ವಿಜಯಪುರ: ತಾಲ್ಲೂಕಿನ ಜುಮನಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಅಮೀತ್ ಮಾದರ ಎಸ್.ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ 625 ಅಂಕಗಳನ್ನು ಪಡೆದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಶನಿವಾರ ಅದ್ದೂರಿ ಮೆರವಣಿಗೆ ಮಾಡಲಾಯಿತು.
ದಲಿತ ಕುಟುಂಬದಿಂದ ಬಂದ, ಅತ್ಯಂತ ಕಡು ಬಡತನದಲ್ಲಿ ಓದುತ್ತಿರುವ ಅಮೀತ್ ಮಾದರ ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದಾರೆ. ತಾಯಿ ಕೂಲಿ ಕೆಲಸ ಮಾಡಿ ಮಗನನ್ನು ಓದಿಸಿದ್ದಾರೆ. ಜಿಲ್ಲಾ ಕೇಂದ್ರ ಕೇವಲ 5 ಕಿ.ಮೀ.ದೂರದಲ್ಲಿದ್ದರೂ ಖಾಸಗಿ ಶಾಲೆ ಬಿಟ್ಟು, ಸರ್ಕಾರಿ ಶಾಲೆ ಸೇರಿಕೊಂಡು ನಿರಂತರ ಅಧ್ಯಯನದಿಂದ ಈ ಸಾಧನೆ ಮಾಡಿ ಜುಮನಾಳ ಗ್ರಾಮದ ಕೀರ್ತಿ ರಾಜ್ಯ ಮಟ್ಟಕ್ಕೆ ತಲುಪುವಂತೆ ಮಾಡಿದ ಕಾರಣ ಗ್ರಾಮಸ್ಥರೆಲ್ಲರೂ ಸೇರಿ, ಭವಿಷ್ಯದಲ್ಲಿ ಗ್ರಾಮದ ಮಕ್ಕಳು ಇವನಿಂದ ಸ್ಪೂರ್ತಿ ಪಡೆಯುವಂತಾಗಲಿ ಎಂದು ಅದ್ದೂರಿ ಮೆರವಣಿಗೆ ಮಾಡಿದರು.
ಹಿರಿಯರು, ಯುವಕರು, ವಿದ್ಯಾರ್ಥಿಗಳು, ಮಹಿಳೆಯರಾದಿಯಾಗಿ ಎಲ್ಲರೂ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು.
ಜಿಲ್ಲಾ ಅಹಿಂದ ಮುಖಂಡರಾದ ಸೋಮನಾಥ ಕಳ್ಳಿಮನಿಮೆರವಣಿಗೆಯ ನೇತೃತ್ವ ವಹಿಸಿದ್ದರು. ಭೀಮನಗೌಡ ನಿಂಬರಗಿ, ಮಲಕಪ್ಪ ಸಂಕಗೊಂಡ, ಬಸನಗೌಡ ಪಾಟೀಲ, ಮಲ್ಲಿಕಾರ್ಜುನ ವಾರಣಾಸಿ, ಕಾಶೀನಾಥ ಅಮರಪ್ಪಗೋಳ, ಅಸೀಫ ಮುಲ್ಲಾ, ಮೌಲಾಲಿ ಕೋಲ್ಹಾರ, ಸುಭಾಸ ಚಲವಾದಿ, ಭೀಮಶಿ ಮಸಬಿನಾಳ, ಯಲ್ಲಪ್ಪ ತಳೇವಾಡ, ಭೀರಪ್ಪ ಮಮದಾಪೂರ, ಶ್ರೀಕಾಂತ ಬಗಲಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಸಿದ್ದಮ್ಮ ಮಾದರ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.