ಸುರಪುರ: ಮಹಾತ್ಮಾ ಕೋರಿಸಿದ್ದೇಶ್ವರರು ತಮ್ಮ ಪವಾಡಗಳ ಮೂಲಕ ಜನರ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ ಸರಳತೆ, ಪ್ರಾಮಾಣಿಕತೆ, ಪರೋಪಕಾರದಂತಹ ಗುಣಗಳನ್ನು ಅಳವಡಿಸಿಕೊಳ್ಳಲು ಬೋಧಿಸಿದ್ದರು. ಸರಳ ಸಾಮೂಹಿಕ ವಿವಾಹಕ್ಕೂ ಅವರು ಪ್ರೋತ್ಸಾಹಿಸಿದ್ದರು.
ಅವರ ಜಾತ್ರಾ ಮಹೋತ್ಸವದಲ್ಲಿ ಸರಳ ಸಾಮೂಹಿಕ ವಿವಾಹ ಆಯೋಜಿಸಿರುವುದು ಸ್ತುತ್ಯಾರ್ಹ ಎಂದು ನಾಲವಾರದ ತೋಟೇಂದ್ರ ಶಿವಾಚಾರ್ಯರು ಹರ್ಷ ವ್ಯಕ್ತಪಡಿಸಿದರು.
ತಾಲ್ಲೂಕಿನ ಕರಡಕಲ್ ಗ್ರಾಮದ ಕೋರಿಸಿದ್ದೇಶ್ವರ ಶಾಖಾಮಠದಲ್ಲಿ ಕೋರಿಸಿದ್ದೇಶ್ವರರ 13ನೇ ಜಾತ್ರಾ ಮಹೋತ್ಸವದ ಅಂಗವಾಗಿ ಈಚೆಗೆ ಏರ್ಪಡಿಸಿದ್ದ ಸಾಮೂಹಿಕ ವಿವಾಹದಲ್ಲಿ ನೂತನ ಜೀವನಕ್ಕೆ ಕಾಲಿಟ್ಟ ದಂಪತಿಗಳನ್ನು ಆಶೀರ್ವದಿಸಿ ಮಾತನಾಡಿದರು.
ಸಾಮೂಹಿಕ ವಿವಾಹದಿಂದ ಅನಗತ್ಯ ದುಂದು ವೆಚ್ಚ ಕಡಿಮೆಯಾಗುತ್ತದೆ. ವಿವಾಹದ ನಂತರವೂ ಪಾಲಕರು ನೆಮ್ಮದಿಯ ಜೀವನ ನಡೆಸಬಹುದು. ನವದಂಪತಿಗಳು ಸುಖವಾಗಿ ಇರುತ್ತಾರೆ. ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡುವುದು ರಾಷ್ಟ್ರೀಯ ಉಳಿತಾಯ ಎನ್ನಬಹುದು.
ಉಳ್ಳವರು ಇಂತಹ ಕಾರ್ಯಕ್ರಮಗಳಲ್ಲಿ ತಮ್ಮ ಮಕ್ಕಳ ಮದುವೆ ಮಾಡಿ ಎಂದು ಕರೆ ನೀಡಿದರು.
ಕರಡಕಲ್ದ ಶಾಂತರುದ್ರಮುನಿ ಸ್ವಾಮೀಜಿ ಮಾತನಾಡಿ, ಕಳೆದ 13 ವರ್ಷಗಳಿಂದ ಜಾತ್ರಾ ಮಹೋತ್ಸವ ಮತ್ತು ಸಾಮೂಹಿಕ ವಿವಾಹ ನಡೆಯುತ್ತಾ ಬಂದಿದೆ. ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರ ಸಹಕಾರ ಅಮೋಘವಾಗಿದೆ.
ನಾಲವಾರ ಅಪ್ಪ ಅವರ ಆಶೀರ್ವಾದ ಸದಾ ಇದೆ. ಎಲ್ಲರಿಗೂ ಕೋರಿಸಿದ್ದೇಶ್ವರ ಮಂಗಳವನ್ನುಂಟು ಮಾಡಲಿ ಎಂದು ಹಾರೈಸಿದರು.
ಮಲ್ಲಿಕಾರ್ಜುನ ದೇವರು, ಹರನಾಳದ ದೊಡ್ಡಯ್ಯ ಶರಣರು, ನಗನೂರಿನ ಶರಣಪ್ಪ ಶರಣರು, ಗದಗದ ಮಾಡಿವಾಳಯ್ಯಶಾಸ್ತ್ರಿ, ಯಡ್ರಾಮಿ ರುದ್ರಮುನಿ ಸ್ವಾಮೀಜಿ, ಕೆಂಭಾವಿ ಬೀರಪ್ಪ ಶರಣರು, ಕರವೇ ರಾಜ್ಯ ಸಂಚಾಲಕ ಬಸವರಾಜ ಪಡುಕೋಟಿ, ಸಂಗನಗೌಡ ವಜ್ಜಲ, ಶರಣು ದಂಡಿನ, ರವಿ ಸೊನ್ನದ ಇದ್ದರು.
ಪ್ರಕಾಶ ಅಂಗಡಿ ಸ್ವಾಗತಿಸಿದರು. ಶಿವುಪ್ರಕಾಶ ದೇವರು ನಿರೂಪಿಸಿದರು. ಮಲ್ಲಯ್ಯ ಪರನಸಹಳ್ಳಿ ವಂದಿಸಿದರು.
ಶರಣುಕುಮಾರ ಜಾಲಹಳ್ಳಿ, ಶಾಂತಗೌಡ ಮಾಲಿಪಾಟೀಲ, ಪ್ರಭು ಸೊನ್ನದ, ಚಂದ್ರಶೇಖರ ಗೋಗಿ, ಶಾಂತಕುಮಾರ ಜೇರಟಗಿ ಅವರಿಂದ ಸಂಗೀತ ಸೇವೆ ನಡೆಯಿತು. 32 ಜೋಡಿಗಳು ನವ ಜೀವನಕ್ಕೆ ಕಾಲಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.