ADVERTISEMENT

ಕಾಂಗ್ರೆಸ್‌ನಿಂದ ಮಾತ್ರ ಉತ್ತಮ ಸರ್ಕಾರ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 8:45 IST
Last Updated 15 ಅಕ್ಟೋಬರ್ 2012, 8:45 IST

ಯಾದಗಿರಿ: ಕಾಂಗ್ರೆಸ್‌ಗೆ ಬನ್ನಿ ಬದಲಾವಣೆ ತನ್ನಿ ಕಾರ್ಯಕ್ರಮವನ್ನು ಶಹಾಪುರ ತಾಲ್ಲೂಕಿನ ಹಯ್ಯೊಳ(ಬಿ) ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಹಯ್ಯೊಳ ಗ್ರಾಮದ ಹನುಮಾನ ಮಂದಿರದಲ್ಲಿ ಭಾನುವಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಡಾ.ಎ.ಬಿ.ಮಾಲಕರೆಡ್ಡಿ, ಕಾಂಗ್ರೆಸ್ ಪಕ್ಷದಿಂದ ಮಾತ್ರ ಉತ್ತಮ ಸರ್ಕಾರ, ಸುಭದ್ರ ಆಡಳಿತ ನೀಡಲು ಸಾಧ್ಯ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಲೂಟಿ ಮಾಡಿದೆ. ಕಾಂಗ್ರೆಸ್ ಪಕ್ಷ 65 ವರ್ಷದ ಸಾಧನೆಯನ್ನು ಟೀಕಿಸಿ, ಜನರ ದಿಕ್ಕು ತಪ್ಪಿಸಿ, ಕೇವಲ 4 ವರ್ಷಗಳಲ್ಲಿ ಸಾಕಷ್ಟು ಭ್ರಷ್ಟಾಚಾರ, ಹಗರಣ ನಡೆಸಿರುವುದು ಬಿಜೆಪಿ ಸಾಧನೆಯಾಗಿದೆ. ದೇಶ ವಿದೇಶದಲ್ಲಿ ಕರ್ನಾಟಕಕ್ಕೆ ಇದ್ದ ಖ್ಯಾತಿಯನ್ನು ಅಳಿಸಿ ಹಾಕಿದ್ದಾರೆ. ಅನೇಕ ನಾಯಕರು ಜೈಲು ಪಾಲಾಗಿದ್ದಾರೆ, ಇದು ತಲೆ ತಗ್ಗಿಸುವಂತಹ ಸರ್ಕಾರ ಎಂದು ಟೀಕಿಸಿದರು.

ಬಡವರಿಗೆ ಅಗ್ಗದ ದರದಲ್ಲಿ ಅಕ್ಕಿ ವಿತರಣೆ, ರೈತರಿಗೆ ಉಚಿತ ವಿದ್ಯುತ್, ಪಡಿತರ ಚೀಟಿ ಗೊಂದಲ, ವಯೋವೃದ್ಧರ ವೃದ್ಧಾಪ್ಯವೇತನಗಳೆಲ್ಲವೂ ಮರಿಚಿಕೆಯಾಗಿದ್ದು, ರಾಜ್ಯದ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಯಾದಗಿರಿ ಜಿಲ್ಲೆಗೆ 100 ಮೆಗಾವ್ಯಾಟ್ ವಿದ್ಯುತ್ ಪೂರೈಸಬೇಕು. ಆದರೆ ಕೇವಲ 35 ಮೆಗಾವ್ಯಾಟ್ ವಿದ್ಯುತ್ ನೀಡಲಾಗುತ್ತಿದೆ. ಇದರಿಂದ ಹಳ್ಳಿಗಳು ಕತ್ತಲಲ್ಲಿ ಮುಳುಗಿವೆ. ಜನರು ಕುಡಿಯುವ ನೀರು, ರೈತರು ವಿದ್ಯುತ್ ಇಲ್ಲದೇ ಪರದಾಡುವ ಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ಹೇಳಿದರು.

