ADVERTISEMENT

ಉದ್ದಾರವಾಗದ ಹರಿಜನವಾಡ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2011, 7:25 IST
Last Updated 7 ಏಪ್ರಿಲ್ 2011, 7:25 IST
ಉದ್ದಾರವಾಗದ ಹರಿಜನವಾಡ
ಉದ್ದಾರವಾಗದ ಹರಿಜನವಾಡ   

ಶಹಾಪುರ: ಪುರಸಭೆಯ ಆಡಳಿತ ದಶಕದಿಂದ ಅಭಿವೃದ್ಧಿಯ ಹರಿಕಾರ ಎಂದು ಬಿಂಬಿಸಿಕೊಂಡಿ ರುವ ಜನಪ್ರತಿನಿಧಿಯ ಕೈಯಲ್ಲಿ ಅಧಿಕಾರದ ಚುಕ್ಕಾಣಿಯಿದೆ. ರಾಜಕೀಯ ಸೇಡಂ ನಿಂದ ವಾರ್ಡ್ ನಂಬರ್ 17 ನಲುಗುತ್ತಿದೆ. ಹೆಚ್ಚಾಗಿ ಪರಿಶಿಷ್ಟ ಜಾತಿಯ (ಮಾದಿಗ) ಸಮುದಾಯ ದವರು ನೆಲೆ ಕಂಡ ಇಲ್ಲಿನ ಬಡಾವಣೆಯ ಬದುಕು ಮಾತ್ರ ನರಕ. ಸಾಕಷ್ಟು ಹಣದ ಹೊಳೆ ಪುರಸಭೆಯ ಬಡಾವಣೆಗಳಿಗೆ ಹರಿದು ಬರುತ್ತ ಲಿದೆ. ಅಭಿವೃದ್ಧಿ ಮಾತ್ರ ಶೂನ್ಯ. ಜನಪ್ರತಿನಿಧಿಗಳ ತೋರು ಬೆರಳಿನಂತೆ ಕೆಲಸ ನಿರ್ವಹಿಸುವ ಪುರಸಭೆ ಸಿಬ್ಬಂದಿ ಅಲ್ಲಿನ ನಿವಾಸಿಗಳ ಸಮಸ್ಯೆ ಗಳಿಗೆ ಸ್ಪಂದಿಸುತ್ತಿಲ್ಲ.

ವಾರ್ಡ್ ನಂಬರ್ 17ರಲ್ಲಿ ಸುಮಾರು 300 ಕುಟುಂಬಗಳಿವೆ. ಅದರಲ್ಲಿ ಹೆಚ್ಚಾಗಿ ಪರಿಶಿಷ್ಟ ಜಾತಿಯ (ಮಾದಿಗ), ಕುಂಚಕೊರವರ್, ಮುಸ್ಲಿಂ ಸಮುದಾಯದವರು ನೆಲೆ ಕಂಡಿದ್ದಾರೆ. ಪರಿಶಿಷ್ಟ ಜಾತಿಯ    ಶೇ 18ರಷ್ಟು ಬಡಾವಣೆ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಅನುದಾನ ಸದ್ಭಳಕೆಗೆ ಅವಕಾಶವಿದ್ದರೂ ಇಲ್ಲಿ ಮಾತ್ರ ಸ್ಥಳೀಯ ಶಾಸಕರ ವಿರೋಧಿಯ ಬಡಾವಣೆಯ ಎಂಬ ಹಣೆಪಟ್ಟಿ ಹೊತ್ತುಕೊಂಡ ಕಾರಣ ಅಭಿವೃದ್ಧಿ ಯೋಜನೆಗೆ ಕೊಡಲಿ ಪೆಟ್ಟು ಬಿದ್ದಿದೆ. ನಿಯಮನುಸಾರ ವಾರ್ಡ್ ನಂಬರ 17ರ ಅಭಿವೃದ್ಧಿಗೆ ಟೆಂಡರ್ ಕರೆಯಲಾಗುತ್ತದೆ. ಅನು ದಾನ ಬಿಡುಗಡೆಯಾದ ಬಳಿಕ ಕಾಮಗಾರಿಯನ್ನು ದುರುದ್ದೇಶದಿಂದ ಬೇರೆಡೆ ಬಡಾವಣೆ ಇಲ್ಲವೆ ಅನಗತ್ಯವಿದ್ದ ಕಡೆ ಅರೆಬರೆ ಕೆಲಸ ನಿರ್ವಹಿಸಿ ಕೊಂಡು ಬರುತ್ತಿರುವುದು ಹಲವು ವರ್ಷಗಳಿಂದ ಸಾಮಾನ್ಯವಾಗಿ ಬಿಟ್ಟಿದೆ ಎನ್ನುತ್ತಾರೆ ಬಡಾ ವಣೆಯ ನಿವಾಸಿ ವಸಂತ ಸುರಪುರಕರ್.

