ADVERTISEMENT

ದಕ್ಷಿಣದ ಅರಸರು ರಣ ಕಹಳೆ ಊದಿದ ವೀರರು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2012, 8:15 IST
Last Updated 9 ಫೆಬ್ರುವರಿ 2012, 8:15 IST

ಸುರಪುರ: (ಶಹೀದ್ ತಜ್ದೀಕ್ ಹುಸೇನ್ ವೇದಿಕೆ) 1857ರ ಆಂಗ್ಲರ ವಿರುದ್ಧ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ರಣ ಕಹಳೆ ಊದಿದ ಮೊದಲ ಅರಸರು ದಕ್ಷಿಣ ಭಾರತದವರು.  ನಮ್ಮ ಸಂಸ್ಕೃತಿಯ ಮೇಲೆ ವಿದೇಶಿ ಸಂಸ್ಕೃತಿಯ ಆಕ್ರಮಣವನ್ನು ತಡೆಗಟ್ಟಿದ ಶ್ರೇಯಸ್ಸಿಗೆ ಪಾತ್ರರಾದವರು. ಇದರ ನೇತೃತ್ವವನ್ನು ಸುರಪುರದ ಗೋಸಲ ವಂಶದ ಅರಸು ನಾಲ್ವಡಿ ರಾಜಾ ವೆಂಕಟಪ್ಪನಾಯಕ್ ವಹಿಸಿದ್ದರು ಎಂದು ಆನೆಗುಂದಿ ಸಂಸ್ಥಾನದ ರಾಣಿ ಲಲಿತಾದೇವಿ ಶ್ರೀರಂಗದೇವರಾಯಲು ಇತಿಹಾಸದ ಪುಟಗಳನ್ನು ಬಿಚ್ಚಿಟ್ಟರು.

ಭೀಮರಾಯನಗುಡಿಯ ಸುರಪುರ ಇತಿಹಾಸ ಸಂಶೋಧನಾ ಕೇಂದ್ರ, ನಾಲ್ವಡಿ ರಾಜಾ ವೆಂಕಟಪ್ಪನಾಯಕ್ ಯುವ ಸೇನೆ ಮತ್ತು ರುಕ್ಮಾಪುರ ಗ್ರಾಮ ಸುಧಾರಣಾ ಸಮಿತಿ ಇಲ್ಲಿನ ಅರಮನೆ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಪೂರ್ವದಲ್ಲಿ ಅಲ್ಲಿನ ಅರಸರು ಆನೆಗುಂದಿಯನ್ನು ತಮ್ಮ ಆಡಳಿತ ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡಿದ್ದರು. ವಿಜಯನಗರ ಸಂಸ್ಥಾನಕ್ಕೆ ಆನೆಗುಂದಿ ಸಂಸ್ಥಾನವೇ ಮಾತೃಭೂಮಿಯಾಗಿದೆ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆನೆಗುಂದಿ ಅರಸರು ಪಾತ್ರವೂ ಬಹುಮುಖ್ಯವಾಗಿದೆ ಎಂದು ವಿವರಿಸಿದರು.

ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ವಿಜಯೋತ್ಸವವೆಂದೂ ಇಲ್ಲಿ ಪ್ರತಿ ವರ್ಷ ಆಚರಿಸುತ್ತಿರುವುದು ಔಚಿತ್ಯಪೂರ್ಣವಾಗಿದೆ. ದಕ್ಷಿಣ ಭಾರತದ ವಿವಿಧ ಸಂಸ್ಥಾನಗಳ ಅರಸರಿಗೆ ಇಲ್ಲಿ ಸನ್ಮಾನ ದೊರಕುತ್ತಿರುವುದು ಅವರ ಪೂರ್ವಜರು ಮಾತೃಭೂಮಿಗೆ ಸಲ್ಲಿಸಿದ ಸೇವೆಯ ಪ್ರತೀಕವಾಗಿದೆ.
 
ಸರ್ಕಾರವೇ ಸ್ವಾತಂತ್ರ್ಯ ಸಂಗ್ರಾಮದ ವಿಜಯೋತ್ಸವ ಆಚರಿಸಿದರೆ ಹೆಚ್ಚು ಅರ್ಥಪೂರ್ಣವಾಗಿರುತ್ತದೆ ಎಂದು ಪ್ರತಿಪಾದಿಸಿದರು.ಇಲ್ಲಿನ ಗೋಸಲ ವಂಶಸ್ಥ ರಾಜಾ ವೆಂಕಟಪ್ಪನಾಯಕ್ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.