ಬಸವನಬಾಗೇವಾಡಿ: ಕೆಲವರು ಯುದ್ಧವನ್ನು ಪ್ರೀತಿಸುವವರಿದ್ದಾರೆ. ಯುದ್ಧ ಮಾಡುವುದರಿಂದ ಅನೇಕ ಮುಗ್ಧ ಜನ ಬಲಿಯಾಗುತ್ತಾರೆ. ಇದು ಮಾನವೀಯತೆ ಅಲ್ಲ; ಅವುಗಳನ್ನು ದೂರ ಮಾಡುವ ಜನ ಮುಂದೆ ಬಂದಾಗ ಶಾಂತರೀತಿಯಿಂದ ಬದುಕಲು ಸಾಧ್ಯ ಎಂದು ಸಾಹಿತಿ ಬಿ.ಟಿ.ಲಲಿತಾ ನಾಯಕ ಹೇಳಿದರು.
ತಾಲ್ಲೂಕಿನ ಹೂವಿನಹಿಪ್ಪರಗಿ ಗ್ರಾಮದ ವಿಶ್ವಚೇತನ ಪ್ರೌಢಶಾಲಾ ಆವರಣದಲ್ಲಿ ಭಾನುವಾರ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಮ್ಮಿಕೊಂಡಿದ್ದ ತೃತೀಯ ಕವಿ ಕಾವ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‘ಜಾತಿ ಎನ್ನುವುದು ಮನುಷ್ಯನನ್ನು ಮೃಗವನ್ನಾಗಿ ಮಾಡುತ್ತಿದೆ. ಜಾತಿ ಹಾಗೂ ಮೌಢ್ಯವನ್ನು ತೊಲಗಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕಿದೆ. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯು ಸಾಹಿತ್ಯಿಕ ಚಟುವಟಿಕೆಗಳ ಮೂಲಕ ಜನಜಾಗೃತಿ ಮೂಡಿಸುತ್ತಿದೆ‘ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಮಾತನಾಡಿ ‘ಕವಿ, ಸಾಹಿತಿಗಳಿಗೆ ಸಮ್ಮೇಳನಗಳು ಸ್ಪೂರ್ತಿ.ಸಾಹಿತ್ಯ ಕೃತಿಗಳನ್ನು ಓದುವುದರಿಂದ ಸಾಹಿತಿ, ಕವಿಗಳ ಭಾವನೆಯನ್ನು ಅರಿತುಕೊಳ್ಳಬಹುದು‘ ಎಂದರು.
ಸಮ್ಮೇಳನಾಧ್ಯಕ್ಷೆ ಡಾ. ವಸುಂಧರಾ ಭೂಪತಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಎಂ.ಜಿ.ದೇಶಪಾಂಡೆ, ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ ಉಪ್ಪಾರ, ಡಾ. ಸುಪ್ರೀತಾ ಲಗಳಿ, ವೇದಿಕೆಯ ಉಪಾಧ್ಯಕ್ಷೆ ಶಾಲಿನಿ ರುದ್ರಮುನಿ, ಧುರೀಣ ರಾಜುಗೌಡ ಪಾಟೀಲ (ಕುದರಿಸಾಲವಾಡಗಿ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಮಾತನಾಡಿದರು.
ಮಸೂತಿಯ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಸಾಪ ಮಾಜಿ ಗೌರವ ಕಾರ್ಯದರ್ಶಿ ಸಿ.ಕೆ.ರಾಮೇಗೌಡ, ಸಾಹಿತಿ ಹೇಮಾ ಪಟ್ಟಣಶೆಟ್ಟಿ, ಸರಸ್ವತಿ ಚಿಮ್ಮಲಗಿ, ಗ್ರಾ.ಪಂ ಅಧ್ಯಕ್ಷೆ ಶಂಕ್ರೆಮ್ಮ ಗುಂಡಾನವರ, ಗುತ್ತಿಗೆದಾರ ಶರಣು ಆಲೂರ, ಸುರೇಶ ಚಿಮ್ಮಲಗಿ, ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಮುರಗೇಶ ಸಂಗಮ, ತಾಲ್ಲೂಕು ಘಟಕದ ಅಧ್ಯಕ್ಷ ಮಾಧವ ಗುಡಿ ಪಾಲ್ಗೊಂಡಿದ್ದರು.
ಶ್ರವಣ ರಾಜನಾಳ ಪ್ರಾರ್ಥನಾ ಗೀತೆ ಹಾಡಿದರು. ವೇದಿಕೆಯ ಸಂಚಾಲಕ ಮಲ್ಲಿಕಾರ್ಜುನ ರಾಜನಾಳ ಸ್ವಾಗತಿಸಿದರು. ಕೋಶಾಧ್ಯಕ್ಷ ಎಚ್.ಎಸ್.ಬಸವರಾಜ, ಸವಿತಾ ಹಡಲಗೇರಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.