ಕೃಷ್ಣಾ ನದಿ ಪ್ರವಾಹ ಬಂದಾಗ ಹಯ್ಯೊಳ ಗ್ರಾಮದ ಸಂತ್ರಸ್ತರಿಗೆ ಸರ್ಕಾರದ ವತಿಯಿಂದ ಆಸರೆ ಮನೆಗಳನ್ನು ಒದಗಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕಚ್ಚಾಟ, ಶ್ರೀರಾಮುಲು ಒಂದೆಡೆ, ಯಡಿಯೂರಪ್ಪ ಮತ್ತೊಂದೆಡೆ, ದಿಕ್ಕಿಗೊಬ್ಬ ನಾಯಕರಾಗಿದ್ದಾರೆ ಎಂದರು.

ಕಾಗ್ರೆಸ್‌ನಿಂದ ಮಾತ್ರ ಜನರಿಗೆ ಉತ್ತಮ ಆಡಳಿತ ನೀಡಲು ಸಾಧ್ಯ. 125 ವರ್ಷಗಳ ಇತಿಹಾಸವುಳ್ಳ ಕಾಂಗ್ರೆಸ್ ಪಕ್ಷ, ಉತ್ತಮ ಆಡಳಿತದ ಮೂಲಕ ಜನರ ಸೇವೆಗೆ ಸಿದ್ಧವಾಗಿದೆ ಎಂದರು.

ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಹುಲಕಲ್, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮೇಗೌಡ ಮರಕಲ್, ಎಸ್ಟಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ನಾಯಕ, ಕಾರ್ಮಿಕ ವಿಭಾಗದ ರಾಜ್ಯ ಘಟಕದ ಕಾರ್ಯದರ್ಶಿ ಸಂತೋಷ ನಿರ್ಮಲಕರ್, ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ಮಂಜುಳಾ ಗೂಳಿ, ಗ್ರಾಮೀಣ ಘಟಕದ ಅಧ್ಯಕ್ಷೆ ಮಲ್ಲಮ್ಮ ಕೊಳೂರು, ಯಾದಗಿರಿ ನಗರ ಘಟಕ ಅಧ್ಯಕ್ಷೆ ವಿಜಯಲಕ್ಷ್ಮಿ  ಬಿಳ್ಹಾರ ಮುಂತಾದವರು ಮಾತನಾಡಿದರು.

ಬಾಪೂಗೌಡ ಹಯ್ಯೊಳ, ಚಂದ್ರಶೇಖರ ಮರಕಲ್, ಬಸವರಾಜಪ್ಪಗೌಡ ದಳಪತಿ ಮುಷ್ಟೂರ, ರಾಹುಲ್ ಅರಕೇರಿ, ಅರುಣಕುಮಾರ ಕುಲಕರ್ಣಿ, ಸುರೇಶ ಜೈನ್, ಶಿವಯೋಗಿ ಭಂಡಾರಿ, ಮಲ್ಲಿಕಾರ್ಜುನಗೌಡ ಗುಂಡಗುರ್ತಿ, ಮಲ್ಲಯ್ಯ ಗುತ್ತೆದಾರ, ಅಂಬ್ರಣ್ಣ ದೇಸಾಯಿ, ಸಾಹೇಬಣ್ಣ ಗೊಂದೆಡಿಗಿ, ಮಾಣಿಕರೆಡ್ಡಿ ಕುರುಕುಂದಾ, ಶರಣಬಸ್ಸಪ್ಪ ಕುರುಕುಂದಾ, ಅಂಬ್ರಣ ಬಾಗ್ಲಿ, ಶಿವರಾಜ ಹಾಲಗೇರಾ, ಶರಣಗೌಡ ಪೊಲೀಸ್‌ಪಾಟೀಲ, ಆದಪ್ಪ ಕುಂಬಾರ, ಮಲ್ಲಪ್ಪ ಕುಂಬಾರ, ರಾಜು ದೋರನಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಕಾರ್ಯಕರ್ತರು ಭಾಗವಹಿಸಿದ್ದರು. ಮಲ್ಲಿಕಾರ್ಜುನ ಪೂಜಾರಿ ಸ್ವಾಗತಿಸಿದರು. ಹಣಮಂತ್ರಾಯ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.