ಪಟ್ಟಣದ ಹೊರವಲಯದ ಫಿಲ್ಟರ್‌ಬೆಡ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಇಲ್ಲದೆ ಪರಿತಪಿಸುವಂತಾ ಗಿದೆ.  ನಲ್ಲಿ ನೀರನ್ನು ಹೆಚ್ಚು ಸೆಳೆದುಕೊಳ್ಳಲು ವಿದ್ಯುತ್ ಮೋಟಾರ್ ಅಳವಡಿಸಿ ಪಡೆದು ಕೊಳ್ಳುತ್ತಾರೆ. ಸಾಮಾನ್ಯ ಬಡ ಜನತೆಯು ಹಾಕಲಾಗಿ ರುವ ಪೈಪ್‌ನಿಂದ ಟೊಂಕಮಟ್ಟದವರೆಗೆ ಗುಂಡಿ ತೊಡಬೇಕು. ಅದರ ಕೆಳಗಡೆ ನೀರು ತುಂಬಿ ಕೊಳ್ಳಲು ಬೊಗಾಣಿ ಇಟ್ಟು ತಂಬಿಗೆ ಸಹಾಯ ದಿಂದ ಕೊಡಗಳನ್ನು ತುಂಬಿಕೊಂಡು ಸಾಗಬೇಕು. ಅದು ಕೇವಲ 8-10ಕೊಡ ನೀರು ಮಾತ್ರ ಬರು ತ್ತವೆ. ಇನ್ನೂ ಬೇಸಿಗೆ ದಿನಗಳಲ್ಲಿ ಇನ್ನುಷ್ಟು ಬವಣೆ ಯನ್ನು ಎದುರಿಸಬೇಕು ರಾಜಕೀಯ ಸಂಘರ್ಷ ವನ್ನು ಕುಡಿಯುವ ನೀರಿನಲ್ಲಿ ತೇಲಿ ಸಿದ್ದಾರೆ ಎಂದು ದೂರುತ್ತಾಳೆ ಬಡಾವಣೆಯ ನಿವಾಸಿ ಹುಲಗಮ್ಮ ದೊಡ್ಮನಿ.

ಸರಿಯಾದ ಚರಂಡಿಯಿಲ್ಲದೆ ರಸ್ತೆಯ ಮೇಲೆ ನೀರು ಹರಿಯುವುದರಿಂದ ತಗ್ಗು ಪ್ರದೇಶದಲ್ಲಿ ಕೊಳಚೆ ನೀರು ಸಂಗ್ರಹವಾಗಿ ಹಂದಿಗಳ ಆಶ್ರಯ ತಾಣವಾಗಿದೆ. ಅಲ್ಲಲ್ಲಿ ಹೂಳು ತುಂಬಿದ ಚರಂಡಿ ಯನ್ನು ಸ್ವಚ್ಛಗೊಳಿಸುವುದು ಮರೆತು ಬಿಟ್ಟಿದ್ದಾರೆ ಎನ್ನುತ್ತಾರೆ ನಿವಾಸಿಗಳು.

ಮಹಿಳೆಯರ ಪಾಡು ಹೇಳ ತೀರದು ಮಹಿಳಾ ಶೌಚಾಲಯವಿಲ್ಲ. ಅದೇ ಬಯಲು ಶೌಚಾ ಲಯವೇ ಗತಿಯಾಗಿದ್ದು ಅದರ ಸುತ್ತಲು ಜಾಲಿ ಗಿಡಗಳು ಬೆಳೆದು ನಿಂತಿವೆ ತುರ್ತು ಕ್ರಿಯೆಗಳನ್ನು ಪೂರೈಯಿಸಿಕೊಳ್ಳಲು ಹರ ಸಾಹಸ ಪಡಬೇಕು ಎನ್ನುತ್ತಾರೆ ದೇವಿಕಮ್ಮ. ಸ್ಮಶಾನಕ್ಕೆ ತೆರಳಲು ಮಾರ್ಗದ ರಸ್ತೆಯ ಅಕ್ಕ ಪಕ್ಕದಲ್ಲಿ ಜಾಲಿ ಮುಳ್ಳುಗಳು ತುಂಬಿಕೊಂಡಿವೆ. ಶವ ಸಂಸ್ಕಾರಕ್ಕೆ ಬಂದ ಜನತೆ ಹಿಡಿಶಾಪ ಹಾಕುತ್ತಾರೆ.

ಹೀಗೆ ಪಟ್ಟಣದ ನಡುವೆ ನಾವು ಬದುಕುತ್ತಿದ್ದೇವೆ ಎಂಬುವುದನ್ನು ಮರೆತುಕೊಂಡು ಜೀವಿ ಸುವಂತಾಗಿದೆ. ರಾಜಕೀಯ ಸೇಡಿನ ಮನೋ ಭಾವದಿಂದ ಜನತೆಯ ಮೂಲಸೌಲಭ್ಯಗಳಿಗೆ ತಾರತಮ್ಯ ಬೇಡ. ಬಡಾವಣೆಯ ಜನತೆ ಅನು ಭವಿಸುತ್ತಿರುವ ನರಕಯಾತನೆಯ ಬದುಕು ಕಾಣಲು ಜಿಲ್ಲಾಧಿಕಾರಿಯವರು ಸ್ಥಳಕ್ಕೆ ಭೇಟಿ ನೀಡಿ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ಪುರಸಭೆ ಕಚೇರಿಗೆ ಬೀಗ ಜಡೆದು ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಬಡಾಣೆಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.