ADVERTISEMENT

ಜೆಡಿಎಸ್ ನಾಯಕರಿಂದ ಬರ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 7:50 IST
Last Updated 24 ಏಪ್ರಿಲ್ 2012, 7:50 IST

ಶಹಾಪುರ: ತಾಲ್ಲೂಕಿನ ಭೀಕರ ಬರದ ನೈಜ ಚಿತ್ರಣವನ್ನು ಕಾಣಲು ಜೆಡಿಎಸ್‌ನ ಜಿಲ್ಲಾ ಅಧ್ಯಕ್ಷ ನಾಗಣ್ಣಗೌಡ ಕಂದಕೂರ, ಕಾರ್ಯಾಧ್ಯಕ್ಷ ಶರಣಪ್ಪ ಸಲಾದಪೂರ, ತಾಲ್ಲೂಕು ಅಧ್ಯಕ್ಷ ಇಬ್ರಾಹಿಂಸಾಬ್ ಸಿರವಾಳ ನೇತೃತ್ವದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲ್ಲೂಕಿನ ಹೊಸಕೇರಿ ಗ್ರಾಮದ ಕೆರೆ ಸಂಪೂರ್ಣವಾಗಿ ಬತ್ತಿ ಹೋಗಿದೆ. ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಅಲ್ಲದೆ ವನದುರ್ಗ ದೊಡ್ಡದಾದ ಗ್ರಾಮ ಪಂಚಾಯಿತಿ ಕ್ಷೇತ್ರವಾಗಿದ್ದರೂ ಕೂಡಾ ಇಂದಿಗೂ ಶಾಶ್ವತವಾದ ಕುಡಿಯುವ ನೀರಿನ ಯೋಜನೆ ಇಲ್ಲದೆ ಜನ ಪರಿತಪಿಸುತ್ತಿದ್ದಾರೆ.
 
ಅಧ್ಯಯನಕ್ಕೆ ತೆರಳಿ ದ ತಂಡದ ಮುಂದೆ ಖಾಲಿ ಕೊಡಗಳನ್ನು ಹಿಡಿದುಕೊಂಡು ನೀರು ಕೊಡಿಸಿ ಎಂಬ ಬಿನ್ನಹವನ್ನು ಮುಂದಿಟ್ಟರು. ತಾಲ್ಲೂಕು ಪಂಚಾತಿ ಅಧ್ಯಕ್ಷರ ತವರು ಗ್ರಾಮವಾದ ಕಕ್ಕಸಗೇರಾ ಗ್ರಾಮದಲ್ಲಿ ನೀರಿನ  ಸಮಸ್ಯೆ ಮುಂದುವರೆದಿದೆ ಎಂದು ಜೆಡಿಎಸ್ ಕಾರ್ಯಾಧ್ಯಕ್ಷರಾದ ಶರಣಪ್ಪ ಸಲಾದಪೂರ ಆರೋಪಿಸಿದರು.

ಇದರಂತೆ ತಾಲ್ಲೂಕಿನ ಗುಂಡಾಪೂರ, ಚಾಮನಾಳ, ಕಾಡಂಗೇರಾ ಮುಂತಾದ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಅಧಿಕವಾಗಿದೆ. ಗ್ರಾಮದಲ್ಲಿ ಮಾತ್ರ ಅಧಿಕಾರಿಗಳು ಇಲ್ಲ. ನೀರಿನ ಸಮಸ್ಯೆ ಅವರಿಗೆ ಎಲ್ಲಿಂದ ಅರ್ಥವಾಗಬೇಕು. ಇದಕ್ಕಿಂತಲೂ ಭೀಕರವಾಗಿದ್ದು ಜಾನುವಾರುಗಳಿಗೆ ಮೇವಿನ ಬರ ಎದುರಾಗಿದೆ. ಹಳ್ಳಿ ಕೆರೆ ಒಣಗಿವೆ. ಜೋಪಾನ ಮಾಡಿದ ಎಮ್ಮೆ, ಆಕಳು, ಎತ್ತುಗಳನ್ನು ಮಾರಾಟ ಮಾಡುವ ಅಸಹಾಯಕ ಸ್ಥಿತಿಯಲ್ಲಿ ಜನತೆ ಇದ್ದಾರೆ ಎಂದು ತಾಲ್ಲೂಕು ಅಧ್ಯಕ್ಷ ಇಬ್ರಾಹಿಂ ಸಿರವಾಳ ತಿಳಿಸಿದರು.

ಜಿಲ್ಲಾಧಿಕಾರಿಯವರು ಕುಡಿಯುವ ನೀರಿಗಾಗಿ ತುರ್ತುಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದ್ದು ಕೇವಲ ದಾಖಲೆಗಳಲ್ಲಿ ಮಾತ್ರ ಉಳಿದುಕೊಂಡಿದೆ. ಸಮಸ್ಯೆ ಉಲ್ಬಣಿಸಿದರು ಕೂಡಾ ಕ್ರಮಕ್ಕೆ ಮುಂದಾಗುತ್ತಿಲ್ಲ. ಜನತೆಯ ತಾಳ್ಮೆಗೂ ಒಂದು ಮಿತಿಯಿದೆ. ತಕ್ಷಣ ಸರ್ಕಾರ ಹಾಗೂ ಜಿಲ್ಲಾಧಿಕಾರಿ ಎಚ್ಚೆತ್ತುಕೊಂಡು ತುರ್ತು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು.
 
ಅಂಗಲಾಚುತ್ತಿರುವ ಗ್ರಾಮೀಣ ಪ್ರದೇಶದ ಜನತೆಗೆ ಕುಡಿಯುವ ನೀರಿನ ಸಮಸ್ಯೆ  ಪರಿಹಾರಕ್ಕೆ ಮುಂದಾಗಬೇಕಿದೆ. ಕೆಲವೆಡೆ ನೀರು ಸಂಗ್ರಹವಿದೆ ನಿರ್ವಹಣೆ ಬರವಿದೆ. ಸರಿಯಾಗಿ ನಿರ್ವಹಣೆ ಮಾಡಿ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಜಿಲ್ಲಾಧ್ಯಕ್ಷ ನಾಗಣ್ಣಗೌಡ ಕಂದಕೂರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನ ಅನಪೂರ, ತಾಲ್ಲೂಕು ಅಧ್ಯಕ್ಷೆ ಬಸಮ್ಮ ರಾಂಪೂರ, ಶರಣಗೌಡ, ಸಾಯಿಬಣ್ಣ, ತಿಮ್ಮಣ್ಣ ಎಡಗಿಮದ್ರಿ, ಮಲ್ಲಿನಾಥಗೌಡ, ಮಲ್ಲಣ್ಣಗೌಡ ವಂದಗನೂರ, ಮಹ್ಮದ ಗೌಸ, ಮಹಾದೇವಪ್ಪ ನಾಟೇಕರ, ಶರಣಯ್ಯಸ್ವಾಮಿ, ರಮೇಶ ಮತ್ತಿತರರು ಅಧ್ಯಯನ ತಂಡದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.