ADVERTISEMENT

ನಾರಾಯಣಪುರ: ಕಾಲುವೆ ನವೀಕರಣ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2012, 10:35 IST
Last Updated 14 ಏಪ್ರಿಲ್ 2012, 10:35 IST

ಕೆಂಭಾವಿ: ಜಿಲ್ಲೆಯ ರೈತರ ಜೀವನಾಡಿಯಾಗಿರುವ ನಾರಾಯಣಪುರ ಎಡದಂಡೆ ಕಾಲುವೆಗೆ ಕೊನೆಗೂ ನವೀಕರಣ ಭಾಗ್ಯ ಕೂಡಿಬಂದಿದ್ದು, ಕಾಮಗಾರಿ ಭರದಿಂದ ಆರಂಭವಾಗಿದೆ.

ಎಡದಂಡೆ ಕಾಲುವೆ ಪದೇ ಪದೇ ಕುಸಿಯುತ್ತಿರುವುದರಿಂದ ಯಾದಗಿರಿ, ಗುಲ್ಬರ್ಗ ಮತ್ತು ವಿಜಾಪುರ ಜಿಲ್ಲೆಗಳ ರೈತರು ಸಂಕಷ್ಟ ಅನುಭವಿಸುವಂತಾಗಿತ್ತು. 40 ರಿಂದ 73ನೇ ಕಿ.ಮೀವರೆಗೆ ಕಾಲುವೆಯಲ್ಲಿ ಕುಸಿತ ಉಂಟಾಗುತ್ತಿದ್ದುದರಿಂದ ಸಮರ್ಪಕ ಪ್ರಮಾಣದಲ್ಲಿ ನೀರು ಹರಿಸುವುದು ಸಾಧ್ಯವಾಗುತ್ತಿರಲಿಲ್ಲ. ಪ್ರತಿ ವರ್ಷ ತಾತ್ಕಾಲಿಕ ದುರಸ್ತಿಗೆ ಲಕ್ಷಾಂತರ ಹಣ ಖರ್ಚು ಮಾಡಿದರೂ, ಅದರಿಂದ ಪರಿಹಾರ ಮಾತ್ರ ಸಿಕ್ಕಿರಲಿಲ್ಲ.

ಇದನ್ನು ನಿವಾರಿಸಲು ಶಾಶ್ವತ ದುರಸ್ತಿ ಮಾಡುವಂತೆ ಒತ್ತಾಯಗಳು ಹೆಚ್ಚಾಗಿದ್ದವು. ಅದರ ಪರಿಣಾಮವಾಗಿ ಇದೀಗ ಮುಖ್ಯ ಕಾಲುವೆಯ ನವೀಕರಣಕ್ಕಾಗಿ ನವೀಕರಣಕ್ಕಾಗಿ ರೂ. 193 ಕೋಟಿ ವೆಚ್ಚದ ಟೆಂಡರ್ ಕರೆದಿದ್ದು. ಕಾಮಗಾರಿ ಆರಂಭಗೊಂಡಿದೆ.

ಈ ಕಾಮಗಾರಿಯಲ್ಲಿ ಒಟ್ಟು 25 ಕಿ.ಮೀ ಉದ್ದದ ಕಾಲುವೆ ನವೀಕರಣ ಮಾಡಲಾಗುತ್ತಿದೆ. 41 ಕಿ.ಮೀ ನಿಂದ 54 ಕಿ.ಮೀ ಹಾಗೂ 61 ಕಿ.ಮೀ.ನಿಂದ 73 ಕಿ.ಮೀ ವರೆಗೆ ಲೈನಿಂಗ್ ಕಾಮಗಾರಿ ಕೈಗೊಳ್ಳಲಾಗಿದೆ. ಮೂರು ಪ್ಯಾಕೇಜ್‌ಗಳಲ್ಲಿ ಟೆಂಡರ್ ಕರೆಯಲಾಗಿದ್ದು, 90 ದಿನಗಳಲ್ಲಿ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರಿಗೆ ಗಡುವು ನೀಡಲಾಗಿದೆ. ಹೀಗಾಗಿ ಹಗಲು ರಾತ್ರಿ ಎನ್ನದೇ ನವೀಕರಣದ ಕಾರ್ಯ ನಡೆಯುತ್ತಿದೆ. ಕಾಮಗಾರಿಗೆ ಬೇಕಾಗಿರುವ ಮರುಳು, ಕಡಿ, ಸಿಮೆಂಟ್‌ಗಳನ್ನು ರಾಶಿಗಟ್ಟಲೇ ಅಲ್ಲಲ್ಲಿ ದಾಸ್ತಾನು ಮಾಡಲಾಗಿದ್ದು, ಕಾಲುವೆಯಲ್ಲಿ ಎಲ್ಲೆಂದರಲ್ಲಿ ಯಂತ್ರಗಳದ್ದೇ ದರಬಾರು ಆರಂಭವಾಗಿದೆ. 

