ADVERTISEMENT

‘ನೀರು ಕೊಡದ ಶಾಸಕರಿಗೆ ಅಧಿಕಾರ ಏಕೆ’

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 10:44 IST
Last Updated 13 ಮಾರ್ಚ್ 2018, 10:44 IST
ಸುರಪುರದ ರಂಗಂಪೇಟೆಯಲ್ಲಿ ಭಾನುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ರಾಜೂಗೌಡ ಮಾತನಾಡಿದರು
ಸುರಪುರದ ರಂಗಂಪೇಟೆಯಲ್ಲಿ ಭಾನುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ರಾಜೂಗೌಡ ಮಾತನಾಡಿದರು   

ಸುರಪುರ: ‘ನಗರಕ್ಕೆ ತಿಂಗಳಿಗೊಮ್ಮೆ ನೀರು ಸರಬರಾಜು ಅಗುತ್ತಿದೆ. ಬೇಸಿಗೆ ಆರಂಭದಲ್ಲೆ ಹೀಗಾದರೆ ಕಡು ಬೇಸಿಗೆಯಲ್ಲಿ ಜನರ ಪಾಡೇನು. ಕನಿಷ್ಠ ಕುಡಿವ ನೀರು ಕೊಡದಿದ್ದರೆ ಅಧಿಕಾರದಲ್ಲಿ ಏಕೀರಬೇಕು?’ ಎಂದು ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ರಾಜೂಗೌಡ ಶಾಸಕ ರಾಜಾ ವೆಂಕಟಪ್ಪನಾಯಕ ವಿರುದ್ಧ ವಾಗ್ದಾಳಿ ನಡೆಸಿದರು.

ರಂಗಂಪೇಟೆಯಲ್ಲಿ ಭಾನುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ನನ್ನ ಅಧಿಕಾರವಧಿಯಲ್ಲಿ ತಿಂಗಳಿಗೆ ಐದಾರು ಬಾರಿ ನೀರು ಕೊಡಲಾಗುತ್ತಿತ್ತು. ಮುಂಜಾಗ್ರತಾ ಕ್ರಮವಾಗಿ ಬೇಸಿಗೆಯಲ್ಲಿ ನದಿಗೆ ರಿಂಗ್‌ಬಾಂಡ್‌ ಹಾಕಿ ನೀರು ಸಂಗ್ರಹಿಸಿಡಲಾಗುತ್ತಿತ್ತು’ ಎಂದು ದೂರಿದರು.

ADVERTISEMENT

‘ಬಿಜೆಪಿ ಅಲ್ಪಸಂಖ್ಯಾತರ, ದಲಿತರ ವಿರೋಧಿ ಎಂದು ಬಿಂಬಿಸುತ್ತಿರುವ ಶಾಸಕರೇ ಅವರಿಗಾಗಿ ನೀವೇನು ಮಾಡಿದ್ದೀರಿ, ಎಷ್ಟು ಅನು
ದಾನ ನೀಡಿದ್ದೀರಿ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ’ ಎಂದು ವಾಗ್ದಾಳಿ ನಡೆಸಿದರು.

‘ಶಾಸಕರು ಉದ್ಘಾಟಿಸುತ್ತಿರುವ ಶಾದಿಮಹಲ್‌, ಹಸನಾಪುರದ ಈದ್ಗಾ ಅಭಿವೃದ್ದಿ ಯಾರ ಕೊಡುಗೆ, ಬುದ್ಧ ವಿಹಾರದ ಅಭಿವೃದ್ದಿ, ಕಲ್ಯಾಣ ಮಂಟಪ, ಮಹರ್ಷಿ ವಾಲ್ಮೀಕಿ ಭವನಕ್ಕೆ ಅನುದಾನ ನೀಡಿದ್ದು ಯಾರು’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ನಗರಸಭೆ ಸದಸ್ಯ ಅಫ್ಸರ್‌ ಹುಸೇನ್ ದಿಲ್‌ದಾರ್‌ ಮಾತನಾಡಿ, ‘ಕಾಂಗ್ರೆಸ್ ಪಕ್ಷದಲ್ಲಿ ಉಸಿರು ಗಟ್ಟುವ ವಾತಾವರಣವಿದೆ. ನಗರಸಭೆ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಸಾಕಷ್ಟು ನೋವು ಅನುಭವಿಸಿದ್ದೇನೆ. ಅಲ್ಲಿ ಅನುದಾನ ಕೊಳ್ಳೆ ಹೊಡೆಯುವ ಲೆಕ್ಕಚಾರ ನಡೆಯುತ್ತದೆ. ಇದರಿಂದ ಬೇಸತ್ತು ಪಕ್ಷ ತೊರೆಯಬೇಕಾಯಿತು’ ಎಂದರು.

200ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು.

ಮುಖಂಡರಾದ ರಾಜಾ ಹಣಮಪ್ಪ ನಾಯಕ ತಾತಾ, ಯಲ್ಲಪ್ಪ ಕುರುಕುಂದಿ, ಎಚ್.ಸಿ, ಪಾಟೀಲ, ಬಸವರಾಜಸ್ವಾಮಿ ಸ್ಥಾವರಮಠ, ಸಂಗನಗೌಡ ವಜ್ಜಲ್, ಸಲೀಂಸಾಬ ವರ್ತಿ, ದುರ್ಗಪ್ಪ ಗೋಗಿಕರ್, ಚಂದ್ರಶೇಖರ ಇದ್ದರು. ಇದಕ್ಕೂ ಮೊದಲು ಯುವಕರಿಂದ ಬೈಕ್ ರ‍್ಯಾಲಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.