ADVERTISEMENT

ತುಕ್ಕು ಹಿಡಿದ ಟಿಎಪಿಸಿಎಂಎಸ್‌ಗೆ ಪುನಶ್ಚೇತನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 9:00 IST
Last Updated 3 ಅಕ್ಟೋಬರ್ 2011, 9:00 IST

ಸುರಪುರ: ಕಳೆದ ದಶಕದಿಂದ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್)ಕ್ಕೆ ತುಕ್ಕು ಹಿಡಿದು ಹೋಗಿತ್ತು. ಆಗಿನ ಆಡಳಿತ ಮಂಡಳಿ ಯಾವುದೆ ವ್ಯವಹಾರ ಮಾಡದ್ದರಿಂದ ಸಂಘ ನಿಷ್ಕ್ರೀಯ ಗೊಂಡಿತ್ತು. ಸಚಿವ ರಾಜೂಗೌಡ ಅವರ ಮಾರ್ಗದರ್ಶನದಲ್ಲಿ ಸಂಘಕ್ಕೆ ಪುನಶ್ಚೇತನ ಕಲ್ಪಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ್ ಹೇಳಿದರು.

ಶುಕ್ರವಾರ ನಡೆದ ಟಿಎಪಿಸಿಎಂಎಸ್‌ನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದಲ್ಲಿ ಕಡಿಮೆ ಹಣವಿದೆ. ಇದರಿಂದ ಗೊಬ್ಬರ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ. ಶಹಾಪುರ ಮತ್ತು ಯಾದಗಿರಿಗಳಲ್ಲಿ ಒಕ್ಕೂಟ ವ್ಯವಸ್ಥೆ ಇದೆ. ಹೀಗಾಗಿ ಅಲ್ಲಿ ಗೊಬ್ಬರ ತೊಂದರೆ ಅಷ್ಟಾಗಿ ಇಲ್ಲ. ಇಲ್ಲಿಯೂ ಒಕ್ಕೂಟ ವ್ಯವಸ್ಥೆ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಇದ್ದ ಅವಕಾಶದಲ್ಲೆ ರೈತರಿಗೆ ಸಮರ್ಪಕ ಗೊಬ್ಬರ ಪೂರೈಸಲು ವ್ಯವಸ್ಥೆ ಮಾಡಿದ್ದೇವೆ ಎಂದು ವಿವರಣೆ ನೀಡಿದರು.

ಮುಂದಿನ ದಿನಗಳಲ್ಲಿ ಶೇರುದಾರರ ಸಂಖ್ಯೆಯನ್ನು ಹೆಚ್ಚಿಸಿ 10 ಲಕ್ಷಕ್ಕೂ ಅಧಿಕ ಶೇರು ಸಂಗ್ರಹಣೆಯ ಗುರಿ ಹೊಂದಲಾಗಿದೆ. ಸಂಘಕ್ಕೆ ಸೂಕ್ತ ನಿವೇಶನ ದೊರಕಿಸಿಕೊಡಲು ಸಚಿವ ರಾಜೂಗೌಡ ಅವರಲ್ಲಿ ಮನವಿ ಸಲ್ಲಿಸಲಾಗುವುದು. ಸದ್ಯ ಸಂಘ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಲಿದೆ. ಕಳೆದ ವರ್ಷ 800 ಕ್ವಿಂಟಲ್ ತೊಗರಿಯನ್ನು ಬೆಂಬಲ ಬೆಲೆಗೆ ಖರೀದಿಸಿದ್ದೇವೆ. 2010-11ನೇ ಸಾಲಿನಲ್ಲಿ 1.6 ಕೋಟಿ ರೂಪಾಯಿ ವ್ಯಾಪಾರ ವಹಿವಾಟು ನಡೆಸಲಾಗಿದೆ. ರೂ. 3.32 ಲಕ್ಷ ನಿವ್ವಳ ಲಾಭ ಗಳಿಸಲಾಗಿದೆ ಎಂದು ನುಡಿದರು.

ಮುಖ್ಯ ಅತಿಥಿಯಾಗಿದ್ದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಕೆಂಚಪ್ಪ ನಗನೂರ್ ಮಾತನಾಡಿ, ಹಲವಾರು ವರ್ಷಗಳಿಂದ ನಿಷ್ಕ್ರೀಯ ಗೊಂಡಿದ್ದ ಸಂಘವನ್ನು ಫಿನಿಕ್ಸ್‌ನಂತೆ ಅಲ್ಪಾವಧಿಯಲ್ಲಿ ಬೆಳೆಸಿರುವುದು ಶ್ಲಾಘನೀಯ. ಹೆಚ್ಚು ಷೇರುಗಳನ್ನು ಕ್ರೋಢಿ ೀಕರಿಸಿ ಇದರಿಂದ ವಹಿವಾಟಿಗೆ ಅನುಕೂಲವಾಗುತ್ತದೆ. ಒಕ್ಟೂಟ ರಚನೆ ಮಾಡಿ ಎಂದು ಸಲಹೆ ನೀಡಿದರು.

ಸಂಘದ ಕಾರ್ಯದರ್ಶಿ ಪರಶುರಾಮ, ಜಮಾ ಖರ್ಚು, ವ್ಯಾಪಾರ ವಹಿವಾಟು, ಲಾಭ ಹಾನಿ, ಅಢಾವೆ ಪತ್ರಿಕೆ ವಿವರಗಳನ್ನು ಸಭೆಗೆ ನೀಡಿದರು.

ನಿರ್ದೆಶಕರಾದ ಯಮನಪ್ಪ ಪಾಟೀಲ, ತಿಪ್ಪಣ್ಣ ಚಂದಾ, ವೀರಣ್ಣ ಹಯ್ಯಾಳ, ಬಸವರಾಜ ಐಕೂರ್, ಯಲ್ಲಪ್ಪಗೌಡ ನಾಯ್ಕಲ್, ರಾಯಪ್ಪ ಕಡೇಚೂರ್, ನಂದಕುಮಾರ ಬಾಂಬೆಕರ್, ದೇವಮ್ಮ ಬೊಮ್ಮಗುಡ್ಡ, ಮಲ್ಲನಗೌಡ ಗುಳಬಾಳ ಮತ್ತಿತರರು ಉಪಸ್ಥಿತರಿದ್ದರು.
ಸಹ ಕಾರ್ಯದರ್ಶಿ ಶಿವರುದ್ರ ಉಳ್ಳಿ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.