ನಿಡಗುಂದಿ(ವಿಜಯಪುರ): ವಿಜಯಪುರ ನಗರದ ದೇವಗಿರಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದ್ದ ಕೋವಿಡ್ ಸೋಂಕಿತ 57 ಜನರ ಅಸ್ಥಿಯನ್ನು ತಾಲ್ಲೂಕಿನ ಯಲಗೂರಕ್ಕೆ ತಂದು ಕೃಷ್ಣಾ ನದಿಯಲ್ಲಿ ಶಾಸ್ತ್ರೋಕ್ತವಾಗಿ ಭಾನುವಾರ ವಿಸರ್ಜಿಸಲಾಯಿತು.
ಶವಸಂಸ್ಕಾರ ನಡೆದು ತಿಂಗಳಾದರೂ ಅವರ ಸಂಬಂಧಿಗಳು ಚಿತಾಭಸ್ಮವನ್ನು ವಿಸರ್ಜಿಸಿರಲಿಲ್ಲ. ಸ್ಮಶಾನದಲ್ಲಿಯೇ ಈ ಚಿತಾಭಸ್ಮ ಉಳಿದುಕೊಂಡಿದ್ದವು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೂಚನೆಯಂತೆ ವಿಜಯಪುರದ ವಿಪ್ರ ಕ್ರಿಯಾ ಕರ್ಮ ಟ್ರಸ್ಟ್ ಸದಸ್ಯರು, ಬಿಜೆಪಿ ಮುಖಂಡರ ಜತೆಗೂಡಿ ಅಸ್ಥಿಯನ್ನು ಯಲಗೂರಕ್ಕೆ ತಂದು ಕೃಷ್ಣಾ ತೀರದಲ್ಲಿ ಹಿಂದೂ ಸಂಪ್ರದಾಯದಂತೆ ಪೂಜಾ ವಿಧಿವಿಧಾನ ನಡೆಸಿದರು. ಈ ಕಾರ್ಯಕ್ಕೆ ಯಲಗೂರದ ವಿವಿಧ ಆಚಾರಿಗಳು ಸಾಥ್ ನೀಡಿದರು.
ಚಿತಾಭಸ್ಮವನ್ನು ತುಂಬಿದ ಮಣ್ಣಿನ ಗಡಿಗೆಗಳನ್ನು ಸಾಲಾಗಿ ಇಟ್ಟು ಅವುಗಳ ಪೂಜೆ ನಡೆಸಿದ ನಂತರ, ತೆಪ್ಪಗಳ ಮೂಲಕ ಕೃಷ್ಣಾ ನದಿಗೆ ಒಯ್ದು ಅರ್ಚಕರು ವಿಸರ್ಜಿಸಿದರು.
ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ ಮಾತನಾಡಿ, ವಿಜಯಪುರದಲ್ಲಿ ನಿತ್ಯ ದೇವಗಿರಿ ಸ್ಮಶಾನದಲ್ಲಿ 10 ರಿಂದ 15 ಜನರ ಅಂತ್ಯಕ್ರಿಯೆ ಜರುಗುತ್ತಿತ್ತು. 57 ಕ್ಕೂ ಅಧಿಕ ಜನರ ಚಿತಾಭಸ್ಮ ಅವರ ಸಂಬಂಧಿಗಳು ಒಯ್ದಿರಲಿಲ್ಲ. ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಸೂಚನೆಯಂತೆ ವಿಪ್ರ ಕ್ರಿಯಾ ಕರ್ಮ ಟ್ರಸ್ಟ್ ನ ಸದಸ್ಯರ ಜತೆಗೂಡಿ ಸಂಪ್ರದಾಯದೊಂದಿಗೆ ಕೃಷ್ಣಾ ನದಿಯಲ್ಲಿ ವಿಸರ್ಜನೆ ಮಾಡಲಾಗಿದೆ' ಎಂದರು.
ದೇವಗಿರಿ ಹಿಂದೂ ರುದ್ರಭೂಮಿ ಟ್ರಸ್ಟ್ ನ ಅಧ್ಯಕ್ಷ ರಾಜೇಶ ದೇವಗಿರಿ ಮಾತನಾಡಿ, ಸತ್ತವರಿಗೆ ಮೋಕ್ಷ ಸಿಗಬೇಕಾದರೆ ಹಿಂದೂ ಸಂಪ್ರದಾಯದಂತೆ ಅಸ್ಥಿ ವಿಸರ್ಜನೆ ಮುಖ್ಯ ಕಾರ್ಯ. ಈ ಮೂಲಕ ಮೃತಪಟ್ಟವರಿಗೆ ಸದ್ಗತಿ ಸಿಗಲಿ ಎಂದು ಅಸ್ತಿ ವಿಸರ್ಜನೆ ಮಾಡಿದ್ದೇವೆ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಜಿ.ಪಂ. ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಪ್ರೇಮನಾಥ ಬಿರಾದಾರ, ರಾಜೇಶ ದೇವಗಿರಿ, ಗೋಪಾಲ ಗದ್ದನಕೇರಿ, ತುಳಸಿರಾಮ್ ಸೂರ್ಯವಂಶಿ, ಕೃಷ್ಣಾ ಗುನಾಳಕರ, ಮನೋಜ ಶಹಾಪೂರ, ಶ್ರೀನಿವಾಸ ಬೆಟಗೇರಿ, ವಿಜಯೇಂದ್ರ ನಾಮಣ್ಣ, ಅರವಿಂದ ಜೋಶಿ, ಲಕ್ಷ್ಮಣ ಜೋಶಿ, ಸುಧೀಂದ್ರ ಟಂಕಸಾಲಿ, ಪ್ರಸನ್ನಾಚಾರ್ಯ ಕಟ್ಟಿ, ಬದರಿನಾರಾಯಣ ಚಿಮ್ಮಲಗಿ, ರಂಗನಾಥ ಪೂಜಾರಿ, ಯಲಗೂರೇಶ ಶಿರೂರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.