ADVERTISEMENT

ತೊಗರಿ ಖರೀದಿ: ಮಧ್ಯವರ್ತಿಗಳ ಹಾವಳಿ ತಡೆಯಿರಿ

ನರೋಣಾ: ತೊಗರಿ ಬೆಳೆ ಕ್ಷೇತ್ರೋತ್ಸವದಲ್ಲಿ ಸಿದ್ದರಾಮಪ್ಪ ಪಾಟೀಲ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2017, 10:56 IST
Last Updated 11 ಡಿಸೆಂಬರ್ 2017, 10:56 IST
ಆಳಂದ ತಾಲ್ಲೂಕಿನ ನರೋಣಾದ ರೈತ ಬಸವರಾಜ ಚಕ್ಕಿ ಅವರ ಹೊಲದಲ್ಲಿ ಶನಿವಾರ ನಡೆದ ತೊಗರಿ ಬೆಳೆ ಕ್ಷೇತ್ರೋತ್ಸವದಲ್ಲಿ ಕೃಷಿತಜ್ಞ ಎಸ್.ಎ.ಪಾಟೀಲ ಅವರು ರೈತರಿಂದ ಮಾಹಿತಿ ಪಡೆದರು
ಆಳಂದ ತಾಲ್ಲೂಕಿನ ನರೋಣಾದ ರೈತ ಬಸವರಾಜ ಚಕ್ಕಿ ಅವರ ಹೊಲದಲ್ಲಿ ಶನಿವಾರ ನಡೆದ ತೊಗರಿ ಬೆಳೆ ಕ್ಷೇತ್ರೋತ್ಸವದಲ್ಲಿ ಕೃಷಿತಜ್ಞ ಎಸ್.ಎ.ಪಾಟೀಲ ಅವರು ರೈತರಿಂದ ಮಾಹಿತಿ ಪಡೆದರು   

ಆಳಂದ: ‘ಪ್ರಸಕ್ತ ವರ್ಷದ ರೈತರ ತೊಗರಿ ಖರೀದಿಯು ಡಿಸೆಂಬರ್‌ ತಿಂಗಳಲ್ಲಿ ಆರಂಭಿಸಬೇಕು. ಕಳೆದ ವರ್ಷದಂತೆ ಖರೀದಿಯಲ್ಲಿ ಮಧ್ಯವರ್ತಿಗಳ ಹಾವಳಿ ಅಧಿಕವಾಗಲಿದೆ. ಇದನ್ನು ತಡೆಗಟ್ಟಲು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ದರಾಮಪ್ಪ ಪಾಟೀಲ ಧಂಗಾಪುರ ಹೇಳಿದರು.

ತಾಲ್ಲೂಕಿನ ನರೋಣಾ ಗ್ರಾಮದ ರೈತ ಬಸವರಾಜ ಚಕ್ಕಿ ಅವರ ಹೊಲದಲ್ಲಿ ಶನಿವಾರ ಕೃಷಿ ಇಲಾಖೆಯಿಂದ ನಡೆದ ತೊಗರಿ ಬೆಳೆ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.

‘ಈ ಹಿಂದೆ ವ್ಯವಸಾಯ ಸೇವಾ ಸಂಘದವರೂ ಖರೀದಿಯಲ್ಲಿ ಹಣ ವಸೂಲಿ, ರೈತರಿಗೆ ತಾರತಮ್ಯ ಮಾಡಿರುವುದು ನಡೆದಿದೆ. ಕಾರಣ ಕೃಷಿ ಮತ್ತು ಕಂದಾಯ ಇಲಾಖೆ ಮೂಲಕ ಆಯಾ ಗ್ರಾಮದ ರೈತರ ತೊಗರಿ ಬೆಳೆ ಹೆಸರು ನೋಂದಣಿ, ದಾಖಲೆ ಪತ್ರ ಪಡೆದು ಖರೀದಿ ಕೇಂದ್ರಗಳಿಗೆ ಕಳು ಹಿಸುವ ವ್ಯವಸ್ಥೆ ಮಾಡಬೇಕು’ ಎಂದರು.

ADVERTISEMENT

ವಿಶ್ರಾಂತ ಕುಲಪತಿ ಎಸ್.ಎ. ಪಾಟೀಲ ಮಾತನಾಡಿ, ‘ರೈತರು ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಮುಂದುವರಿಸುವುದು ಲಾಭದಾಯಕ ಇಲ್ಲ. ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯುವುದಕ್ಕೆ ಆಧುನಿಕ ಕೃಷಿ ಪದ್ಧತಿ ಮತ್ತು ಸರ್ಕಾರದ ಸೌಲಭ್ಯಗಳ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಜಂಟಿ ಕೃಷಿ ನಿರ್ದೆಶಕ ಜಿಲಾನಿ ಮೋಕಾಶಿ ಮಾತನಾಡಿ, ‘ರೈತರು ಹೊಸ ಕೃಷಿ ಪದ್ಧತಿ, ಬೆಳೆ, ಬಿತ್ತನೆ ಜೊತೆಗೆ ಸರ್ಕಾರದ ಸೌಲಭ್ಯಗಳ ಬಗೆಗೆ ತಿಳಿವಳಿಕೆ ಪಡೆಯಬೇಕು. ಪ್ರತಿಯೊಬ್ಬ ರೈತನೂ ಮಣ್ಣಿನ ಆರೋಗ್ಯ ಹಾಗೂ ನೀರಿನ ಸದ್ಬಳಕೆ, ಸಂರಕ್ಷಣೆ ಕುರಿತು ಕಾಳಜಿವಹಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.