಯಲ್ಲಿ ಪಾನಿಪುರಿ ವ್ಯಾಪಾರ ಮಾಡುತ್ತ ಜೀವನ ಸಾಗಿಸುತ್ತಿದ್ದರು. ಬಾಡಿಗೆ ಮನೆಯಲ್ಲಿ ವಾಸವಿದ್ದರು.

ADVERTISEMENT

‘ಆಗಸ್ಟ್ 4ರಂದು ಅಂಶ್‌ ಮತ್ತು ಶಾಲೆಯ ಇತರೆ ವಿದ್ಯಾರ್ಥಿಗಳ ನಡುವೆ ಹೊಡೆದಾಟವಾಗಿದೆ. ಘಟನೆಯಲ್ಲಿ ಗಾಯಗೊಂಡ ಅಂಶ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಮನೆಗೆ ಕರೆತಂದಿದ್ದೆವು. ಬುಧವಾರ ರಾತ್ರಿ ಏಕಾಏಕಿ ಉಸಿರಾಟದಲ್ಲಿ ತೊಂದರೆಯಾಗಿ ಮೃತಪಟ್ಟ. ಆತನ ಸಾವಿನ ಬಗ್ಗೆ ಅನುಮಾನ ಇದೆ. ಅಂಶ್‌ಗೆ ಈ ಮೊದಲು ಅನಾರೋಗ್ಯ ಸಮಸ್ಯೆಯೂ ಇತ್ತು’ ಎಂದು ಬಾಲಕನ ತಂದೆ ಸುನೀಲ್‌ ಪೊಲೀಸರಿಗೆ ದೂರು ನೀಡಿದ್ದಾರೆ.

‘ಬಾಲಕನ ಸಾವಿನ ಬಗ್ಗೆ ಅನುಮಾನಗಳು ಇವೆ. ಅದಕ್ಕೆ ಈವರೆಗೆ ಯಾರ ವಿರುದ್ಧವೂ ಕ್ರಮಕೈಗೊಂಡಿಲ್ಲ, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ಖಚಿತ ಕಾರಣ ಗೊತ್ತಾಗಲಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.