ADVERTISEMENT

ನಮ್ಮ ನಡೆ ಅಧ್ಯಾತ್ಮದ ಕಡೆಗಿರಲಿ

ವಿಶ್ವಕರ್ಮ ಜಯಂತಿ; ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 15:37 IST
Last Updated 17 ಸೆಪ್ಟೆಂಬರ್ 2019, 15:37 IST
ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯನ್ನು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಉದ್ಘಾಟಿಸಿದರು
ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯನ್ನು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಉದ್ಘಾಟಿಸಿದರು   

ವಿಜಯಪುರ: ‘ಅಧ್ಯಾತ್ಮದ ಜ್ಞಾನ ಹಾಗೂ ಉತ್ತಮ ಚಿಂತನೆಯ ಕೊರತೆಯಿಂದ ಜೀವನದಲ್ಲಿ ತೊಂದರೆಗಳು ಎದುರಾಗುತ್ತಿದ್ದು, ಪ್ರಜ್ಞಾವಂತ ನಾಗರಿಕರು ನಮ್ಮ ನಡೆ ಅಧ್ಯಾತ್ಮದ ಕಡೆ ಎಂಬ ಪರಿಕಲ್ಪನೆಯತ್ತ ಸಾಗಬೇಕು’ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಿದ್ಧಾರೂಢರ ಸಮಕಾಲೀನವರಾದ ಅಧ್ಯಾತ್ಮಗುರು ವಿಶ್ವಕರ್ಮರ ಜಯಂತಿ ಆಚರಣೆ ಅರ್ಥಪೂರ್ಣವಾಗಬೇಕಾದರೆ ಅವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದ ಹಾಗೂ ತಮ್ಮ ವ್ಯಕ್ತಿತ್ವ ವಿಕಸನಕ್ಕೆ ಗುರುಗಳ ವಿಚಾರಧಾರೆಗಳು ಅತ್ಯವಶ್ಯಕವಾಗಿವೆ’ ಎಂದರು.

ADVERTISEMENT

‘ವಿಶ್ವ ಎಂದರೆ ಬ್ರಹ್ಮಾಂಡ, ಕರ್ಮ ಎಂದರೆ ಕೆಲಸ; ಇಡೀ ಜಗತ್ತು ಹಾಗೂ ವಿವಿಧ ಸಾವಿರಾರು ಜೀವಾಂಶಗಳು ಸೇರಿ ಬ್ರಹ್ಮಾಂಡವನ್ನೇ ಗುರುಗಳು ಸೃಷ್ಟಿ ಮಾಡಿದ್ದಾರೆ. ಭಗವಂತನು ಮನುಕುಲಕ್ಕೆ ಕೇವಲ ಸುಖವನ್ನಷ್ಟೇ ಫಲಿಸದೆ, ಪ್ರತಿಯೊಬ್ಬರೂ ಕಷ್ಟದ ರುಚಿಯನ್ನು ಅನುಭವಿಸಲಿ ಎಂದು ನೆರೆ ಹಾವಳಿ, ಭೂಕಂಪ ಹೀಗೆ ಪ್ರಕೃತಿ ವಿಕೋಪಗಳನ್ನು ಸೃಷ್ಟಿಸುತ್ತಾನೆ’ ಎಂದರು.

ಮೂರ್ಜಾವದ ಮಠದ ಮಹೇಂದ್ರ ಗುರೂಜಿ ಅವರು ಮಾತನಾಡಿ, ‘ತಾಯಂದಿರು ತಮ್ಮ ಮಕ್ಕಳಿಗೆ ಪಠ್ಯಪುಸ್ತಕದ ವಿಚಾರಗಳನ್ನು ತಿಳಿಸುವ ಜತೆಗೆ ಧರ್ಮ ರಕ್ಷಣೆ, ಸಂಸ್ಕಾರವನ್ನು ಕಲಿಸಬೇಕು. ಧರ್ಮ ಸಂಸ್ಕಾರ ಹಾಗೂ ಧರ್ಮ ನಿಷ್ಠ ಬಗ್ಗೆ ತಿಳಿಹೇಳಬೇಕು. ಮಕ್ಕಳಲ್ಲಿಯೂ ಕೂಡ ಅಧ್ಯಾತ್ಮದ ಚಿಂತನೆಗಳು ಬೆಳೆಯುವಂತಾಗಬೇಕು’ ಎಂದರು.

ಪ್ರಕಾಶ ಪತ್ತಾರ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಮಹೇಶ ಪೋತದಾರ, ನಿರ್ದೇಶಕ ಎಂ.ಬಿ.ಕಟ್ಟಿಮನಿ, ಬಸವ ಸೇನೆ ಅಧ್ಯಕ್ಷ ಸೋಮನಗೌಡ ಕಲ್ಲೂರ, ಡಾ.ಜ್ಞಾನೇಶ್ವರ ಪಂಡಿತ, ಸಂತೋಷ ರಾಠೋಡ, ದಯಾನಂದ ಮಠ, ಮಲ್ಲಿಕಾರ್ಜುನ ಕಲ್ಲೂರ, ವಿಜಯಕುಮಾರ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.