78 ಕಿ.ಮೀ ಉದ್ದದ ನಾರಾಯಣಪುರ ಎಡದಂಡೆ ಕಾಲುವೆ ಕೆಂಭಾವಿ ಬಳಿ ವಿಂಗಡನೆ ಆಗುತ್ತದೆ. ಇಲ್ಲಿಂದ ಶಹಾಪುರ ಶಾಖಾ ಕಾಲುವೆ, ಜೇವರ್ಗಿ ಶಾಖಾ ಕಾಲುವೆ, ಮೂಡಬೂಳ ಶಾಖಾ ಕಾಲುವೆ, ಇಂಡಿ ಶಾಖಾ ಕಾಲುವೆ ಮತ್ತು ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಗಳಿಗೆ ನೀರು ಹರಿಸಲಾಗುತ್ತದೆ.

ಈ ಎಲ್ಲ ಕಾಲುವೆಗಳಿಗೆ ಕೊನೆಯ ಭಾಗದ ರೈತರಿಗೆ ನೀರು ತಲುಪಬೇಕಾದರೆ, ಎಡದಂಡೆ ನಾಲೆಯಲ್ಲಿ ಕನಿಷ್ಠ 10 ಸಾವಿರ ಕ್ಯೂಸೆಕ್ ನೀರು ಹರಿಸಬೇಕು. ಸುಮಾರು 6 ಲಕ್ಷ ಹೆಕ್ಟೆರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯುತ್ತದೆ.
1983 ರಿಂದ ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ನೀರು ಹರಿಸುವ ಕೆಲಸ ಪ್ರಾರಂಭವಾಯಿತು. ಪ್ರತಿ ವರ್ಷ ಕಾಲುವೆಯ 40 ರಿಂದ 73 ಕಿ.ಮೀ ವರೆಗೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಲೇ ಇವೆ. ಕಾಲುವೆಯಲ್ಲಿ ಬಿರುಕು ಬಿಟ್ಟರೆ, ಎಲ್ಲಿಯೂ ನೀರು ಹರಿಯುವುದೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಆದರೆ ಕಾಲುವೆ ಶಿಥಿಲವಾಗಿದ್ದರಿಂದ ಇದುವರೆಗೆ ಕೇವಲ 6 ಸಾವಿರ ಕ್ಯೂಸೆಕ್ ಮಾತ್ರ ನೀರನ್ನು ಕಾಲುವೆಗೆ ಬಿಡಲಾಗುತ್ತಿತ್ತು.

ಇದೆಲ್ಲದರ ಪರಿಣಾಮದ ನಮ್ಮ ರೈತರಿಗೆ ಸಿಗಬೇಕಾದ ನೀರು ಆಂಧ್ರಪ್ರದೇಶಕ್ಕೆ ಹೋಗುತ್ತಿತ್ತು.
ಸಚಿವರ ಭೇಟಿ: ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ನರಸಿಂಹ ನಾಯಕ (ರಾಜೂಗೌಡ), ಮಣ್ಣಿನ ತಜ್ಞ ಕೆ.ಸುಬ್ಬಾರಾವ ಭೇಟಿ ನೀಡಿ ಪರಿಶೀಲಿಸಿದರು.

ಎಡದಂಡೆ ನಾಲೆಗೆ ಈ ವರ್ಷ ಬೇಸಿಗೆ ಬೆಳೆಗೆ ನೀರು ಬಿಡದಿದ್ದರಿಂದ ನೀರಾವರಿ ಪ್ರದೇಶದಲ್ಲಿ ಬತ್ತದ ನಾಟಿ ಮಾಡಿಲ್ಲ. ಒಂದೆಡೆ ಬರಗಾಲ ಇನ್ನೊಂದೆಡೆ ಕಾಲುವೆಗೆ ನೀರಿಲ್ಲ.

ಹೀಗಾಗಿ ರೈತರು ಆರ್ಥಿಕ ಸಂಕಷ್ಟದಲ್ಲಿದ್ದು, 90 ದಿನಗಳಲ್ಲಿ ಕಾಮಗಾರಿ ಮುಗಿದು ಮುಂದಿನ ಬೆಳೆಗೆ ನೀರು ಬರಲಿದೆಯೇ ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ.

ಕಾಲುವೆಯ ನವೀಕರಣ ಮಾಡುತ್ತಿರುವುದು ಒಳ್ಳೆಯದು. ಆದರೆ 90 ದಿನಗಳಲ್ಲಿ ಮುಗಿಸುವ ಭರಾಟೆಯಲ್ಲಿ ಕಳಪೆ ಕಾಮಗಾರಿ ಆಗದಿರಲಿ. ಒಳ್ಳೆಯ ಗುಣಮಟ್ಟದ ಕಾಮಗಾರಿ ಮಾಡುವ ಮೂಲಕ ಈ ಭಾಗದ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು. ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದು ಕಾಮಗಾರಿಯನ್ನು ಮಾಡಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರೂ ಈ ಬಗ್ಗೆ ವಿಶೇಷ ಗಮನ ನೀಡಬೇಕು ಎಂದು ರೈತರು ಒತ್ತಾಯಿಸುತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.